ಪುಸ್ತಕ: ಪರ್ಮಾ ಕಲ್ಚರ್- ಶಾಶ್ವತ ಕೃಷಿಯ ಕಲೆ ಮತ್ತು ವಿಜ್ಞಾನ

Upayuktha
0



ಅರ್ಧೇಂದು ಎಸ್. ಚಟರ್ಜಿ. ಯವರ ಶಾಶ್ವತ ಕೃಷಿಯ ಕಲೆ ಮತ್ತು ವಿಜ್ಞಾನದ ವಿಚಾರಗಳನ್ನೊಳಗೊಂಡ ಈ ಕೃತಿಯು ಸುಸ್ಥಿರ ಮತ್ತು ಸಾವಯವ ಕೃಷಿಯ ಮೂಲಭೂತ ತಿಳುವಳಿಕೆಗಳನ್ನು ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುವಂಥದ್ದು. ಕೃಷಿ ಮತ್ತು ನಮ್ಮ ಪರಿಸರ ಹೇಗೆ ಹೊಂದಿಕೊಂಡಿದೆ ಮತ್ತು ಅದರ ವಿನ್ಯಾಸ ಜೋಡಣೆ ಹೇಗೆ? ಹೊಲದ ವಿನ್ಯಾಸವನ್ನು ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು. ಕೃಷಿ ಜಮೀನಿನಲ್ಲಿ ಮರಗಳ ಹೊಂದಾಣಿಕೆ ಹೇಗೆ. ಕೈತೋಟದ ಪರಿಕಲ್ಪನೆಗಳು ಮತ್ತು ವಿನ್ಯಾಸಗಳು ಕೃಷಿ ಹೊಂಡಗಳ ನಿರ್ಮಾಣ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ವಿಧಾನಗಳು, ಸಮಗ್ರ ಕೃಷಿಯ ಗುರಿ ಮತ್ತು  ಸಂಕಷ್ಟದ ಸಮಯದಲ್ಲಿ ಆಹಾರದ ನಿರ್ವಹಣೆ, ಆಹಾರ ಕೊರತೆಯಾಗದಂತೆ ಪರಿಹಾರಗಳೇನು, ಸಸ್ಯಗಳ ನರ್ಸರಿಗಳ ನಿರ್ವಹಣೆ, ಬೀಜ ಸಂರಕ್ಷಣೆ, ಅಭಿವರ್ಧನೆ, ಮತ್ತು ವಿನಿಮಯ. ಸ್ವಾಭಾವಿಕ ವಿಧಾನದಲ್ಲಿ  ಸಸ್ಯಗಳ ಪೀಡೆ ನಿರ್ವಹಣೆ ಮತ್ತು ಜೈವಿಕ ಸಿಂಪರಣೆಗಳ ಕುರಿತು ಸಮಗ್ರ ಚಿತ್ರಣಗಳನ್ನೊಳಗೊಂಡಿದೆ. ತಲೆಮಾರುಗಳಿಂದ ಸಾವಯವ ಸುಸ್ಥಿರ ಕೃಷಿಯ ಪ್ರಾಯೋಗಿಕ ಅನುಭವ ಗಳನ್ನು ಯಶಸ್ವಿಯಾಗಿ ಮಾಡಿರುವ ಶಿವರಾಂ ಪೈಲೂರ್‌ ಅವರು ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. Upayuktha


ಪುಟ್ಟ ಹಿತ್ತಲಿನಲ್ಲೊಂದು ಚಿಕ್ಕದಾದ ಚೊಕ್ಕದಾದ ಮುಳಿಹುಲ್ಲು ಅಥವಾ ಸೋಗೆ ಹೊದಿಸಿದ ಮನೆ. ಮನೆಯ ಅಂಚಿನಲ್ಲಿ ಹಟ್ಟಿಯ ತುಂಬಾ ಹಸು ಕರುಗಳು. ಸಮೀಪದಲ್ಲಿ ಬೃಹತ್ತಾಗಿ ಬೆಳೆದು ನಿಂತ ಬಾಳೆಯ ಹಿಂಡು ಅಲ್ಲೇ ಒಂದಷ್ಟು ಬಸಳೆ ತೊಂಡೆ ವೀಳ್ಯದೆಲೆ ತರಕಾರಿಯ ಚಪ್ಪರಗಳು. ಅಂಗಳದಲ್ಲಿ ಗುಂಪುಗುಂಪುನಾಟಿ ಕೋಳಿಗಳು. ಅಂಗಳದ ಅಂಚಿನಲ್ಲಿ ಬಗೆ ಬಗೆಯ ಹೂಗಳ ತರಕಾರಿಗಳ ಔಷಧೀಯ ಸಸ್ಯಗಳು. ಅಂಗಳದ ಮಧ್ಯೆ ಬೈಹುಲ್ಲಿನ ಮೆದೆ. ಅಂಗಳ ದಾಟಿದರೆ ಕಣ್ಣು ಹಾಯಿಸಿದಷ್ಟು ಉದ್ದಕ್ಕೆ ಋತುಮಾನಗಳಿಗನುಗುಣವಾಗಿ ನೀರನ್ನು ಇಂಗಿಸುವ ಗದ್ದೆಗಳು. ಗದ್ದೆಯ ಬದುವಿನಲ್ಲಿ ತೆಂಗಿನಮರಗಳು ಅದರಾಚೆಗೆ ಜೀವಂತ ಬೇಲಿಗಳು. ಬೇಲಿಗಳಲ್ಲಿ ಅನೇಕ ಜಾತಿಯ ಮರಗಳು. ಬೇಲಿ ದಾಟಿ ಹೊರ ನಡೆದರೆ ಬೇಣ, ಬಾಣೆ, ಗೋಮಾಳ, ಬೇರೆ ಬೇರೆ ಹೆಸರಿನಿಂದ ಕರೆಯುವ ಜೀವಜಗತ್ತಿನ ತಾಣ. ತಣ್ಣನೆಯ ನೀರು ಹರಿದುಹೋಗುವ ತೊರೆಗಳು ಪ್ರಶಾಂತವಾದ ವಾತಾವರಣ. ಇದು ನಮ್ಮೂರಿನ ಫಾರ್ಮಾ ಕಲ್ಚರ್ ಸುಸ್ಥಿರ ಕೃಷಿ. ಶತಮಾನಗಳ ಕೃಷಿ ನಿರ್ವಹಣೆಯ ಫಾರ್ಮಾ.


ಯಾವಾಗ ನಮ್ಮೂರಿಗೆ  ರಬ್ಬರ್ ಕೃಷಿ ಕ್ರಾಂತಿಯ ರೂಪದಲ್ಲಿ  ಪ್ರವೇಶಪಡೆಯಿತೋ ಅಂದೇ ಈ ಸುಸ್ಥಿರ ಕೃಷಿಯ ನಿರ್ವಹಣಾ ವಿಧಾನದ ತಾಳತಪ್ಪಿ ಆಯತಪ್ಪಿ ಅಲುಗಾಡಿತು. ಬೇಣ, ಗೋಮಾಳ, ಕುಮ್ಕಿ ಎಲ್ಲವೂ ನಿರ್ನಾಮಗೊಂಡು ರಬ್ಬರ್ ತೋಟಗಳಾಗಿ ಪರಿವರ್ತನೆಗೊಂಡವು. ಕೆಲವೆಡೆ ಕಸಿ ಗೇರು ಅಭಿವೃದ್ಧಿ  ತೋಟಗಳಾಗಿ ರೂಪಾಂತರಗೊಂಡವು. ಹಸುರುಹೊನ್ನಿನ ಜೊತೆ ಬದುಕು ಸವೆಸಿದ ರೈತನಿಗೆ ಹಸುರು ಮಸುಕಾಗಿ ಹೊನ್ನ  ಬಯಕೆ ಮೂಡತೊಡಗಿತ್ತು. ಇದರ ಪರಿಣಾಮವಾಗಿ ಬೇಸಿಗೆಯಲ್ಲೇ ಗುಡ್ಡಗಳಲ್ಲಿರುವ ಮರ ಗಿಡಗಳನ್ನು ಬುಡಸಮೇತ ಕಿತ್ತು ಬೆಂಕಿ ಹಚ್ಚಿದರು. ಮತ್ತು ಜೀವಂತವಾಗಿದ್ದು ಚಿಗುರುತ್ತಿದ್ದ ಮರಗಿಡಗಳ ಬೊಡ್ಡೆಗಳಿಗೆ ಸೀಮೆಎಣ್ಣೆ ಸುರಿದು ಮತ್ತೆ ಬೆಂಕಿ ಹಚ್ಚಿ ಸಾಯಿಸಿದ್ದರು. ಮೊದಲೆರೆಡು ವರ್ಷ ಯಥೇಚ್ಛ ವಿಷ ಸುರಿದು ಶುಂಠಿ ಕೃಷಿ, ಸುವರ್ಣಗಡ್ಡೆ, ಮರಗೆಣಸು, ಮೂರನೇ ವರ್ಷಕ್ಕೆ ರಬ್ಬರ್ ಗಿಡ ನೆರಳಾಗಿ ಕೆಳಗಡೆ ಯಾವುದೇ ಗಿಡಗಳು ಮೊಳೆತು ಬರುವುದಿಲ್ಲ ಎನ್ನುವುದು ಜಗತ್ ಸತ್ಯ. ಇದರಿಂದ ಅಡಿಕೆ ತೋಟಗಳಿಗೆ ಹಸುರೆಲೆ ಗೊಬ್ಬರದ ಪರಿಪಾಠ ನಿಂತಿತು. ದೂರದ ರಾಯಚೂರಿನಿಂದ ಲೋ ಸೊಂಡೂರಿನಿಂದ ಲೋ ಕುರಿಗೊಬ್ಬರ ಬರಲು ಆರಂಭವಾಯಿತು. ಇಲ್ಲದಿದ್ದರೆ ನಮ್ಮಲ್ಲಿದೆ ರಸಗೊಬ್ಬರ ಸಬ್ಸಿಡಿಯಲ್ಲಿ ಅದನ್ನು ಹಾಕಿದರಾಯ್ತು ಎಂದು ರೈತ ನಿಟ್ಟುಸಿರು ಬಿಟ್ಟ. ಇದರ ಪರಿಣಾಮ ಹಸುಗಳು ಎತ್ತುಗಳು ಮಾಯವಾದವು ಹಟ್ಟಿಗಳು ಕಟ್ಟಿಗೆಗಳ ಕೊಟ್ಟಿಗೆ ಗಳಾದವು ಹಾಲಿಗೆ ನಂದಿನಿ ತರಕಾರಿಗೆ ನಗರದ ಸಂತೆಗಳ ಅವಲಂಬನೆ. ಚೀಲ  ಸಮೇತ ಹೋದರಾಯ್ತು.


ಕಾಡಸೊಪ್ಪು ತೋಡ ನೀರು, ಎನ್ನುವಂತೆ ಬದುಕಿದ್ದ ರೈತನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಗಳು ಕಾಣಿಸಲಾರಂಭಿಸಿದವು. ಬ್ಯಾಂಕುಗಳು ನೀಡುವ ಬಗೆ ಬಗೆಯ ಆಕರ್ಷಣೆಯ ಸಾಲವು ಹಲವಾರು ರೀತಿಯ ಬದಲಾವಣೆಗಳಿಗೆ ಕಾರಣವಾಯಿತು. ಇದರಿಂದಾಗಿ ವಾಣಿಜ್ಯ ಬೆಳೆಗಳ ಅಭಿವೃದ್ಧಿಯೆಡೆಗೆ ರೈತನು ಮುಖ ಮಾಡಿದ. ಸಹಜ ಆಹಾರ ಸಂಸ್ಕತಿ ಕೃಷಿ ಚಟುವಟಿಕೆಗಳು ಆಚರಣೆಗಳು ಉತ್ಸವದ ರೂಪ ಪಡೆದು ವಿಜೃಂಭಿಸತೊಡಗಿದವು. ಈ ಉತ್ಸವಗಳ ಉದ್ದೇಶಗಳು ಇದನ್ನ ನಾವು ಕಳೆದುಕೊಂಡಿಲ್ಲ, ಇದರೊಂದಿಗೆ ನಾವಿದ್ದೇವೆ ಅಥವಾ ಇದನ್ನು ನಾವು ಹೇಗಾದರೂ ಮಾಡಿ ಉಳಿಸಿಕೊಳ್ಳುತ್ತೇವೆ ಎನ್ನುವುದನ್ನು ಸಾರುವುದಕ್ಕೆ ಮಾತ್ರ ಸೀಮಿತವಾಗಿದೆ. ಆಹಾರದಲ್ಲಾದ ಬದಲಾವಣೆ ಹಲವಾರು ರೋಗಗಳಿಗೂ ಕಾರಣವಾಯ್ತು  ರೋಗಗಳಿಗಾಗಿ ಹೈಟೆಕ್ ಆಸ್ಪತ್ರೆಗಳ ನಿರ್ಮಾಣವಾಯ್ತು. ನಂತರ ಆರಂಭವಾದ ಫಾರಂಹೌಸ್ ಸಂಸ್ಕೃತಿ ಎಲ್ಲವನ್ನು ಅಡಿಮೇಲು ಮಾಡಿತು. ಸಂಸ್ಕೃತಿ ಸಂವೇದನೆ ನೀತಿ ನಿಯಮಗಳನ್ನು ಮೀರಿ ಈ ಕೃಷಿ ಭೂಮಿ ಬಿಲ್ಡರ್‌ಗಳಿಗೆ ಗಣಿಗಾರಿಕೆಯವರಿಗೆ ವಸಾಹತುಶಾಹಿ ಬಂಡವಾಳಶಾಹಿ ಕಂಪೆನಿಯವರ ಪಾಲಾಯ್ತು ಇದರೊಂದಿಗೆ ನಮ್ಮೊಂದಿಗೆ ಸುತ್ತಿಕೊಂಡ ವಿಷವರ್ತುಲದಿಂದ ನಮ್ಮೊಳಗಿದ್ದ ಹಲವಾರು ಸಸ್ಯ ವೈವಿಧ್ಯಗಳು ಮತ್ತು ಜೀವ ವೈವಿಧ್ಯತೆಯ ಮೂಲ ನೆಲೆಗಳು ನಮಗರಿವಿಲ್ಲದಂತೆಯೇ ಮಾಯವಾದವು. ಇದನ್ನು ಎಂದಿಗೂ ನಾವು ಮರಳಿ ಪಡೆಯಲಾರೆವು. ಭೂಮಿಯ ಮೇಲಿನ ಮಣ್ಣು ಬೆಳಗಿಹೋದ ಸೂರ್ಯನ ಬೆಳಕು ಗಣಿಗಾರಿಕೆಯಿಂದ ಸಿಡೆದುಹೋದ ನೆಲ ಕಣ್ಮರೆಯಾದ ಜೀವಸಂಕುಲಗಳ ನೆಂದಿಗೂ ಮರಳಿ ಪಡೆಯಲಾರೆವು ಎನ್ನುವುದು ಅಪ್ಪಟ ಸತ್ಯ. ಪರ್ಮಾಕಲ್ಚರ್ ಎಂದರೆ ಕೇವಲ ಕೃಷಿ ಮಾತ್ರವಲ್ಲ ಅದು ಬದುಕಿನ ಜೊತೆ ಮಿಳಿತಗೊಂಡ ಜೀವನಕ್ರಮ. ಮಣ್ಣಿನೊಂದಿಗಿರುವ ಸಹನೆ ಪ್ರೀತಿ ಮತ್ತು ಔದಾರ್ಯದ ಬದುಕಿನ ದಾರಿ.


ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ & ಆ್ಯಕ್ಷನ್ (ಇಕ್ರಾ) ಸಂಸ್ಥೆಯು ಹೊರತಂದಿರುವ ಈ ಪುಸ್ತಕವನ್ನು ವಿ.ಗಾಯತ್ರಿಯವರು ಸುಂದರವಾಗಿ ಅನುವಾದ ಮಾಡಿರುತ್ತಾರೆ. ಬುಕ್ಸ್ ಲೋಕದ ಫಣೀಶ್. ಕೆ ಅವರಿಗೆ ಮತ್ತು ಶಿವರಾಂ ಪೈಲೂರ್ ಅವರಿಗೆ ಧನ್ಯವಾದಗಳು.

- ಚಂದ್ರ ಸೌಗಂಧಿಕಾ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top