ಕನ್ನಡ ಶಾಲೆ, ವಿಶಿಷ್ಟ ಚೇತನ ಶಾಲೆಗಳ ಮಕ್ಕಳ ಅನ್ನಕ್ಕೆ ಬಿತ್ತು ಕಲ್ಲು!

Upayuktha
0

ಕಲ್ಲಡ್ಕದ ಶಾಲೆಗಳು ಮಾತ್ರವಲ್ಲ, ರಾಜ್ಯದಲ್ಲಿ 50ಕ್ಕೂ ಹೆಚ್ಚು ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದೂಟವಿಲ್ಲ 


ಸಾಂದರ್ಭಿಕ ಚಿತ್ರ


ಮಂಗಳೂರು: ರಾಜಕೀಯ ದ್ವೇಷದಿಂದ ಆರೆಸ್ಸೆಸ್ ಮುಖಂಡರ ಶಾಲೆಗೆ ಊಟ ಬಂದ್ ಮಾಡಿದ್ದರ ಪರಿಣಾಮವಿದು. ವಿಶಿಷ್ಟ ಚೇತನ ಮಕ್ಕಳ ಊಟದ ಅನುದಾನಕ್ಕೂ ಕೊಕ್!

ಉಳಿಕೆ ಅನುದಾವನ್ನು ಬಡ ದೇವಸ್ಥಾನಕ್ಕೆ ನೀಡಲು ಧಾರ್ಮಿಕ ಪರಿಷತ್ ಮುಂದಾಗಿದೆ. 


ಹೌದು ಸರಕಾರದ ಸೂಚನೆಯಂತೆ ಧಾರ್ಮಿಕ ಪರಿಷತ್ ಇಂತಹ ಕಟು ನಿರ್ಣಯ ಕೈಗೊಂಡಿದೆ. ಕಲ್ಲಡ್ಕ ಶಾಲೆಗೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಿಂದ ನೆರವು ನೀಡಲಾಗುತ್ತಿತ್ತು. ಇದೀಗ ಕಲ್ಲಡ್ಕ ಭಟ್ಟರ ಮೇಲಿನ ರಾಜಕೀಯ ದ್ವೇಷದಿಂದಾಗಿ ಉಳಿದ ಬಡ ಖಾಸಗಿ ಕನ್ನಡ ಶಾಲೆಗಳ ಮಕ್ಕಳ ಊಟದ ಅನುದಾನ ರದ್ದಾಗಲಿದೆ.  


ಏ ಶ್ರೇಣಿಯ ಕಟೀಲು ದೇವಸ್ಥಾನ ವತಿಯಿಂದಲೂ ಶಾಲೆಗಳಿಗೆ ಅನ್ನದಾನ, ಶಾಲೆಗೆ ನೆರವು ನೀಡಲಾಗುತ್ತಿದೆ. ದೇವಸ್ಥಾನದ 6 ಶಿಕ್ಷಣ ಸಂಸ್ಥೆಗಳಿವೆ. ಎಲ್ಲದಕ್ಕೂ ಊಟ ನೀಡಲಾಗುತ್ತದೆ. ಖಾಸಗಿ ಶಾಲೆಗೂ ನೀಡಲಾಗುತ್ತಿದೆ. 


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಜಿಲ್ಲೆಯ 6 ವಿಶಿಷ್ಟ ಚೇತನ ಶಾಲೆಗಳಿಗೆ ನಗದು ರೂಪದಲ್ಲಿ ಅನುದಾನ ನೀಡಲಾಗುತ್ತಿದೆ. ಇದರಲ್ಲಿ 5 ಕ್ರೈಸ್ತ ಸಂಸ್ಥೆಗಳು ಸೇರಿವೆ! ನಗದು ರೂಪದಲ್ಲಿ ಪ್ರತಿ ವಿದ್ಯಾರ್ಥಿಯ 1 ಊಟಕ್ಕೆ 10 ರೂ.ಯಂತೆ ನೀಡಲಾಗುತ್ತಿದೆ. 


ಕಳೆದ ವರ್ಷ 14.5 ಲಕ್ಷ ರೂ. ನೀಡಲಾಗಿದೆ.  ಪ್ರತಿ ತಿಂಗಳು ಹಣ ರೂಪದಲ್ಲಿ ನೀಡಲಾಗುತ್ತದೆ. ಸರಕಾರದ ಆದೇಶದಂತೆ ಈಗ ಮುಂದುವರಿಯುತ್ತಿದೆ, ನೀಡಬಾರದು ಎಂದು ಆದೇಶ ಬರುವವರೆಗೆ ನಾವು ಅನ್ನ ದಾಸೋಹ, ಶಾಲೆಗೆ ನೆರವು ಮುಂದುವರಿಸುತ್ತೇವೆ ಎನ್ನುತ್ತಾರೆ ಕಟೀಲು ಕ್ಷೇತ್ರ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ.


ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಕ್ಷೇತ್ರ ಮೊದಲಾದ ಎ ಶ್ರೇಣಿ ದೇವಸ್ಥಾನದಿಂದ ಖಾಸಗಿ ಶಾಲೆಗಳಿಗೆ ನೆರವು ನೀಡಲಾಗುತ್ತಿದೆ. ಅಕ್ಕಿ, ಬೆಲ್ಲ, ಸಕ್ಕರೆ ಮತ್ತು ನಗದು ರೂಪದಲ್ಲೂ ನೀಡಲಾಗುತ್ತಿದೆ. ಕಲ್ಲಡ್ಕ ಶಾಲೆಗಳಿಗೆ ಆಹಾರ ವಸತಿ, ಬಟ್ಟೆ ಲೆಕ್ಕದಲ್ಲಿ ನೀಡಲಾಗಿದೆ ಎಂದು ಧಾರ್ಮಿಕ ಪರಿಷತ್ ಹೇಳಿದೆ. 


2017ರ ಧಾರ್ಮಿಕ ಪರಿಷತ್‌ನಲ್ಲಿ ಖಾಸಗಿ ಶಾಲೆಗಳಿಗೆ ದೇವಸ್ಥಾನದಿಂದ ನೆರವು ನೀಡದಿರಲು ನಿರ್ಣಯ ಆಗಿದೆ. ಸಚಿವ ರಮಾನಾಥ ರೈ ಅವರು ಕೆಲವು ಶಾಲೆಗಳಿಗೆ ಅನುದಾನ ನೀಡಬೇಕು ಎಂದು ಕೇಳಿಕೊಂಡಿದ್ದರು. ಆದರೆ ನಿಯಮಾನುಸಾರ ನೀಡಲು ಆಗುವುದಿಲ್ಲ ಎಂದು ಹೇಳಿದ್ದೇವೆ ಎಂದು ಧಾರ್ಮಿಕ ಪರಿಷತ್ ಸ್ಪಷ್ಟ ಪಡಿಸಿದೆ. 


ಬೆಳಗಾವಿ ಅಥಣಿ ಲೈಂಗಿಕ ಕಾರ್ಯಕರ್ತೆಯರ ಸಂಘಕ್ಕೆ ಆಹಾರ ರೂಪದಲ್ಲಿ ಹೋಗುತ್ತಿತ್ತು. ಇನ್ನು ಮುಂದೆ ದೇವಸ್ಥಾನದಿಂದ (ಅವರದೇ ಶಿಕ್ಷಣ ಸಂಸ್ಥೆ: ಹೊರತುಪಡಿಸಿ) ಬೇರೆ ಶಾಲೆಗಳಿಗೆ ಅನ್ನ ದಾಸೋಹ, ನೆರವು ನೀಡುವಂತಿಲ್ಲ ಎಂದು ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಸ್ಪಷ್ಟಪಡಿಸಿದ್ದಾರೆ.  


ಸಭೆಯಲ್ಲಿ ಅಜೆಂಡಾದಲ್ಲಿ ಬಂದಾಗ ನಮಗೆ ಗೊತ್ತಾಗುತ್ತದೆ. ತುಂಬಾ ಶಾಲೆಗಳಲ್ಲಿ ಆಗಿದೆ. ಕಡಬ ಸರಸ್ವತಿ ವಿದ್ಯಾಲಯಕ್ಕೆ ಊಟ ನಿಲ್ಲಿಸಿ 1 ವರ್ಷ ಆಗಿದೆ. ಕನಕಪುರ, ಜೇವರ್ಗಿ, ಹೂವಿನಹಡಗಲಿ ಮೊದಲಾದ ಕಡೆ ದೇವಸ್ಥಾಾನಗಳಿಂದ ಅನುದಾನ ಹೋಗುತ್ತಿತ್ತು. ಇನ್ನು ರದ್ದಾಗಲಿದೆ. 


ಜನರು ಹರಕೆ ಹೊತ್ತ ಹಣವನ್ನು ಖಾಸಗಿ ಶಾಲೆಗಳಿಗೆ ನೀಡುವ ಅಗತ್ಯ ಇಲ್ಲ. ದೇವಸ್ಥಾನ, ದೈವಸ್ಥಾಾನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಬೇಕು. ಸಿ ವರ್ಗದ ದೇವಸ್ಥಾನಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಹೆಚ್ಚು ಎಂದು ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳುತ್ತಾರೆ. 


ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ಮಾಡುವ ಕೆಲಸ ಆರಂಭವಾಗಿದೆ. ನೌಕರರ ವೇತನ ನೀಡುವ ಸಮಸ್ಯೆ ಆಗಿದೆ. ದಿನಗೂಲಿ ಹೊಸಬರಿಗೆ 14 ಸಾವಿರ ರೂ. ನೀಡುತ್ತೇವೆ. ಹಳಬರಿಗೆ 5-6 ಸಾವಿರ ರೂ. ವೇತನ ಇದೆ. ಇದನ್ನು ಸರಿಪಡಿಸಬೇಕಾಗಿದೆ ಎನ್ನುತ್ತಾರೆ ಕೋಟ್ಯಾನ್.


ಕಾಯಿದೆಗೆ ತಿದ್ದುಪಡಿ/ ಹೊಸ ಕಾಯಿದೆ?

2003ರಲ್ಲಿ ಧಾರ್ಮಿಕ ಪರಿಷತ್ತನ್ನು ಸಚಿವ ವಿ.ಎಸ್. ಆಚಾರ್ಯರು ಮಾಡಿದ್ದರು. ಧಾರವಾಡ ಸಂಚಾರಿ ಪೀಠ 2016ರಲ್ಲಿ ಧಾರ್ಮಿಕ ಪರಿಷತ್ ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಬಳಿಕ ಮರು ನೇಮಕ ಆಯಿತು. ಈಗ ಕಾಯಿದೆ ಸರಿಪಡಿಸುವಂತೆ ಸಂಚಾರಿ ಪೀಠ ಸೂಚಿಸಿದೆ.


ಹೊಸ ಕಾಯಿದೆ ಮಾಡಬೇಕು. ನುರಿತ ಕಾನೂನು, ಸಂವಿಧಾನ ತಜ್ಞರ ಅಭಿಪ್ರಾಾಯ ಪಡೆದು ಡ್ರಾಫ್ಟ್‌ ಕಮಿಟಿ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಜಗನ್ನಿವಾಸ ರಾವ್ ಹೇಳಿದ್ದಾರೆ.  


ರಾಜಕೀಯ ದ್ವೇಷ?

ಕಲ್ಲಡ್ಕ ಗಲಾಟೆ, ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಲು ರಮಾನಾಥ ರೈ ನೀಡಿದ ಸೂಚನೆ ವಿಡಿಯೋ ಬಹಿರಂಗವಾದ ಬಳಿಕ ಈ ಬೆಳವಣಿಗೆ ನಡೆದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಆರ್‌ಎಸ್‌ಎಸ್ ನಡೆಸುವ ಶಾಲೆಗಳ ಮಾಹಿತಿ ಕೇಳಿರುವುದು, ಬಳಿಕ ಇಲ್ಲಿಗೆ ದೇಗುಲದ ಅನುದಾನ ರದ್ದಾಗಿರುವುದು ಕಾಕತಾಳೀಯ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.


ನೆರವು ಬಡ ದೇವಸ್ಥಾನಕ್ಕೆ:

ಎ ಶ್ರೇಣಿ ದೇವಸ್ಥಾಾನ ಆದಾಯ ಖರ್ಚು ವೆಚ್ಚ ಕಳೆದು ದ ಶೇ.10, ಬಿ.ವರ್ಗದ ದೇವಸ್ಥಾಾನ ಗಳು ಶೇ.5 ಧಾರ್ಮಿಕ ಪರಿಷತ್ ಸಾಮಾನ್ಯ ಸಂಗ್ರಹ ನಿಧಿಗೆ ಬರುತ್ತದೆ. ಇದರಿಂದ ದೇವ, ದೈವಸ್ಥಾಾನಗಳಿಗೆ ನೀಡುತ್ತೇವೆ. ಕಾಣಿಕೆ ಹುಂಡಿ ದೇವಸ್ಥಾನದ ಆದಾಯಕ್ಕೆ ಸೇರುತ್ತದೆ. ಮುಜರಾಯಿ ಇಲಾಖೆ ಅನುದಾನ ಬೇರೆಯೇ ಇರುತ್ತದೆ. ಇದನ್ನು ಸರಕಾರ ಬಜೆಟ್‌ನಲ್ಲಿ ನೀಡುತ್ತದೆ ಎನ್ನುತ್ತಾರೆ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್. 


ಲೇಖನ: ಜಿತೇಂದ್ರ ಕುಂದೇಶ್ವರ

9945666324


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top