1959ರಲ್ಲಿ ತಮಿಳಿನ ಹಿರಿಯ ಕಾದಂಬರಿಕಾರರಾದ ಚಿ.ಸು. ಚೆಲ್ಲಪ್ಪರವರು ರಚಿಸಿರುವ ಕಾದಂಬರಿ ವಾಡಿ ವಾಸಲ್. ಈ ಪುಟ್ಟ ಕಾದಂಬರಿಯನ್ನು ತಮಿಳಿನ ಸೊಗಸಿನೊಂದಿಗೆ ಕನ್ನಡ ಭಾಷೆಯ ಸಾರವನ್ನು ಬೆರೆಸಿ ಅನುವಾದ ಮಾಡಿರುವವರು ಸಾತ್ಯಕಿಯವರು. ಕಾದಂಬರಿಯುದ್ದಕ್ಕೂ ತಮಿಳನ್ನು ಕನ್ನಡೀಕರಿಸಿದ ಪ್ರೀತಿ ಎದ್ದು ತೋರುತ್ತದೆ. ಇದನ್ನು ಗಟ್ಟಿಯಾದ ಸ್ವರದಿಂದ ಓದಿ ನೋಡಿದಾಗ ಖುಷಿಯಾಯಿತು. ಇದರಲ್ಲಿ ಮೈಸೂರು ಪ್ರಾಂತ್ಯದ ಕನ್ನಡದ ಸೊಗಡು ಇದೆ. ಸ್ಪರ್ಧಾತ್ಮಕವಾಗಿ ಓಡಿಸುವ ಕಂಬಳದ ಕೋಣಗಳನ್ನು ನೋಡುವ. ನೋಡಿದ ನನಗೆ ಜಲ್ಲಿಕಟ್ಟಿನ ವಾಡಿ ವಾಸಲ್ನೊಳಗೆ ಕುಳಿತು ಗೂಳಿ ಮತ್ತು ಮನುಷ್ಯರ ನಡುವೆ ನಡೆದ ಸೆಣೆಸಾಟ ನೋಡಿದ ಅನುಭವವನ್ನು ನೀಡಿದ ಕಾದಂಬರಿ ಇದು.
ಈ ನಡುವೆ ಕೆ. ಎಂ.ಆದಿ ಮೂಲನ್ ರವರ ರೇಖೆಗಳು ಅಲ್ಲಲ್ಲಿ ಹಿತ ನೀಡಿದವು. ಪಿಚ್ಚಿ ಮತ್ತು ಮರುಧನ್ ಜಲ್ಲಿಕಟ್ಟು ಕಾಳಗದಲ್ಲಿ ಸೆಣಸಾಡಲು ನಿಂತಾಗ ಹಿನ್ನೆಲೆ ಧ್ವನಿಯಾದ ಮುದುಕ ತಮಿಳು ಪರಂಪರೆಯ ಕೊಂಡಿನಾಡಿ ಸಮೂಹ ವಕ್ತಾರ. ಸೂರ್ಯಾಸ್ತದ ಸಮಯದಲ್ಲಿ ಸಿಂಗರಿಸಿದ ಮದುವಣಗಿತ್ತಿಯಂತೆ ವಾಡಿ ವಾಸಲ್ ಗೆ ಆಗಮಿಸಿದ ಕಾರಿಯನ್ನು ಕೇವಲ ಪಿಚ್ಚಿಯೊಂದಿಗೆ ಸೋತ ಮಾತ್ರಕ್ಕೆ ಇನ್ನಿಲ್ಲವಾಗಿಸಿದ ಜಮೀನ್ದಾರನ ನಿರ್ದಯಿತನ ಆಳುವವರ ದರ್ಪ ಠೇಂಕಾರ ಅಹಂಕಾರ ಸೋಲನ್ನೊಪ್ಪಿಕೊಳ್ಳಲು ಸಿದ್ಧವಿರದ ರೋಗಿಷ್ಟ ಮನಸ್ಥಿತಿಯ ಸಿರಿವಂತಿಕೆಯೊಂದಿಗಿನ ಬಳುವಳಿ.
ಡಾಕ್ಟರ್ ಕೆ .ಶಿವರಾಮ ಕಾರಂತ, ತಗಳಿ ಶಿವಶಂಕರ ಪಿಳ್ಳೆಯವರ ಸಮಕಾಲೀನರಾದ ಚಿ. ಸು. ಚೆಲ್ಲಪ್ಪರವರ ಕಾದಂಬರಿಯನ್ನು ಕನ್ನಡ ರೂಪಾಂತರಗೊಳಿಸಿ ಇಷ್ಟು ಚೆಂದದ ಮುಖಪುಟದೊಂದಿಗೆ ಹೊರತಂದು ಓದುಗರ ಕೈಗಿತ್ತ ಛಂದ ಪುಸ್ತಕ ಬಳಗದ ಎಲ್ಲರಿಗೂ ಧನ್ಯವಾದಗಳ ಸಮರ್ಪಣೆ. ಅನ್ಯ ರಾಜ್ಯಗಳಿಂದ ಮಹಾನ್ ಸಾಹಿತಿಗಳ ಕೃತಿಗಳು ಕನ್ನಡಕ್ಕೆ ಭಾಷಾಂತರಗೊಳ್ಳುತ್ತಿರಲಿ ಎನ್ನುವ ಸದಾಶಯಗಳೊಂದಿಗೆ.
- ಚಂದ್ರ ಸೌಗಂಧಿಕ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ