ನುಡಿನಮನ: ಉಪ್ಪಂಗಳ ರಾಮ ಭಟ್ಟರೆಂಬ ಉದ್ದಾಮಪಂಡಿತರ ಅಕಲಂಕ ಹೆಜ್ಜೆಗುರುತು

Upayuktha
0


ಉಪ್ಪಂಗಳ ರಾಮಭಟ್ಟರು ವಿಧಿವಶರಾದರಂತೆ.

ಉಡುಪಿಯ ಸಾಹಿತ್ಯ ಮತ್ತು ಸಂಶೋಧನೆಯ ಹೆಮ್ಮರಗಳು ಒಂದೊಂದಾಗಿ ಉರುಳಿ ಹೋಗುತ್ತಿವೆ. ಈಶ್ವರಯ್ಯನವರು, ಬನ್ನಂಜೆಯವರು, ಉದ್ಯಾವರರು, ಉಮಾಪತಿ ಹೊಳ್ಳರು.... ಆ ಸಾಲಿನಲ್ಲಿ ಇವತ್ತು ಉಪ್ಪಂಗಳರು. ಪರ್ಯಾಯವಿಲ್ಲದ ಉದ್ದಾಮಪಂಡಿತರು. ಉಡುಪಿಯ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳಿಗೆ ಆಘಾತದ ಮೇಲೆ ಆಘಾತದಂತೆ.


ಉಪ್ಪಂಗಳರೆಂದರೆ ಯಾವತ್ತಿಗೂ ಆಹ್ಲಾದ ಕೊಡುವ ಒಂದು ನೆನಪು. ಹದಿನೇಳು ವರ್ಷಗಳ ಹಿಂದೆ ಸುಹಾಸಂ ಸಭೆಯೊಂದರಲ್ಲಿ ಭಾಷಣದ ನಡುವೆ ಆನಂದವರ್ಧನನನ್ನು ಕೋಟ್ ಮಾಡಿದ್ದೆ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಉಪ್ಪಂಗಳ ರಾಮಭಟ್ಟರು ಭಟ್ಟಾಕಲಂಕನ ಬಗ್ಗೆ ಗೊತ್ತೋ ಎಂದು ಕೇಳಿದ್ದರು. ಶಬ್ದಾನುಶಾಸನ ಎಂಬ ಆತನ ಕನ್ನಡ ವ್ಯಾಕರಣ ಗ್ರಂಥದ ಬಗ್ಗೆ ಗೊತ್ತು. ನಾನದನ್ನು ಅಭ್ಯಾಸ ಮಾಡಿಲ್ಲ ಎಂದು ಒಪ್ಪಿಕೊಂಡೆ. ಮುಂದಿನ ವಾರವೇ ಉಪ್ಪಂಗಳ ರಾಮಭಟ್ಟರು ಅರೆಜೀರ್ಣವಾಗಿದ್ದ ಕನ್ನಡ ವೈಯಾಕರಣ ಭಟ್ಟಾಕಲಂಕ ಎಂಬ ತಮ್ಮ ಸಂಶೋಧನ ಪ್ರಬಂಧದ ಮುದ್ರಿತ ಪ್ರತಿಯನ್ನೂ ತಮ್ಮ ಅಕಲಂಕ ಪ್ರಕಾಶನದ ಕೆಲವು ಕೃತಿಗಳನ್ನೂ ತೆಗೆದುಕೊಂಡು ನಮ್ಮ ಮನೆಗೇ ಬಂದರು. ಹಾಗೆ ಬರುವಾಗ ಒಂದು ತೊಂಡೆಯ ಬೀಳನ್ನೂ ತಂದಿದ್ದರು. ಹದಿನೇಳು ವರ್ಷಗಳಿಂದ ಆ ತೊಂಡೆಯ ಬೀಳು ನಮ್ಮ ಕಂಪೌಂಡಿಗೆ ಹಬ್ಬಿಕೊಂಡು ಕಾಯಿಬಿಡುತ್ತಿದೆ. ಈ ಪ್ರಕರಣದ ಬಗ್ಗೆ ನಾನು ಬರೆದಿದ್ದ ಲೇಖನ "ಗರಿಕೆಯ ಹುಲ್ಲು, ತೊಂಡೆಯ ಬಳ್ಳಿ ಮತ್ತು ಉಪ್ಪಂಗಳ ಭಟ್ಟರು" ಉಪ್ಪಂಗಳರ ಅಭಿನಂದನ ಗ್ರಂಥ ಅಕಲಂಕದಲ್ಲಿದೆ.


ಮೈಸೂರು ವಿಶ್ವವಿದ್ಯಾಲಯದಿಂದ 1981ರಲ್ಲಿ ಪಿ ಎಚ್ ಡಿ ಪಡೆದಿದ್ದ ಉಪ್ಪಂಗಳರ ವಿದ್ವತ್ತು, ಪಂಡಿತ ಪರಂಪರೆಯ ಸೌಜನ್ಯ, ಆಸಕ್ತರಿಗೆ ಮಾರ್ಗದರ್ಶನ ನೀಡುವ ಉದಾರ ಸಹೃದಯತೆ ಮುಂದಿನ ತಲೆಮಾರುಗಳ ಅಧ್ಯಾಪಕರಿಗೆ ಮಾರ್ಗದರ್ಶನದಂತಿದೆ. ಅವರಿಗೆ ಸಿಕ್ಕ ಹತ್ತು ಹಲವು ಪ್ರಶಸ್ತಿಗಳಲ್ಲಿ ಮುಖ್ಯವಾದವು:


ಅವರ ಕನ್ನಡ ವೈಯಾಕರಣ ಭಟ್ಟಾಕಲಂಕ ಕೃತಿಗೆ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿತ್ತು (1986)

ಅವರ ಕವಿಮಾರ್ಗ ಕೃತಿಗೆ 1996ರಲ್ಲಿ ಕಸಾಪದ ಹಾಮಾನಾ ದತ್ತಿ ಪ್ರಶಸ್ತಿ ಲಭಿಸಿತ್ತು.

ಬಾಳನೋಟ ಮುಕ್ತಕಗಳ ಸಂಕಲನಕ್ಕೆ ೨೦೦೧ರಲ್ಲಿ ಅತ್ತಿಮಬ್ಬೆ ಪ್ರತಿಷ್ಠಾನದ ರನ್ನ ಸಾಹಿತ್ಯಪ್ರಶಸ್ತಿ ದೊರೆತಿತ್ತು.


2002ರಲ್ಲಿ ಅವರ ಕವನ ಸಂಕಲನ ’ಪುಕ್ಕದೊಳಗಿನ ಹಕ್ಕಿ’ಗೆ ಕಡೆಂಗೋಡ್ಲು ಕಾವ್ಯಪ್ರಶಸ್ತಿ ದೊರೆತಿತ್ತು. ಉಪ್ಪಂಗಳರು ಕಸಾಪದ ಮೂಲಕ ಅಕಲಂಕ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು ಅದಕ್ಕೊಂದು ದತ್ತಿಯನ್ನೂ ನೀಡಿದ್ದಾರೆ.  


ಉಪ್ಪಂಗಳರ ಮೃತ್ಯು ಸಾಹಿತ್ಯ ವಲಯಕ್ಕೆ ಮಾತ್ರವಲ್ಲ, ವೈಯಕ್ತಿಕವಾಗಿಯೂ ನನಗೆ ಮಾತುಮೀರಿದ ನಷ್ಟ. ಅವರು ನನ್ನ ಹಿರಿಯಣ್ಣನಂತಿದ್ದರು. ನಮ್ಮ ಮನೆಯಲ್ಲಿ ಜರುಗುತ್ತಿದ್ದ ನಡುಮನೆ ಕಾರ್ಯಕ್ರಮಗಳಲ್ಲಿ ಅವರು ಭಾಷಣ ಮಾಡಿದ್ದರು. ಕವಿತೆಗಳನ್ನು ಓದಿದ್ದರು. ಒಮ್ಮೆ ಸನ್ಮಾನವನ್ನೂ ಸ್ವೀಕರಿಸಿದ್ದರು.


ಸುಹಾಸಂ ವೇದಿಕೆಯಲ್ಲಿ ಅವರ ಕವನಸಂಕಲನವೊಂದು ಬಿಡುಗಡೆಯಾದಾಗ ನನ್ನಿಂದ ’ಒಂದು ಪಿರಿಯಡ್’ ಆಗುವಷ್ಟು ಟೈಮ್ ಎಲೋಟ್ ಮಾಡಿ ಭಾಷಣ ಮಾಡಿಸಿದ್ದರು.

ದೇವರ ಎದುರು ಹಚ್ಚಿಟ್ಟ ಊದುಬತ್ತಿ (ಅಗರಬತ್ತಿ) ಆರಿಹೋಗಿದೆ. ಆದರೆ ಅನನ್ಯವಾದ ಪರಿಮಳವೊಂದರ ರೂಪದಲ್ಲಿ ಉಪ್ಪಂಗಳರು ನಮ್ಮೊಡನಿದ್ದಾರೆ.


-ರಮೇಶ್ ಭಟ್ ಬೆಳಗೋಡು, ಮಣಿಪಾಲ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top