ತನ್ನೊಳಗೆ ತನ್ನ (ದೈವವ) ಕಾಣುವ ವಿದ್ಯೆ ಅಧ್ಯಾತ್ಮ ವಿದ್ಯೆ. ನಿರಂತರ ಭಗವಂತ ನನ್ನ ಜೊತೆ ಇರುವುದರ ಅನುಸಂಧಾನ ಮಾಡಲರಿತವ ಎಂದೂ ಒಂಟಿ ಎಂದು ಕೊರಗನು. ಅವನ ಅಂತರ್ಯದಲ್ಲಿ ಏಕ (ಏಕಂ ಸತ್)ವಿರುವುದು ಗಮನಿಸಿದವ (ಅಂತರ್ಯದಲ್ಲಿ ಏಕ= ಏಕಾಂತ) ಏಕಾಂತದಲ್ಲಿದ್ದಾನೆ ಎಂದರೆ ಅಂತರ್ಯದಲ್ಲಿರುವ ಭಗವಂತನ ಜೊತೆ ಇದ್ದಂತೆ, ಅದು ಅವನಿಗೆ ಲೌಕಿಕ ಸುಖ ದುಃಖಾದಿಗಳ ಮೀರಿದ ಅಧ್ಯಾತ್ಮದ ಆನಂದಾನುಭೂತಿ ನೀಡೀತು. ಅವನಿಗೆ ಅದು ಸಾಧನಾ ಪಥ. ಸಾಧನೆಯಿಂದ ಅಧ್ಯಾತ್ಮ ವಿದ್ಯೆಯ ಸಿದ್ದಿಸಿಗೊಂಡವನ ಮನ ಜಗವ-'ಭಗವನ್ನಾಟಕ ರಂಗ' ಎಂಬಂತೇ ನೋಡಲು ಶಕ್ಯವಾಗುವ ಹಂತಕ್ಕೆ ಬೆಳೆದಿದ್ದು ಜಗದ ಸೃಷ್ಟಿ ಸ್ಥಿತಿ ಲಯಗಳ ಬಗ್ಗೆ ಲೌಕಿಕರು ಬೆಲೆ ಕೊಡುವಂತೆ ಹೆಚ್ಚಿನ ಬೆಲೆ ಕೊಡದೇ ಇರುವುದರಿಂದ ಪ್ರಸನ್ನವಾಗಿರುತ್ತಾನೆ. ಇದರ ಕಲಿತರೆ ಇನ್ನಾವ ವಿದ್ಯೆ ಕಲಿಯದಿದ್ದರೂ ತೊಂದರೆ ಇಲ್ಲ.
ಏಕೆಂದರೆ ಜೀವನದ ಉನ್ನತ ಗುರಿಯಾದ ಮುಕ್ತಿ (ಜೀವನದಲ್ಲಿ ಇದ್ದಾಗಲೇ ಅನುಭವಿಸಬಹುದಾದ ಉನ್ನತ ಸಂತೃಪ್ತ ಭಾವ)ಯಿಂದ ಮಿಗಿಲಾದುದು ಯಾವುದೂ ಇಲ್ಲ. ಕೊರೋನಾದಂತಹ ಈ ಕಾಲಘಟ್ಟದಲ್ಲಿ ಇಂತಹ ವಿದ್ಯೆಯ ಅವಲಂಬಿಸುವುದೇ ಜಾಣತನದಿಂದ ಜೀವನ ನಡೆಸಬಹುದಾದ ಯುಕ್ತಿ. ಮಕ್ಕಳಿಗೂ ಧ್ಯಾನ ಯೋಗ ಕಲಿಸಬೇಕು. ತನ್ನೊಳಗೆ ತಾ ಆನಂದಿಸುವ ತತ್ವ ಕಲಿಸಬೇಕು. ಪ್ರತೀ ಋಣಾತ್ಮಕದಲ್ಲಿ ಧನಾತ್ಮಕತೆ ಇರುತ್ತದೆ. ಅದರ ಗ್ರಹಿಸುವವರಾಗಬೇಕು. ಇದು ಸರಳವಾದರೂ ಇದು ಅವರವರ ಪ್ರಾರಬ್ದ ಯೋಗವಿಲ್ಲದೇ ದೊರೆಯದು. ದೊರೆತರೂ ಅವರವರ ಕಲಿಕಾ ಮಟ್ಟಕ್ಕಿಂತ (ಪ್ರಾರಬ್ದಕ್ಕಿಂತ) ಹೆಚ್ಚಿನ ಅರಿವುಂಟಾಗದು.
ಏಕಾಂತ ಅತ್ಯುನ್ನತ ಸ್ಥಿತಿ:
ಅದಕ್ಕೇ ಶ್ರೀ ಶಂಕರರು ಸತ್ಸಂಗಕ್ಕಿಂತಲೂ ಮೇಲಿನ ಸ್ಥಿತಿ ನಿಸ್ಸಂಗವೆಂದು (ಏಕಾಂತ) ಕೊಂಡಾಡಿದ್ದಾರೆ. ನಿರ್ಮೋಹತ್ವ, ನಿಶ್ಚಲ ತತ್ವ (ಎಲ್ಲೆಲ್ಲೂ ಏಕವೇ ಇರುವುದೆಂಬ ತತ್ವ ನಿಶ್ಚಲವಾಗಿ ಗ್ರಹಿಸುವುದು) ಅದರ ಮುಂದಿನ ಭಾಗ. ಅದರಿಂದ ಜೀವಾತ್ಮ (ವ್ಯಕ್ತಿ) ಜೀವನದಲ್ಲಿ ಪಡಬಹುದಾದ ಅತ್ಯುನ್ನತ ಆನಂದ ಹೊಂದುವನು. ಎಂದರೆ ಮಾನವ ಜೀವನದ ಆತ್ಯಂತಿಕ ಸಂತೋಷಪಡಬಹುದಾದ ಸಾಧ್ಯತೆ ಒಂದು ಪೈಸೆ ಖರ್ಚು ಇಲ್ಲದ ಏಕಾಂತದಲ್ಲೇ...!
ಇದು ನಿಷ್ಕಾಮ ಭಕ್ತಿ. ನಿಷ್ಕಾಮದಿಂದ (ಸ್ವಾಂತಾಚ್ಚ ಭಾವ) ಅಂತರ್ಯದ ಭಗವಂತನ ಧ್ಯಾನ ಮಾಡುತ್ತಾ ಆನಂದದ ಅನುಭೂತಿ (ಸಮಾಧಿ) ಪಡೆಯುವ ವಿಧಾನವೇ ಇದು. ಆದ್ದರಿಂದ ನಿಷ್ಕಾಮ ಸಮಾಧಿ ಎನ್ನಬಹುದು. ಆದರೆ ತಾಂತ್ರಿಕ ಶಬ್ದಗಳ ಬಗ್ಗೆ ಪಾಂಡಿತ್ಯದ ಚಿಂತನೆಗಿಂತಲೂ ಪ್ರಾಯೋಗಿಕ ಸಾಧನೆ ಗುರಿಯಾಗಿರುವುದು ಉತ್ತಮ. ಮತ್ತೆ- 'ನಾನು ಆ ಹಂತದಲ್ಲಿದ್ದೇನೆ, ಈ ಹಂತದಲ್ಲಿ ಇದ್ದೇನೆ'- ಎಂಬ ಆಲೋಚನೆ ನಮ್ಮ ಅಹಮಿಕೆಗೆ ಆಹಾರ. ಅಹಂ ಮೇಲೆದ್ದರೆ ಅಧ್ಯಾತ್ಮ ಸಾಧನೆ ಶೂನ್ಯಕ್ಕೆ ತಲಪುವುದು. ಆದ್ದರಿಂದ ನಿರಂತರ ಎಚ್ಚರ ಮುಖ್ಯ. ಲಕ್ಷ್ಮಣ ವನವಾಸದ ಹದಿನಾಲ್ಕು ವರ್ಷ ನಿರಂತರ ಅಧ್ಯಾತ್ಮಿಕ ಎಚ್ಚರದಲ್ಲಿದ್ದು ಅಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಂಡ ಹಾಗೂ ಅದರಿಂದ ಇಂದ್ರಜೀತು (ರಾಕ್ಷಸ) ಸಂಹಾರ ಮಾಡಿದ. ನಮ್ಮೊಳಗಿನ ರಾಕ್ಷಸ ಸಂಹಾರಕ್ಕೂ ಅಧ್ಯಾತ್ಮಿಕ ಎಚ್ಚರ ಮುಖ್ಯ...
ಯಾವುದೇ ಕಾರ್ಯ ಮಾಡುವಾಗ ತನ್ನ ಅಹಂ ಮೇಲೆ ಏಳದಂತೇ ಜಾಗ್ರತೆವಹಿಸುವಿಕೆ ಅಥವಾ ಅಹಂ ಮೇಲೆ ಎದ್ದರೆ ಅಲ್ಲೇ ಮಣಿಸುವ ನಿರಂತರ ಪ್ರಾಮಾಣಿಕ ಯತ್ನ ಯಾ ಗಮನವ ಅಧ್ಯಾತ್ಮ ಎಚ್ಚರಿಕೆ ಎಂದೇ ಹೇಳುವುದು. ಇದರ ನಿರಂತರ ಕಾಪಾಡುವ ಪ್ರಕ್ರಿಯೆಗೆ ತುರೀಯಾವಸ್ಥೆ ಎನ್ನುವುದು.
'ಎಲ್ಲವೂ ಅವನಿಂದ ಅವನಿಗಾಗಿ ಅವನೇ (ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಂ....ಬ್ರಹ್ಮೈವತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನ) ನಡೆಸುತ್ತಿದ್ದಾನೆ. ನಾನು ನಿಮಿತ್ತ ಮಾತ್ರನಾಗಿ ನನ್ನ ಕರ್ತವ್ಯ ಮಾಡುವವ'- ಎಂದೇ ಭಾವಿಸುತ್ತಿದ್ದರೆ ಅಹಂ ತಲೆ ಎತ್ತದು. ಇದೇ ಅಹಂ ಮಣಿಸಲಿರುವ ಯುಕ್ತಿ. ಅದರಿಂದ ಮನ ಶಾಂತಿ ಸಮಾಧಾನ ಹೊಂದುವುದು ಯಾ ಮನಪ್ರಶಮನಗೊಳ್ಳುವುದು. ಇದನ್ನೇ ಯೋಗಾವಾಸಿಷ್ಠದಲ್ಲಿ ಯೋಗಃ ಮನಪ್ರಶಮನೋಪಾಯಃ ಎಂದದ್ದು. ಈ ವಿಧಾನ ಡಿವಿಜಿಯವರ ಕೆಳಗಿನ ವಾಕ್ಯಗಳ ಅನುಸಂಧಾನ ಮಾಡಿದಂತೆಯೇ ಆಗುವುದು.
ಅದು ಹೀಗಿದೆ-
ಮುಕ್ತಿಯೆಂಬುದು ಮನದ ಸಂಸ್ಥಿತಿಯೆ ಬೇರಲ್ಲ... ರಕ್ತಿ (ಆಸೆ) ವಿಪರೀತವದಕಾದಿರೆ ಮುಕ್ತಿ... ಯುಕ್ತಿಯಿಂದಲಿ ಕರಣ (ಇಂದ್ರಿಯ) ಚೇಷ್ಠಿತವ ತಿದ್ದುತೆ ಶಕ್ತಿವಂತನೆ ಮುಕ್ತ - ಮಂಕುತಿಮ್ಮ||
ಯುಕ್ತಿಯಿಂದಲಿ ಅಹಂ ಗೆಲ್ಲುವ ಗೆಲುವೇ ನಿಜ ಗೆಲುವು ಮತ್ತು ಇದರಿಂದಲೇ ಶಾಂತಿ ಸಮಾಧಾನ- ಇದೇ ಅಧ್ಯಾತ್ಮಿಕ ಎಚ್ಚರ. ಇದರ ನಿರಂತರ ಕಾಪಿಡುತ್ತಾ ನಮ್ಮ ಜೀವನಾನಂದ ಹೆಚ್ಚಿಸಿಕೊಳ್ಳೋಣ, ಅಂತಹ ಸಾಧನಾ ಪಥದಲ್ಲಿ ನಡೆಯೋಣ.
-ಶ್ಯಾಮ ಪ್ರಸಾದ ಮುದ್ರಜೆ
Key Words: ಹಿಂದೂ ಧರ್ಮ, ಆಧ್ಯಾತ್ಮಿಕ ಎಚ್ಚರ, Spiritual Awakening, Shankaracharya
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ