|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಅತ್ಯಂತ ಉತ್ಕೃಷ್ಟವಾದದ್ದು: ಸುಬ್ರಹ್ಮಣ್ಯ ನಟ್ಟೋಜ

ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಅತ್ಯಂತ ಉತ್ಕೃಷ್ಟವಾದದ್ದು: ಸುಬ್ರಹ್ಮಣ್ಯ ನಟ್ಟೋಜ

 ಅಂಬಿಕಾ ಪದವಿಪೂರ್ವ ವಿದ್ಯಾಲಯಗಳಲ್ಲಿ ನೈತಿಕ ಶಿಕ್ಷಣ ಉಪನ್ಯಾಸ




ಪುತ್ತೂರು: ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಅತ್ಯಂತ ಉತ್ಕೃಷ್ಟವಾದದ್ದು. ಇಂತಹ ಶ್ರೇಷ್ಟತಮ ಸಂಸ್ಕೃತಿಯನ್ನು ಉಳಿಸಿ ಬೆಳೆಯುವ ಕಾರ್ಯವನ್ನು ಯುವಸಮೂಹ ಮಾಡಬೇಕಿದೆ. ಪಾಶ್ಚಾತ್ಯ ವಿಚಾರಧಾರೆಗಳೆಡೆಗೆ ಮನಸೋಲದೆ ನಮ್ಮತನವನ್ನು ಕಾಯ್ದುಕೊಂಡು ಮುಂದುವರಿಯಬೇಕು. ಆಗ ದೇಶ ಬೆಳೆಯುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದಲ್ಲಿ ‘ನೈತಿಕ ಶಿಕ್ಷಣ’ ವಿಷಯದಡಿ ಬುಧವಾರ ವಿಶೇಷ ಉಪನ್ಯಾಸ ನೀಡಿದರು.


ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ ವಿವಿಧ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಹಾಗೂ ಭಾರತೀಯರಾದ ನಾವು ಹೊರಗಿನ ಶತ್ರುಗಳಿಗೆ ತಲೆತಗ್ಗಿಸದೆ ಅವರನ್ನು ಕೆಚ್ಚೆದೆಯಿಂದ ಎದುರಿಸುವ ಧೈರ್ಯ, ಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು. ನಮ್ಮ ದೇಶ ಭಗವಾನ್ ಶ್ರೀಕೃಷ್ಣನಿಗೆ ಜನ್ಮವಿತ್ತ ಪುಣ್ಯಭೂಮಿ. ಶ್ರೀಕೃಷ್ಣನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಉನ್ನತ ಮಟ್ಟಕ್ಕೇರಿಸಿಕೊಳ್ಳಬೇಕು. ಭಗವದ್ಗೀತೆ ಎಲ್ಲಾ ಸ್ತರದ ಜನರ ಜೀವನವನ್ನು ಸುಧಾರಿಸುವಂತ ಮೌಲ್ಯಗಳನ್ನು ಒಳಗೊಂಡಿದೆ ಎಂದು ನುಡಿದರು.


ನೆಲ್ಲಿಕಟ್ಟೆಯಲ್ಲಿ ಉಪನ್ಯಾಸ: ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ‘ನೈತಿಕ ಶಿಕ್ಷಣ’ ವಿಷಯದಡಿ ಭಗವದ್ಗೀತೆಯ ಬಗೆಗೆ ಉಪನ್ಯಾಸ ನೀಡಿದ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಸಂಸ್ಕೃತಿ-ಸಂಸ್ಕಾರ ರಹಿತ ಶಿಕ್ಷಣ ವಿದ್ಯಾರ್ಥಿಗಳನ್ನು ದಾರಿತಪ್ಪಿಸಿ ಅತಂತ್ರ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಅಸಂಸ್ಕೃತ ವಿದ್ಯಾರ್ಜನೆ ನಮ್ಮನ್ನು ಅಧಃಪತನಕ್ಕೆ ಇಳಿಸುತ್ತದೆ. ಗೆಲ್ಲಬೇಕೆಂಬ ಆಸೆ ಇರುವವರು ಸೋಲನ್ನು ಓಡಿಸುವ ಮನೋಬಲವನ್ನು ಹೊಂದಿರಬೇಕು. ಅನಪೇಕ್ಷಿತ ವಿಚಾರಗಳನ್ನು ಮನಸ್ಸಿನಿಂದ ತೆಗೆದು ಹಾಕಿ, ಬೇಕಾದ ಆಚಾರ-ವಿಚಾರಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.


ಭಗವದ್ಗೀತೆಯ ನೆಲೆಗಟ್ಟಿನಲ್ಲಿ ಮನಸ್ಸಿನ ನಿಯಂತ್ರಣ ಖಂಡಿತಕ್ಕೂ ಸಾಧ್ಯವಿದೆ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಗುರಿ ಸಾಧಿಸುವ ಒಂದೇ ಒಂದು ಸಾಧನ ಎಂದರೆ ಅದು ಭಗವದ್ಗೀತೆ. ಚಂಚಲ ಮನಸ್ಸನ್ನು ನಿಶ್ಚಲವಾಗಿಸಲು ಬೇಕಾದ ತಂತ್ರಗಳನ್ನು ಭಗವದ್ಗೀತೆ ಕಲಿಸುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರದಂತಹ ವಿಷಯಗಳ ಜತೆಗೆ ಗೀತೆಯನ್ನೂ ಅಧ್ಯಯನ ಮಾಡಿದರೆ ಮನಸ್ಸಿನ ಸದೃಢತೆಗೆ ಅದು ಸಹಕಾರಿಯೆನಿಸುತ್ತದೆ ಎಂದು ನುಡಿದರು.


ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯ ಸುರೇಶ್ ಶೆಟ್ಟಿ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ, ಉಪನ್ಯಾಸಕ ಗಣೇಶ್ ಪ್ರಸಾದ್, ಬೋಧಕ ಮತ್ತು ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



0 Comments

Post a Comment

Post a Comment (0)

Previous Post Next Post