ಸುರತ್ಕಲ್: ಇಲ್ಲಿನ ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ಅನುದಾನಿತ ವಿದ್ಯಾದಾಯಿನೀ ಪ್ರೌಢ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಜ್ಞಾನಾರ್ಜನೆ ಮತ್ತು ಸೇವಾ ಮನೋಭಾವ: ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಗೌರವ ಸ್ವೀಕರಿಸಿದ ಶ್ರೀನಿವಾಸ್ ವಿಶ್ವವಿದ್ಯಾಲಯ ಮುಕ್ಕದ ಸಂಸ್ಕೃತ ಪ್ರೊಫೆಸರ್ ಯಾಜಿ ಡಾ|| ದಿವಾಕರ ಭಟ್ (ಪಾವಂಜೆ) ಮಾತನಾಡಿ, "ನಾವು ಶಿಕ್ಷಣ ಹಾಗೂ ವಿದ್ಯೆಯ ಗ್ರಹಿಕೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. 'ಪರೋಪಕಾರಾಯ ಇದಂ ಶರೀರಂ' ಎಂಬ ತತ್ತ್ವದಂತೆ ಬದುಕಿ ಬಾಳಬೇಕು" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಆದರ್ಶ ವ್ಯಕ್ತಿಗಳ ನಿರ್ಮಾಣ: ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಹಾಗೂ ಸಂಘದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಸುಧಾಕರರಾವ್ ಪೇಜಾವರ್, "ಇಂದು ಆದರ್ಶ ವ್ಯಕ್ತಿಗಳನ್ನು ರೂಪಿಸುವ ಮತ್ತು ಬದುಕುವ ಕಲೆಯನ್ನು ಕಲಿಸುವ ಮಾರ್ಗದರ್ಶಕರ ದಿನ" ಎಂದು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಜೀವನ ರಥಕ್ಕೆ ಗುರುವಿನ ಮಾರ್ಗದರ್ಶನ: ಶಾಲೆಯ ಹಳೆ ವಿದ್ಯಾರ್ಥಿ ಸಂಘದ (ರಿ.) ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಕುಳಾಯಿ ಮಾತನಾಡಿ, "ರಥದ ಗಾಲಿಗಳು ಸರಿಯಾದ ದಾರಿಯಲ್ಲಿ ಸಾಗಿದಾಗ ಮಾತ್ರ ಗಮ್ಯ ತಲುಪಲು ಸಾಧ್ಯ. ಹಾಗೆಯೇ ಶಿಷ್ಯನ ಜೀವನವೂ ಗುರುವಿನ ಸನ್ಮಾರ್ಗದರ್ಶನದಲ್ಲಿ ಸಾಗಿದಾಗ ಸಾರ್ಥಕತೆ ಪಡೆಯುತ್ತದೆ. ಗುರು ನೀಡಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ದೊಡ್ಡ ಗೌರವ" ಎಂದರು.
ನಿವೃತ್ತ ಶಿಕ್ಷಕಿಗೆ ಸನ್ಮಾನ: ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಪ್ರಭಾರ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ಶ್ರೀಮತಿ ರೇವತಿ ಬಿ. ಅವರ ಸೇವೆಯನ್ನು ಸ್ಮರಿಸಿ, ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಲಾಯಿತು.
ಗುರುವಂದನೆ: ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರಿ ಎಂ. ಮತ್ತು ಪೋಷಕರು ವಿದ್ಯಾರ್ಥಿಗಳ ಮೂಲಕ ಶಾಲೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರಿಗೆ ಗುರುವಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳ ಪ್ರಸ್ತುತಿ: ವಿದ್ಯಾರ್ಥಿಗಳಾದ ಜೆ.ಕೆ. ಭವಿಷ್ಯ ಮತ್ತು ದೀಪಿಕಾ ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು. ಸಂಹಿತಾ ಮತ್ತು ಬಳಗದವರು ಗುರುಮಹಿಮೆಯ ಗೀತೆಯನ್ನು ಗಾಯನ ಮಾಡಿದರು.
ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಗೌರವಾಧ್ಯಕ್ಷರಾದ ಗಂಗಾಧರ ಪೂಜಾರಿ, ಶ್ರೀಲಕ್ಷ್ಮಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಶಿಕಲಾ, ನಿವೃತ್ತ ಸಹಶಿಕ್ಷಕಿ ಸುಜಾತಾ ಕುಳಾಯಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ದಿವಸ್ಪತಿ ಉಪಸ್ಥಿತರಿದ್ದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರಿ ಎಂ. ಸ್ವಾಗತಿಸಿದರು. ಪದ್ಮ ಶ್ರೀಹರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯೆ ಲಕ್ಷ್ಮೀ ಧನ್ಯವಾದ ಸಮರ್ಪಿಸಿದರು. ಪೋಷಕರು, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


