ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ತತ್ವಚಿಂತನೆʼ ಪ್ರಚಾರೋಪನ್ಯಾಸ ಮಾಲಿಕೆಯ 2021-22ನೇ ಸಾಲಿನ ಉದ್ಘಾಟನಾ ಸಮಾರಂಭ ಜುಲೈ 28 (ಬುಧವಾರ) ಅಪರಾಹ್ನ 3.00 ಕ್ಕೆ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ವಹಿಸಲಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ), ಉಜಿರೆ ಇಲ್ಲಿನ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ್ ʼಕನಕದಾಸರ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ ಹಾಗೂ ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಸೂರ್ಯನಾರಾಯಣ ಭಟ್ ಪಿ.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭ, ಕನಕದಾಸರ `ರಾಮಧಾನ್ಯ ಚರಿತೆ’ – ಅರ್ಥಾನುಸಂಧಾನ ಕಾರ್ಯಕ್ರಮವನ್ನು ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ಹಾಗೂ ಕು. ಅನನ್ಯ ಬಳಂತಿಮುಗರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು www.youtube.com/abbakkatv, facebook.com/official.abbakkatv ಲಿಂಕನ್ನು ಬಳಸಿ ವೀಕ್ಷಿಸಬಹುದಾಗಿದೆ.
ಬಾನುಲಿಯಲ್ಲಿ ಸರಣಿ ಉಪನ್ಯಾಸ:
ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ತತ್ವಚಿಂತನ ಪ್ರಚಾರೋಪನ್ಯಾಸ’ ಮಾಲಿಕೆಯ 2021-22ನೇ ಸಾಲಿನ ಸರಣಿ ಉಪನ್ಯಾಸ ಮತ್ತು ಕೀರ್ತನ ವ್ಯಾಖ್ಯಾನ ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿಯ ಮೂಲಕ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ ಎರಡನೇ ವಾರದಿಂದ ಪ್ರತೀ ಭಾನುವಾರ ಸಂಜೆ 7:45ಕ್ಕೆ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ʼಕೀರ್ತನ ವ್ಯಾಖ್ಯಾನʼ ಕಾರ್ಯಕ್ರಮದಲ್ಲಿ ಮಂಗಳೂರಿನ ಡಾ. ನರಸಿಂಹ ಮೂರ್ತಿ.ಆರ್ ಮತ್ತು ಡಾ. ಮೀನಾಕ್ಷಿ ರಾಮಚಂದ್ರ ಇವರು ಕನಕದಾಸರ ಕೀರ್ತನೆಗಳ ಅರ್ಥಾನುಸಂಧಾನ ನಡೆಸಿಕೊಡಲಿದ್ದಾರೆ. ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ `ಕನಕದಾಸರ ಸಾಹಿತ್ಯದಲ್ಲಿ ವ್ಯಕ್ತಿ ಮೌಲ್ಯಗಳು’ ಎಂಬ ವಿಷಯದ ಕುರಿತು ಮಂಗಳೂರಿನ ಡಾ. ದಿನೇಶ್ ನಾಯಕ್, `ಕನಕದಾಸರ ಸಾಹಿತ್ಯದಲ್ಲಿ ಕುಟುಂಬ ಮೌಲ್ಯಗಳು’ ಎಂಬ ವಿಷಯದ ಕುರಿತು ಕವಿತಾ ಕೂಡ್ಲು, ಮಂಜೇಶ್ವರ ಮಾತನಾಡಲಿದ್ದಾರೆ.
`ಕನಕದಾಸರ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು’ ಎಂಬ ವಿಷಯದ ಕುರಿತು ಡಾ. ಶ್ರೀಧರ ಎನ್. ಏತಡ್ಕ, ಕಾಸರಗೋಡು, `ಕನಕದಾಸರ ಸಾಹಿತ್ಯದಲ್ಲಿ ಧಾರ್ಮಿಕ ಮೌಲ್ಯಗಳು’ ಎಂಬ ವಿಷಯದ ಕುರಿತು ಡಾ. ಗೀತಾ ಕುಮಾರಿ ಟಿ, ಪುತ್ತೂರು ಉಪನ್ಯಾಸ ನೀಡಲಿದ್ದಾರೆ. ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ