ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಶಾಖೆ ಭಾನುವಾರ (ಜು.25) ಉದ್ಘಾಟನೆಯಾಗಲಿದೆ.
ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಘದ ಕೇಂದ್ರ ಪದಾಧಿಕಾರಿಗಳು ಹಾಗೂ ಇತರ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ವೇ.ಬ್ರ. ವಿ. ಪ್ರಕಾಶ್ ಹೊಳ್ಳ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟಾಗಿ ಸುಮಾರು 3,000ಕ್ಕೂ ಅಧಿಕ ಅಸಂಘಟಿತ ಪುರೋಹಿತ ಕಾರ್ಮಿಕರಿದ್ದಾರೆ. ಕೊರೊನಾ ಸಂಕಟ ಕಾಲದಲ್ಲಿ ಉದ್ಯೋಗವಿಲ್ಲದೆ, ಆದಾಯ ಮೂಲಗಳೂ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಅವರಿಗೆ ಸರಕಾರದಿಂದ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯ ಬೆಂಬಲ ದೊರಕಿಸಿಕೊಡುವುದು ಸಂಘಟನೆಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.
ಖಾಸಗಿ ದೇವಸ್ಥಾನಗಳಲ್ಲಿ ಅರ್ಚಕರಾಗಿ ಮತ್ತು ಸಹಾಯಕರಾಗಿ ಕೆಲಸ ಮಾಡುವ ಸಾವಿರಾರು ಮಂದಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲ; ಜತೆಗೆ ಪರ್ಯಾಯ ಆದಾಯ ಮೂಲಗಳೂ ಇಲ್ಲ. ಇಂತಹ ಸನ್ನಿವೇಶದಲ್ಲಿ ಸರಕಾರದಿಂದ ನರೆವು ನಿರೀಕ್ಷಿಸುವುದಲ್ಲದೆ ಬೇರೇನೂ ಮಾಡುವ ಸ್ಥಿತಿಯಲ್ಲಿ ಅವರಿಲ್ಲ. ಆದರೆ ಅವರು ಅಸಂಘಟಿತರಾಗಿರುವುದರಿಂದ ಅವರ ನೋವು, ಸಂಕಟಗಳು ಸರಕಾರದ ಅಥವಾ ಅಧಿಕಾರಿಗಳ ಕಿವಿಗೆ ತಲುಪುತ್ತಿಲ್ಲ. ಹೀಗಾಗಿ ಅವರನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸಿ ಸರಕಾರದ ನೆರವಿಗಾಗಿ ಶ್ರಮಿಸುವುದು, ಆ ಮೂಲಕ ಅವರ ಜೀವನಕ್ಕೆ ಒಂದು ಭದ್ರತೆಯನ್ನು ಒದಗಿಸುವುದು ಅಸಂಘಟಿತ ಪುರೋಹಿತ ಕಾರ್ಮಿಕರ ಸಂಘದ ಧ್ಯೇಯೋದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದ.ಕ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ರಘುರಾಮ ರಾವ್ ಕಂದಾವರ, ಸಂಘದ ಕಾರ್ಯಚಟುವಟಿಕೆಗಳಿಗೆ ಮನ್ನಣೆ ನೀಡಿ ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ ವತಿಯಿಂದ ಸಂಘದ ಅರ್ಹ ಸದಸ್ಯರಿಗೆ ವಿತರಿಸಲು ಅವಶ್ಯಕ ಸಾಮಗ್ರಿಗಳ 5 ಕಿಟ್ಗಳು ಲಭ್ಯವಾಗಿವೆ. ಅವುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಸಂಘಟನಾ ಕಾರ್ಯದರ್ಶಿ ವೇ.ಬ್ರ. ಸೂರ್ಯನಾರಾಯಣ ಐತಾಳ್ ಅವರು ಮಾತನಾಡಿ, ಖಾಸಗಿ ದೇವಸ್ಥಾನಗಳಲ್ಲಿ 15-20 ವರ್ಷಗಳಿಂದ ಅರ್ಚಕರಾಗಿ ಕೆಲಸ ಮಾಡುತ್ತಿದ್ದವರೂ ಸಹ ಕೋವಿಡ್ ಸಂಕಟದ ಸಮಯದಲ್ಲಿ ಕೆಲಸ ಕಳೆದುಕೊಳ್ಳಬೇಕಾದ ಸಂದರ್ಭ ಬಂದಿದೆ. ಅಲ್ಲದೆ ಅವರಿಗೆ ಇನ್ಯಾವುದೇ ಆದಾಯದ ಮೂಲಗಳಿಲ್ಲದ ಕಾರಣ ಕುಟುಂಬದ ನಿರ್ವಹಣೆ ಕಷ್ಟವಾಗಿದೆ. ಇಂತಹ ಅರ್ಚಕ-ಪುರೋಹಿತರು ಅಸಂಘಟಿತ ವಲಯದವರಾಗಿದ್ದು, ತಮ್ಮ ಸಂಕಟಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲೂ ಆಗದೆ ತೊಳಲಾಡುತ್ತಿದ್ದಾರೆ ಎಂದು ನುಡಿದರು.
ಅಸಂಘಟಿತ ಪುರೋಹಿತ ಕಾರ್ಮಿಕರು ಯಾವುದೇ ಕಾರಣದಿಂದ ದುಡಿಯಲು ಅಸಮರ್ಥರಾದರೆ, ಅಪಘಾತಕ್ಕೀಡಾದರೆ ಅವರ ಹಾಗೂ ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ವ್ಯವಸ್ಥೆಯನ್ನು ಸರಕಾರ ಮಾಡಬೇಕಾಗಿದೆ. ಅಂತಹ ಕುಟುಂಬಗಳಿಗೆ ಕನಿಷ್ಠ 3,000 ರೂ ಮಾಸಿಕ ಪಿಂಚಣಿಯಾದರೂ ಸಿಗುವಂತಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಾಮಾಜಿಕ ಭದ್ರತೆ ಮತ್ತು ನ್ಯಾಯ ಒದಗಿಸಲು ಸಂಘಟನೆ ಶ್ರಮಿಸುತ್ತದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ದಕ ಜಿಲ್ಲಾ ಕಾರ್ಯದರ್ಶಿ ವೇ.ಬ್ರ. ಸುಬ್ರಹ್ಮಣ್ಯ ಮಯ್ಯ ಹಾಗೂ ಉಪಾಧ್ಯಕ್ಷರಾದ ವೇ.ಬ್ರ. ಸುಭಾಷ್ ಪರಾಂಜಪೆ ಅವರು ಉಪಸ್ಥಿತರಿದ್ದರು.