ಪುತ್ತೂರು: ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಪುತ್ತೂರಿನ ಪ್ರಪ್ರಥಮ ಸಿಬಿಎಸ್ಇ ಶಿಕ್ಷಣ ಸಂಸ್ಥೆ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲರಾಗಿ ಹಿರಿಯ ಶಿಕ್ಷಕಿ ಮಾಲತಿ ಡಿ ನಿಯುಕ್ತಿಗೊಂಡಿದ್ದಾರೆ. ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಪದಗ್ರಹಣ ಕಾರ್ಯಕ್ರಮ ಸರಳವಾಗಿ ನಡೆಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ನೂತನ ಪ್ರಾಚಾರ್ಯರಿಗೆ ಶುಭಾಶಯ ಕೋರಿದರು. ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಈ ಸಂದರ್ಭದಲ್ಲಿ ಹಾಜರಿದ್ದರು.
ಕಳೆದ ಇಪ್ಪತ್ತೇಳು ವರ್ಷಗಳಿಂದ ಬೋಧನಾ ಕ್ಷೇತ್ರದಲ್ಲಿರುವ ಮಾಲತಿ ಡಿ ಮಕ್ಕಳ ಮನಸ್ಸನ್ನರಿತು, ತಿದ್ದಿ ತೀಡಿ ಎಳೆಯ ಮಕ್ಕಳಿಗೆ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ವಿಜ್ಞಾನ ಶಿಕ್ಷಕಿಯಾಗಿದ್ದು ಮಕ್ಕಳಲ್ಲಿ ವಿಜ್ಞಾನದೊಂದಿಗೆ ಸುಜ್ಞಾನ ತುಂಬುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಇವರು ಬಿಎಸ್ಸಿ, ಎಂ.ಎಡ್ ಪದವೀಧರೆಯಾಗಿದ್ದು, ಇದಕ್ಕೂ ಪೂರ್ವದಲ್ಲಿ ಅಂಬಿಕಾ ವಿದ್ಯಾಲಯದಲ್ಲಿ ಉಪಪ್ರಾಂಶುಪಾಲರಾಗಿ ಕೆಲಸ ಮಾಡಿದ ಆಡಳಿತಾನುಭವ ಹೊಂದಿದ್ದಾರೆ. ಇವರು ಮೂಲತಃ ಉಪ್ಪಿನಂಗಡಿ ಸಮೀಪದ ದೋಸೆಮನೆಯವರಾಗಿದ್ದು ಅತ್ಯುತ್ತಮ ಶಿಕ್ಷಕಿಯಾಗಿ ಶಿಕ್ಷಣ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.