ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ವತಿಯಿಂದ ಭಾರತೀಯ ಅಂಚೆ ವಿಭಾಗ ಪುತ್ತೂರು ಇವರ ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಮತ್ತು ನವೀಕರಣ ಶಿಬಿರ ನಡೆಯಿತು. ಶಿಬಿರವನ್ನು ಭಾರತೀಯ ಅಂಚೆ ವಿಭಾಗ ಉಜಿರೆಯ ಉಪ ಅಂಚೆ ಪಾಲಕರಾದ ಶ್ರೀಮತಿ ಜ್ಯೋತಿರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು "ಆಧಾರ್ ಮಾಹಿತಿಯು ಇಂದಿನ ದಿನಗಳಲ್ಲಿ ಆಡಳಿತಾತ್ಮಕವಾಗಿ ಬಹಳ ಉಪಯುಕ್ತವಾದುದು. ಅಂಚೆ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿಗೆ ದಿನ ನಿತ್ಯ ಅನೇಕ ಜನರು ತಮ್ಮ ಕೆಲಸಗಳನ್ನು ಬಿಟ್ಟು ದಿನವಿಡೀ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎನ್ ಎಸ್ ಎಸ್ ಘಟಕ ಆಧಾರ್ ತಿದ್ದುಪಡಿ ಶಿಬಿರ ಎಂಬ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ಮೂಲಕ ವಿದ್ಯಾರ್ಥಿಗಳು ಬಹಳ ಸುಲಭವಾಗಿ ಆಧಾರ್ ತಿದ್ದುಪಡಿ ಮಾಡಿಕೊಳ್ಳಲು ಸಹಾಯಕವಾಗಿದೆ" ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ಮಾತನಾಡಿ "ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಹಲವಾರು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ನೀಟ್, ಸಿಇಟಿ ಮುಂತಾದ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಮಾಹಿತಿ ಸರಿಯಾಗಿ ಇರಬೇಕಾದುದು ಅವಶ್ಯಕವಾಗಿದೆ. ಆದುದರಿಂದ ಎನ್ಎಸ್ಎಸ್ ಘಟಕ ಆಯೋಜಿಸಿರುವ ಈ ಆಧಾರ್ ತಿದ್ದುಪಡಿ ಶಿಬಿರ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪಯುಕ್ತವಾದುದು. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು" ಎಂದು ಹೇಳಿದರು.
ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಡಾ. ರಾಜೇಶ್ ಬಿ, ಬಾಳಿಲ ಅಂಚೆ ಕಚೇರಿಯ ಶಾಖಾ ಅಂಚೆಪಾಲಕರಾದ ಪ್ರಜ್ವಲ್ ಸಿ ವಿ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ವಿಶ್ವನಾಥ್ ಎಸ್, ಸಹ ಕಾರ್ಯಕ್ರಮಾಧಿಕಾರಿ ಶೋಭಾ ಪಿ, ಘಟಕದ ನಾಯಕಿ ನವನೀತು ಉಪಸ್ಥಿತರಿದ್ದರು.
ಸ್ವಯಂ ಸೇವಕಿ ಅನ್ವಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸುಪೇಕ್ಷಾ ಸ್ವಾಗತಿಸಿ ಸ್ವಯಂ ಸೇವಕ ಕಾರ್ತಿಕ್ ಧನ್ಯವಾದವಿತ್ತರು.
