ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್ಗೆ 'ಜನ್ಮಾಷ್ಟಮೀ ಪುರಸ್ಕಾರ' ಪ್ರದಾನ
ನವದೆಹಲಿ: ಇಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ 39ನೇ ಚಾತುರ್ಮಾಸ್ಯ ವ್ರತದ ಅಂಗವಾಗಿ ಆಯೋಜಿಸಲಾದ ಮೂರು ದಿನಗಳ ವೈಭವದ ಶ್ರೀ ಕೃಷ್ಣಾಷ್ಟಮೀ ಉತ್ಸವಕ್ಕೆ ಚಾಲನೆ ದೊರೆತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಜಲಸಾರಿಗೆ ರಾಜ್ಯ ಸಚಿವ ಹಾಗೂ ದೆಹಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹರ್ಷ ಮಲ್ಹೋತ್ರಾ ಅವರು ಮಂಗಳವಾರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಹಿರಿಯ ಐಎಎಸ್ ಅಧಿಕಾರಿಗೆ ಗೌರವ
ಉತ್ಸವದ ಸಂದರ್ಭದಲ್ಲಿ, ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉಡುಪಿ ಮೂಲದ ಹಿರಿಯ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್ ಅವರಿಗೆ ಶ್ರೀ ಪೇಜಾವರ ಮಠ ಸಂಸ್ಥಾನದ ವತಿಯಿಂದ ಪೂಜ್ಯ ಶ್ರೀಗಳು ‘ಜನ್ಮಾಷ್ಟಮೀ ಪುರಸ್ಕಾರ’ ಪ್ರದಾನ ಮಾಡಿ ಆಶೀರ್ವದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಶ್ ಪ್ರಸಾದ್, "ಪೇಜಾವರ ಮಠ ಮತ್ತು ಶ್ರೀಗಳ ಮೂಲಕ ದಶಕಗಳಿಂದ ಇಡೀ ದೇಶಕ್ಕೆ, ವಿಶೇಷವಾಗಿ ಸನಾತನ ಧರ್ಮ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಸಿಗುತ್ತಿರುವ ಬಹುಮುಖಿ ಸೇವೆ ಮತ್ತು ಮಾರ್ಗದರ್ಶನ ಬೆಲೆಕಟ್ಟಲಾಗದ್ದು" ಎಂದು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ಮೀನಾಕ್ಷಿ ಲೇಖಿ, ಶಾಸಕರಾದ ಅನಿಲ್ ಶರ್ಮಾ, ಅಜಯ್ ಮಹಾವೀರ್, ಜೋಧ್ಪುರದ ನಾಮಧಾರಿ ಸಂಪ್ರದಾಯದ ಸಂತ ಶ್ರೀನಿವಾಸ್ ಹಾಗೂ ಮುಂಬಯಿಯ ಪ್ರಸಿದ್ಧ ವಕೀಲ ವಿಜಯ ಕುಲಕರ್ಣಿ ಉಪಸ್ಥಿತರಿದ್ದು ಶುಭಾಶಂಸನೆ ಗೈದರು. ಡಾ. ವಿಠೋಬಾಚಾರ್ಯ, ರಾಕೇಶ್ ಗೌರ್ ಮತ್ತು ಅಶ್ವಿನ್ ಕಕ್ರಣ್ಣಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಮೆರುಗು: ಉದ್ಘಾಟನಾ ಸಮಾರಂಭದಲ್ಲಿ ಗುರುಕುಲದ ಪುಟಾಣಿ ಮಕ್ಕಳು ಬಾಲಕೃಷ್ಣನ ವೇಷ ಧರಿಸಿ ನಡೆಸಿಕೊಟ್ಟ ಬೆಣ್ಣೆ ತಿನ್ನುವ ಪ್ರಹಸನವು ಸಭಿಕರ ಮನಸೆಳೆಯಿತು.
ಈ ಕಾರ್ಯಕ್ರಮದ ಸಂಯೋಜನೆಯನ್ನು ವಾಸುದೇವ ಭಟ್ ಪೆರಂಪಳ್ಳಿ ವಹಿಸಿದ್ದು, ಸುಧಾಂಶು ಮಿಶ್ರಾ ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

