ಅನುಚಿತ ವರ್ತನೆಗೆ ಸಂತ್ರಸ್ತರನ್ನು ಹೊಣೆ ಮಾಡಲಾಗದು: ಡಾ. ದಿವ್ಯಾ ರಾಣಿ

Upayuktha
0



ಉಡುಪಿ: ಉಡುಪು, ಸ್ನೇಹ ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯಂತಹ ವೈಯಕ್ತಿಕ ಆಯ್ಕೆಗಳು ಯಾವುದೇ ರೀತಿಯ ಲೈಂಗಿಕ ಕಿರುಕುಳಕ್ಕೆ ಸಮ್ಮತಿಯಾಗುವುದಿಲ್ಲ. ಅನುಚಿತ ವರ್ತನೆಗೆ ಅದನ್ನು ಅನುಭವಿಸಿದ ವ್ಯಕ್ತಿಯನ್ನೇ ಹೊಣೆ ಮಾಡುವುದು ಸರಿಯಲ್ಲ ಎಂದು ಜಿಲ್ಲಾ  ಪೋಶ್ ಸಮಿತಿ ಸದಸ್ಯೆ ಡಾ. ದಿವ್ಯಾ ರಾಣಿ ಪ್ರದೀಪ್ ಹೇಳಿದರು.


ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ನಡೆದ ಲೈಂಗಿಕ ಕಿರುಕುಳ ತಡೆ (POSH-ಪೊಶ್) ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.


ಸಮ್ಮತಿ ಇಲ್ಲದೆ ನಡೆಯುವ ಯಾವುದೇ ಲೈಂಗಿಕ ವರ್ತನೆಯನ್ನು ಸಮರ್ಥಿಸಲಾಗದು. ಯಾರೊಂದಿಗಾದರೂ ಸ್ನೇಹ ಹೊಂದಿರುವುದು, ಏಕಾಂಗಿಯಾಗಿ ಇರುವುದಾಗಲಿ, ವಾಹನದಲ್ಲಿ ಪ್ರಯಾಣಿಸಲು ಒಪ್ಪಿಕೊಳ್ಳುವುದಾಗಲಿ ಅಥವಾ ಸೌಜನ್ಯದಿಂದ ವರ್ತಿಸುವುದಾಗಲಿ ಲೈಂಗಿಕ ವರ್ತನೆಗೆ ಅನುಮತಿ ನೀಡಿದಂತಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಲೈಂಗಿಕ ಕಿರುಕುಳದ ಕುರಿತು ಲಿಖಿತ ದೂರನ್ನು ಆಂತರಿಕ ಸಮಿತಿಗೆ ಸಲ್ಲಿಸಬಹುದು. ದೂರು ವಿಚಾರಣೆಯ ಸಂದರ್ಭದಲ್ಲಿ ಸಂಬಂಧಪಟ್ಟ ಎಲ್ಲರಿಗೂ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು. ಪ್ರಕ್ರಿಯೆಯು ಕಾನೂನು ಹಾಗೂ ಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ಅವರು ಹೇಳಿದರು.


ಕನ್ನಡ ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಕಾಲ ಬದಲಾದಂತೆ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಸ್ವರೂಪವೂ ಬದಲಾಗಿದೆ ಎಂದರು. ಹಿಂದೆ ಕೌಟುಂಬಿಕ ದೌರ್ಜನ್ಯ ಸೇರಿದಂತೆ ಕೆಲವು ಸಮಸ್ಯೆಗಳು ಪ್ರಮುಖವಾಗಿದ್ದರೆ, ಇಂದು ಅತ್ಯಾಚಾರ, ಕೊಲೆ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಸವಾಲುಗಳು ಎದುರಾಗಿವೆ. ಮನೆ, ಕೆಲಸದ ಸ್ಥಳ ಹಾಗೂ ಸಮಾಜದಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಸಂಯೋಜಕಿ ಹಾಗೂ ಕಾಲೇಜಿನ ಮಹಿಳಾ ಕುಂದುಕೊರತೆ ಪರಿಹಾರ ಸಮಿತಿಯ ಸಂಚಾಲಕಿ ಕವಿತಾ ಮಾತನಾಡಿ, ಲೈಂಗಿಕ ಕಿರುಕುಳ ತಡೆಗೆ ಎಲ್ಲ ಲಿಂಗಗಳಲ್ಲೂ ಅರಿವು ಮೂಡಿಸುವ ಅಗತ್ಯವಿದೆ ಎಂದರು. ತಡೆ, ನಿಷೇಧ ಮತ್ತು ಪರಿಹಾರ ಕ್ರಮಗಳು ಲೈಂಗಿಕ ಕಿರುಕುಳವನ್ನು ಎದುರಿಸುವ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ. ನಿಕೇತನ ಮಾತನಾಡಿ, ಇಂತಹ ಕಾರ್ಯಕ್ರಮಗಳು ಭಯಮುಕ್ತ ಹಾಗೂ ಸುರಕ್ಷಿತ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತವೆ ಎಂದರು. ಸಂಸ್ಥೆಯಲ್ಲಿ ಪರಸ್ಪರ ಗೌರವ, ಜಾಗೃತಿ ಮತ್ತು ಹೊಣೆಗಾರಿಕೆಯ ಸಂಸ್ಕೃತಿ ಬೆಳೆಸುವುದು ಅಗತ್ಯ ಎಂದು ಹೇಳಿದರು.


ಪ್ರೊ. ಕೃಷ್ಣ ಭಟ್, ಉಡುಪಿ ಪೋಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಶ್ರುತಿ ಹಾಗೂ ರಶ್ಮಿ ಉಪಸ್ಥಿತರಿದ್ದರು. 


ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ರಾಕೇಶ್ ನಿರೂಪಿಸಿದರು. ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ರೇಖಾ ಎಸ್.ಎನ್. ಸ್ವಾಗತಿಸಿದರು. ರಮ್ಯಾ ಕೆ ಐತಾಳ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ರಮ್ಯಾ ವಿ. ಹಾಗೂ ಡಾ. ಸಫಿಯಾ ಅತಿಥಿಗಳನ್ನು ಪರಿಚಯಿಸಿದರು. ಶರತ್ ಕುಮಾರ್ ವಂದಿಸಿದರು.


ಮಹಿಳಾ ಕುಂದುಕೊರತೆ ಪರಿಹಾರ ಸಮಿತಿ, ಯುವ ರೆಡ್‌ಕ್ರಾಸ್ ಘಟಕ, ಎನ್‌ಎಸ್‌ಎಸ್ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಸಮಿತಿ ಸಭೆ

ಕಾರ್ಯಾಗಾರಕ್ಕೂ ಮುನ್ನ, ಮಹಿಳಾ ಕುಂದುಕೊರತೆ ಪರಿಹಾರ ಸಮಿತಿಯ ಸಭೆ ಪ್ರಾಂಶುಪಾಲರಾದ ಪ್ರೊ. ನಿಕೇತನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮಗಳ ಬಗ್ಗೆ ಸಮಾಲೋಚಿಸಲಾಯಿತು. 


ಸಮಿತಿಯ ಸದಸ್ಯರು, ಇಬ್ಬರು ಉಡುಪಿ ಪೋಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಹಾಗೂ ಜಿಲ್ಲಾ ಪೊಶ್ ಸಮಿತಿಯ ಸದಸ್ಯೆ ಸಭೆಯಲ್ಲಿ ಭಾಗವಹಿಸಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top