ಮಳೆಗಾಲದ ಪ್ರಾರಂಭದಲ್ಲಿ ಪರಾರಿ ಆಗಲು ಪ್ರಯತ್ನ ಪಡುವ ಜೇನು ಕುಟುಂಬಗಳನ್ನು ಬಿಟ್ಟು ಬಿಡುವುದೇ ಉತ್ತಮ. ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದು ವ್ಯರ್ಥ. ಆದರೆ...
ಮಳೆಗಾಲ ಮುಗಿಯುತ್ತಿದ್ದಂತೆ ಶತ್ರುಗಳ ಉಪಟಳದಿಂದ, ಆಹಾರದ ಅಭಾವದಿಂದ ಕೆಲವು ಜೇನು ಕುಟುಂಬಗಳು ಕ್ಷೀಣವಾಗಿ ಎರಡು ಮೂರು ಎರಿಗಳಲ್ಲಿ ಮಾತ್ರ ಜೇನ್ನೊಣಗಳು ಇರುವುದು ಕಂಡುಬರುತ್ತದೆ. ಅಂತಹ ಕುಟುಂಬಗಳನ್ನು ಇನ್ನು ಪರಾರಿ ಆಗಲು ಬಿಡಬಾರದು. ಒತ್ತರಿಸುವ ಹಲಗೆಯ ಸಹಾಯದಿಂದ ಅವುಗಳನ್ನು ಅಭಿವೃದ್ಧಿಪಡಿಸಬಹುದು.
ಸಂಸಾರ ಕೋಣೆಯ ಫ್ರೇಂ ನ ಅಳತೆಗೆ ತಕ್ಕಂತೆ ಪ್ಲೈವುಡ್ ಅಥವಾ ರಟ್ಟು ಇತ್ಯಾದಿ ಯಾವುದಾದರೂ ಒಂದನ್ನು ತುಂಡುಮಾಡಿ, ಫ್ರೇಂ ಗೆ ಅಳವಡಿಸಿಕೊಂಡರೆ ಒತ್ತರಿಸುವ ಹಲಗೆ ಸಿದ್ಧವಾಯಿತು.
ನಾಲ್ಕು ಫ್ರೇಂ ಗಳಲ್ಲಿ ಮಾತ್ರ ಜೇನ್ನೊಣಗಳಿದ್ದರೆ ಐದನೇ ಫ್ರೇಂ ಗೆ ಕಾಲು ಇಂಚು ಅಗಲದ ಮಯಣದ ಹಾಳೆಯನ್ನು ಅಳವಡಿಸಿ ಕೊಟ್ಟು ಆರನೆಯ ಫ್ರೇಂ ಇಡುವ ಸ್ಥಳದಲ್ಲಿ ಒತ್ತರಿಸುವ ಹಲಗೆಯನ್ನು ಇಟ್ಟು ಸಕ್ಕರೆ ದ್ರಾವಣವನ್ನು ಕೊಡುತ್ತಿದ್ದರೆ ಹತ್ತಾರು ದಿನಗಳಲ್ಲಿ ಐದನೇ ಫ್ರೇಂ ನಲ್ಲಿ ಅಂಗೈ ಅಗಲದ ಎರಿ ಕಟ್ಟಿರುತ್ತವೆ.
ಚಿಕ್ಕದಾಗಿ ಕಟ್ಟಿದ ಎರಿಯನ್ನು ಮೂರು ಮತ್ತು ನಾಲ್ಕನೇ ಎರಿಯ ಮಧ್ಯದಲ್ಲಿ ಇಟ್ಟು ಆರನೇ ಫ್ರೇಂ ಗೆ ಮಯಣದ ಹಾಳೆಯನ್ನು ಅಳವಡಿಸಿ ಕೊಟ್ಟು ಏಳನೆಯ ಫ್ರೇಂ ಇಡುವ ಜಾಗದಲ್ಲಿ ಒತ್ತರಿಸುವ ಹಲಗೆಯನ್ನು ಇಡಬೇಕು. ಈ ರೀತಿ ಮುಂದುವರಿಸುತ್ತಾ ಕುಟುಂಬವನ್ನು ಬಲಪಡಿಸಿ, ಸೆಪ್ಟೆಂಬರ್- ಅಕ್ಟೋಬರ್ ತಿಂಗಳಿನಿಂದ ಇದನ್ನೇ ಪಾಲು ಮಾಡುತ್ತಾ ಮುಂದಿನ ಹಂಗಾಮಿಗೆ ಜೇನು ಕುಟುಂಬಗಳನ್ನು ಹೆಚ್ಚಿಸಿಕೊಳ್ಳಬಹುದು.
-ಶಿರಂಕಲ್ಲು ಕೃಷ್ಣ ಭಟ್
7975159138
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ