ಸಂಪದವು ದೊರೆತಾಗ ಅಹಮಿಕೆಯು ತರವಲ್ಲ
ಸೊಂಪಾದ ಜೀವನವ ನಡೆಸುವುದು ಲೇಸು |
ಗುಂಪಿನಲಿ ಬಡವರನು ಕರೆದು ದಾನವ ಮಾಡು
ಇಂಪಾದ ಮಾತಿನಲಿ - ಪುಟ್ಟಕಂದ || ೧ ||
ಕೊರಗದಿರು ಜೀವನದಿ ಸಂಪದವು ದೊರಕದಿರೆ
ವರಧೈರ್ಯ ನಿನಗಿರಲಿ ದುಡಿದು ಗಳಿಸಲಿಕೆ |
ನೆರೆನಂಬಿ ದೇವರನು ದುಡಿಮೆಯಲಿ ತೊಡಗಿದರೆ
ಸಿರಿಲಕುಮಿಯೊಲಿಯುವಳು - ಪುಟ್ಟಕಂದ || ೨ ||
ಗರ್ವದಲಿ ಬೀಗದಿರು ಧನಕನಕ ದೊರೆತಾಗ
ಸರ್ವರನು ಆದರಿಸಿ ಗೌರವದಿ ಬದುಕು |
ಪರ್ವಕಾಲದಿ ಕರೆದು ದಾನವನು ಮಾಡಿದರೆ
ಸರ್ವೇಶನೊಲಿಯುವನು - ಪುಟ್ಟಕಂದ || ೩ ||
ಕೊರಗಿದರೆ ಜೀವನದಿ ಮನಕೆ ನೆಮ್ಮದಿಯಿರದು
ಬರಿದೆ ಕುಳಿತಿರಲು ಭವಿತವ್ಯವೆಲ್ಲಿಹುದು |
ನರನಾಗಿ ಜನಿಸಿರಲು ಕರ್ತವ್ಯ ಬಲುಹಿರಿದು
ಧರಣಿಯಲಿ ಮನುಜರಿಗೆ - ಪುಟ್ಟಕಂದ || ೪ ||
(ಇಂದಿನ ಶ್ರೀ ಸೂಕ್ತಿಯ ಪ್ರಭಾವದಿಂದ ರಚಿಸಿದ ಛಂದೋಬದ್ಧ ಆಶು ಮುಕ್ತಕಗಳು)
- ವಿ.ಬಿ.ಕುಳಮರ್ವ , ಕುಂಬ್ಳೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ