ನವದೆಹಲಿ: ಇಲ್ಲಿನ ವೇದವ್ಯಾಸ ಗುರುಕುಲದಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ಮಠದ ಶ್ರೀ ಚಾತುರ್ಮಾಸ್ಯ ವ್ರತ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಶ್ರೀ ಪೇಜಾವರ ಮಠ ಸಂಸ್ಥಾನದ ವತಿಯಿಂದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು 'ನ್ಯಾಯಾಂಗ ವಿಚಕ್ಷಣ' ಎಂಬ ಅಭಿದಾನ ನೀಡಿ, ಫಲತಾಂಬೂಲ ಹಾಗೂ ಮಂತ್ರಾಕ್ಷತೆಯೊಂದಿಗೆ ಭಾವಪೂರ್ಣವಾಗಿ ಸಂಮಾನಿಸಿ ಆಶೀರ್ವದಿಸಿದರು.
ಭಾರತೀಯ ನ್ಯಾಯಾಂಗ ಕ್ಷೇತ್ರಕ್ಕೆ ಆರ್. ವೆಂಕಟರಮಣಿ ಅವರು ಸಲ್ಲಿಸಿದ ಸುದೀರ್ಘ, ನಿಷ್ಠಾವಂತ ಹಾಗೂ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ಸಮರ್ಪಿಸಲಾಯಿತು.
ಸಮಾರಂಭದಲ್ಲಿ ಶುಭಾಶಂಸನೆಗೈದ ನವದೆಹಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಮುರಳಿ ಮನೋಹರ್ ಪಾಠಕ್ ಅವರು, ದೇಶದ ಕಾನೂನು ಕ್ಷೇತ್ರ ಮತ್ತು ಭಾರತೀಯ ಮೌಲ್ಯಗಳ ನಡುವಿನ ಸೇತುವೆಯಾಗಿ ವೆಂಕಟರಮಣಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣ ಆಚಾರ್ಯರು ಅಭಿನಂದನಾ ಭಾಷಣ ಮಾಡಿ, ಸನ್ಮಾನಿತರ ಸಾಧನೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಎನ್. ವಿಠಲ ಭಟ್ ಉಪಸ್ಥಿತರಿದ್ದರು. ಸುಮನ್ ಆಚಾರ್ಯ ಅಭ್ಯಾಗತರನ್ನು ಸ್ವಾಗತಿಸಿದರು. ವೇದವ್ಯಾಸ ಗುರುಕುಲದ ವಿದ್ಯಾರ್ಥಿ ರುದ್ರ ಪಾಠಕ್ ಗೌರವ ಮಾನಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಅನೇಕ ಭಕ್ತಾದಿಗಳು ಹಾಗೂ ವಿದ್ವಾಂಸರು ಭಾಗವಹಿಸಿದ್ದರು.
ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ,2026: ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದಂಪತಿ ಹಾಗೂ ಅಡಿಶನಲ್ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ದಂಪತಿಗಳನ್ನು ಶ್ರೀ ಸ್ವಾಮೀಜಿಯವರು ಅಭಿನಂದಿಸಿ ಆಶೀರ್ವದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


