ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ದಿನಾಚರಣೆ

Upayuktha
0

ಅಕ್ಷಯ ಸೇವಾ ಪುರಸ್ಕಾರ/ಗುರು ಪುರಸ್ಕಾರ/ಗೌರವ ಪುರಸ್ಕಾರ


ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸೆ.12 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಪೂರ್ವಾಹ್ನ ನೆರವೇರಿತು.


ವಿದ್ಯಾರ್ಥಿಗಳಲ್ಲಿ ಸಾಧಿಸುವ ಗುರಿ ಇರಬೇಕು-ಕಲಾವತಿ ಜಯಂತ್

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್‌ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಪ್ರಬುದ್ಧತೆಯಾಗಿ ಬೆಳೆಸಿದಾಗ ವಿದ್ಯಾರ್ಥಿಗಳು ಜೀವನದಲ್ಲಿ ಯಶ ಕಂಡುಕೊಳ್ಳುತ್ತಾರೆ. ವಿದ್ಯಾರ್ಥಿಗಳಲ್ಲಿ ಸಾಧಿಸುವ ಗುರಿ ಇರಬೇಕಾದರೆ ಆವರ ಹಿಂದೆ ಸಾಧಕ ಗುರುವಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಗೆಳೆಯರಂತೆ ಬೆರೆತು ಜೀವನದಲ್ಲಿ ಶಿಸ್ತನ್ನು ಮೂಡಿಸುತ್ತಿರುವ ಶಿಕ್ಷಕರಿಗೆ ನಮನಗಳು ಎಂದರು.


ಶಿಕ್ಷಕರು ತಮ್ಮ ಹೆಸರಿನ ಮುಂದೆ ಟೀಚರ್ ಎಂದು ನಮೂದಿಸಬಹುದು-ಡಾ.ಸುರೇಶ್ ಪುತ್ತೂರಾಯ

ಬೊಳ್ವಾರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ವೃತ್ತಿಪರ ಶಿಕ್ಷಣದ ಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಧಾರಿತ ಶಿಕ್ಷಣ ನೀಡುತ್ತಿರುವ ಅಕ್ಷಯ ಕಾಲೇಜು ಇದೀಗ ರಾಜ್ಯಾದಾದ್ಯಂತ ಹೆಸರುವಾಸಿಯಾಗಿದೆ. ಶಿಕ್ಷಕರ ದಿನಾಚರಣೆ ಸಂದರ್ಭ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೆತ್ತವರಾದ ಶಿಕ್ಷಕರನ್ನು ಸಮ್ಮಾನಿಸುವ ಅಪೂರ್ವ ಕಾರ್ಯಕ್ರಮ ಶ್ಲಾಘನೀಯ. ಇದೀಗ ಸರಕಾರವು ಸೂಚಿಸಿದಂತೆ ಹೇಗೆ ವೈದ್ಯರು ಹೆಸರಿನ ಹಿಂದೆ ಡಾಕ್ಟರ್ ಎಂದು ಹಾಕಿಕೊಳ್ಳುತ್ತಾರೋ ಹಾಗೆಯೇ ಶಿಕ್ಷಕರು ಮುಂದಿನ ದಿನಗಳಲ್ಲಿ ಹೆಸರಿನ ಮುಂದೆ `ಟೀಚರ್' ಎಂದು ಹಾಕಿಕೊಳ್ಳಬಹುದಾಗಿದೆ, ಇದು ಸರಕಾರದ ಉತ್ತಮ ಹೆಜ್ಜೆ ಎಂದರು. 


ಕಷ್ಟಪಟ್ಟು ಓದಬೇಡಿ, ಇಷ್ಟಪಟ್ಟು ಓದಿ, ಪ್ರೀತಿಸಿ, ಯಶಸ್ಸನ್ನು ಸಾಧಿಸುವವರಾಗಿ-ಎಸ್.ಐ ಭಟ್

ಸಂತ ಫಿಲೋಮಿನಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಎಸ್.ಐ ಭಟ್ ಮಾತನಾಡಿ, ಓರ್ವ ಕೃಷಿಕರಾಗಿ, ಉದ್ಯಮಿಯಾಗಿ ಇದೀಗ ಶಿಕ್ಷಣ ಸಂಸ್ಥೆಯನ್ನು ತೆರೆದು ಹಂತ ಹಂತದಲ್ಲಿ ಬೆಳೆದು ಬಂದು ಓರ್ವ ಶಿಕ್ಷಣ ತಜ್ಞರಾಗಿ ತನ್ನ ವಿದ್ಯಾರ್ಥಿ ಜಯಂತ್ ನಡುಬೈಲುರವರು ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಎಂಬುದು ಕೇವಲ ಸರ್ಟಿಫಿಕೇಟ್‌ಗೋಸ್ಕರ ಅಲ್ಲ, ಶಿಕ್ಷಣವನ್ನು ವೈಚಾರಿಕವಾಗಿ ಚಿಂತಿಸಬೇಕು. ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ, ಸಂಸ್ಕಾರದ ರಾಯಭಾರಿಗಳಾಗಬೇಕು, ಉತ್ತಮ ರಾಷ್ಟç ನಿರ್ಮಾಣ ಮಾಡುವ ಜವಾಬ್ದಾರಿ ಹೊಂದಿರುವವರಾಗಬೇಕು. ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ವಿಷಯವನ್ನು ಕಷ್ಟಪಟ್ಟು ಓದಬೇಡಿ, ಇಷ್ಟಪಟ್ಟು ಓದಿ, ಪ್ರೀತಿಸಿ, ಯಶಸ್ಸನ್ನು ಸಾಧಿಸುವವರಾಗಿ ಎಂದರು.


ಜೀವನದ ಪಾಠ ಹೇಳಿಕೊಟ್ಟ ಗುರುಗಳಿಗೆ ಅಭಿನಂದನೆ-ಜಯಂತ್ ನಡುಬೈಲು

ಅಧ್ಯಕ್ಷತೆ ವಹಿಸಿದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ನನ್ನ ವಿದ್ಯಾರ್ಜನೆ ಸಮಯದಲ್ಲಿ ನನಗೆ ಪಾಠದ ಜೊತೆಗೆ ಜೀವನದ ಪಾಠವನ್ನು ಹೇಳಿಕೊಟ್ಟ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಸೌಭಾಗ್ಯದ ಜೊತೆಗೆ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ನಾನು ಇವತ್ತು ಒಳ್ಳೆ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ನನ್ನ ಮಾರ್ಗದರ್ಶನ ಏನಿದ್ದರೂ ನಾನು ನನ್ನ ಗುರುಗಳಿಂದ ಪಡೆದುದಾಗಿದೆ. ಹಾಗಾಗಿ ನನ್ನ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಜೀವನದಲ್ಲಿ ನೆಲೆಯನ್ನು ಕಂಡುಕೊAಡಿದ್ದಾರೆ. ಇದು ನನಗೆ ಅತ್ಯಂತ ಖುಷಿಯ ವಿಚಾರ. ನಾನು ನನ್ನ ಪರಿವಾರ ವಿದ್ಯಾರ್ಥಿಗಳ ಭವಿಷ್ಯದತ್ತ ಸದಾ ಶ್ರಮಿಸುತ್ತೇವೆ. ಇದರಿಂದ ವಿದ್ಯಾರ್ಥಿಗಳು ಯಶಸ್ಸನ್ನು ಕಾಣಬೇಕು ಎಂದರು. 


ಶಿಕ್ಷಕರು ಕೇವಲ ಅಕ್ಷರ ಕಲಿಸುವುದಿಲ್ಲ, ಬದುಕನ್ನು ಕಲಿಸುತ್ತಾರೆ-ಆರ್.ಸಿ ನಾರಾಯಣ್

ಕುಂಬ್ರ ಮೂರ್ತೆದಾರರ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್‌ರವರು ಪುಸ್ತಕ ಬಿಡುಗಡೆಯನ್ನು ನೆರವೇರಿಸಿ ಮಾತನಾಡಿ, "ಮಾತಾ, ಪಿತಾ, ಗುರು, ದೈವ" ಎನ್ನುವಂತೆ ತಾಯಿ-ತಂದೆಯ ನಂತರ ಅತ್ಯಂತ ಉನ್ನತ ಸ್ಥಾನ ಶಿಕ್ಷಕರಿಗೆ. ತಾಯಿ ಜನ್ಮ ಕೊಟ್ಟರೆ, ಶಿಕ್ಷಕರು ಆ ಜನ್ಮಕ್ಕೆ ಅರ್ಥ ಕೊಡುತ್ತಾರೆ. ಅವರು ಕೇವಲ ಅಕ್ಷರ ಕಲಿಸುವುದಿಲ್ಲ, ಬದುಕನ್ನು ಕಲಿಸುತ್ತಾರೆ. ಒಂದು ದೀಪ ಇನ್ನೊಂದು ದೀಪವನ್ನು ಬೆಳಗಿಸುವಂತೆ, ಶಿಕ್ಷಕರು ನಮ್ಮೊಳಗಿನ ಜ್ಞಾನದ ದೀಪವನ್ನು ಬೆಳಗಿಸುತ್ತಾರೆ. ಅಂತಹ ಶಿಕ್ಷಕರ ತಂಡವನ್ನು ನಾನು ಇಲ್ಲಿ ನೋಡಿ ಮೂಕವಿಸ್ಮಿತನಾದೆ. ನಿಜವಾಗಲೂ ಧನಾತ್ಮಕ ಉದ್ದೇಶದಿಂದ ಕೂಡಿರುವ ಸಂಸ್ಕಾರಯುತ ಅಕ್ಷಯ ಕಾಲೇಜಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.


ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು, ಕಲಿತ ಸಂಸ್ಕೆಯನ್ನು ಪ್ರೀತಿಸುವವರಾಗಿರಿ-ಇಬ್ರಾಹಿಂ ಕೆ

ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಇಬ್ರಾಹಿಂ ಕೆ.ಮಾತನಾಡಿ, ತಂತ್ರಜ್ಞಾನದ ಯುಗದಲ್ಲಿ ನಾವಿದ್ದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಡುವೆ ಶಿಕ್ಷಕರು ಬಹಳಷ್ಟು ಕಷ್ಟಪಡಬೇಕಾಗಿದೆ. ಅಕ್ಷಯ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳ ಶಿಕ್ಷಕ ಹೆತ್ತವರನ್ನು ಗೌರವಿಸುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ ಮಾತ್ರವಲ್ಲ ಇದು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಶಾಲಾ ಕಾಲೇಜಿನಲ್ಲಿ ಪ್ರತಿಯೋರ್ವ ವಿದ್ಯಾರ್ಥಿಗೆ ಕೆಲವೊಂದು ಶಿಕ್ಷಕರ ಬಗ್ಗೆ ಬಹಳಷ್ಟು ಪ್ರೀತಿ ಇದೆ ಜೊತೆಗೆ ಕೆಲವು ಶಿಕ್ಷಕರನ್ನು ಗೋಳು ಹೊಯ್ದುಕೊಂಡದ್ದಿದೆ. ಆದ್ರೆ ಅದೇ ಶಿಕ್ಷಕ ಸಮಾಜದಲ್ಲಿ 'ಇನ್ನಿಲ್ಲ' ಅಂದಾಗ ಅಂತಹ ವಿದ್ಯಾರ್ಥಿಗಳ ಗೋಳು ಹೇಳತೀರದು. ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು, ಕಲಿತ ಸಂಸ್ಕೆಯನ್ನು ಎಂದಿಗೂ ಪ್ರೀತಿಸುವಂತಾಗಿರಿ ಎಂದರು.


ಪ್ರತಿಭಾವಂತ ಶಿಕ್ಷಕರಿಂದ ಕೂಡಿದ ಸಂಸ್ಥೆ ಅಕ್ಷಯ ಕಾಲೇಜು-ಸೂರ್ಯ

ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂರ್ಯ ಮಾತನಾಡಿ, ಅಕ್ಷಯ ಕಾಲೇಜು ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯಿಂದ ಪ್ರೋತ್ಸಾಹಿಸುತ್ತಿದ್ದಾರೆ. ಪುತ್ತೂರಿನ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಬಹಳ ಪ್ರತಿಭಾವಂತರು ಎನ್ನುವ ಮಾತಿದೆ ಯಾಕೆಂದರೆ ಈ ಸಂಸ್ಥೆಯ ಉಪನ್ಯಾಸಕರೇ ಪ್ರತಿಭಾವಂತರಾಗಿರುವಾಗ ವಿದ್ಯಾರ್ಥಿಗಳು ಕೂಡ ಪ್ರತಿಭಾವಂತರಾಗುವಲ್ಲಿ ಪ್ರಮುಖ ಕಾರಣವಾಗುತ್ತದೆ. ಸೋಲು-ಗೆಲುವಿನಲ್ಲಿ ಮಾತ್ರವಲ್ಲ ಎಲ್ಲಾ ವಿಷಯದಲ್ಲಿ ಕಾಲೇಜಿನ ಶಿಕ್ಷಕರ ಪ್ರೋತ್ಸಾಹ ಸದಾ ಇದ್ದೇ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಗೆಳೆಯರಂತೆ ಬೆರೆತು ಜೀವನದಲ್ಲಿ ಶಿಸ್ತನ್ನು ಮೂಡಿಸುತ್ತಿರುವ ಶಿಕ್ಷಕರಿಗೆ ನಮನಗಳು ಎಂದರು.


ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೌರವ

ಈ ಸಂದರ್ಭದಲ್ಲಿ ಅತಿಥಿ ಗಣ್ಯರು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.


ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಗೌರವಾರ್ಪಣೆ

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬೋಧಕ-ಬೋಧಕೇತರ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗಿದ್ದು, ಅಕ್ಷಯ ಪದವಿ ಕಾಲೇಜಿನ ಸಿಬ್ಬಂದಿಗಳ ವಿವರವನ್ನು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಅಕ್ಷಯ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗಳ ವಿವರವನ್ನು ಪ್ರಾಂಶುಪಾಲ ಅಭಿಲಾಷ್ ಕ್ಷತ್ರೀಯ, ಅಕ್ಷಯ ಕೆರಿಯರ್ ಅಕಾಡೆಮಿ ಹಾಗೂ ಅಕ್ಷಯ ಕೆರಿಯರ್ ಡೆಸ್ಟಿನಿ ಮಂಗಳೂರು ಇದರ ಸಿಬ್ಬಂದಿಗಳ ವಿವರವನ್ನು ಅಕ್ಷಯ ಕೆರಿಯರ್ ಡೆಸ್ಟಿನಿ ಮಂಗಳೂರು ಸಂಸ್ಥಾಪಕಿ ಜಯಶ್ರೀರವರು ಮಂಡಿಸಿದ್ದು ಸಿಬ್ಬಂದಿಗಳಿಗೆ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲು ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್‌ರವರು ಶಾಲು ಹೊದಿಸಿ, ಕಿರುಕಾಣಿಕೆಯನ್ನು ನೀಡು ಗೌರವಿಸಿದರು. 


ಉದ್ಯೋಗಿ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ

ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾಗಿದ್ದು, ಪ್ರಸಕ್ತ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿರುವ ಪ್ರಕೃತಿ(ಫ್ಯಾಷನ್ ಡಿಸೈನ್), ಚೈತ್ರಾ, ಗೀತಾ, ಬಿಂದುಶ್ರೀ(ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್), ಪ್ರಥ್ವಿರಾಜ್, ಧನುಷ್ ಡಿ.ಎಎಸ್, ನವ್ಯಶ್ರೀ, ದಿಶಾ ರೈ(ಬಿಸಿಎ), ವರ್ಷಿನಿ, ನಿತಿನ್, ಶ್ರಾವ್ಯ, ವಿನಯ, ಶ್ರೇಯಸ್(ಬಿಕಾಂ), ವಿನಾಯಕ್, ರಂಜಿತ್(ಇಂಟೀರಿಯರ್ ಡಿಸೈನ್ & ಡೆಕೋರೇಶನ್)ಯಶೋಧ, ಮೋಹನ್ ಆಚಾರ್ಯ, ಶ್ರೀರಕ್ಷಾ ಮೋಕ್ಷಿತಾ, ಅಖಿಲೇಶ್, ಲಿಖಿತ್, ಸಿಂಚನ್(ಅಕ್ಷಯ ಕೆರಿಯರ್ ಅಕಾಡೆಮಿ)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.


ಮುಂಡೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವನಿತಾ ಬಿ ಹಾಗೂ ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀಮತಿ ನಳಿನಿ ಪಿ.ರವರು ಅನಿಸಿಕೆ ವ್ಯಕ್ತಪಡಿಸಿ ಅಕ್ಷಯ ಸಂಸ್ಥೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎತ್ತರದತ್ತ ಬೆಳೆಯಲಿ ಎಂದು ಹೇಳಿ ಸನ್ಮಾನಿತ ಶಿಕ್ಷಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.


ಕಾಲೇಜು ವಿದ್ಯಾರ್ಥಿನಿಯರಾದ ಸೌಜನ್ಯ ಮತ್ತು ಬಳಗ ಪ್ರಾರ್ಥಿಸಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ|ಅರ್ಪಿತ್ ಟಿ.ಎರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷಯ ಪದವಿ ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ ಸ್ವಾಗತಿಸಿ, ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಸಂಯೋಜಕಿ, ಉಪನ್ಯಾಸಕಿ ರಶ್ಮಿತಾ ಎಸ್ ವಂದಿಸಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಅಕ್ಷಯ ನಡುಬೈಲು, ಆಡಳಿತ ಮಂಡಳಿ ಸದಸ್ಯ ನಾರಾಯಣ ಪಿ.ವಿ, ಅಕ್ಷಯ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅಶೋಕ್‌ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಉಪನ್ಯಾಸಕರಾದ ಅಧೀಕ್ಷ ಎಸ್.ಪೂಜಾರಿ, ಯಕ್ಷಿತಾ, ಶಶಿಕಲಾ, ಆಶಾಲತಾ, ಸುಶ್ಮಿತಾ, ಪರಿಮಳಾ ರಾವ್,  ಹರ್ಷಿತಾರವರು ಸನ್ಮಾನಿತರ ಪರಿಚಯ ಮಾಡಿದರು. ಉಪನ್ಯಾಸಕರಾದ ಅಮೃತ್‌ರಾಜ್ ಹಾಗೂ ರಶ್ಮಿರವರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಮನೋರಂಜನಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಟ್ಟವು.


ಅಕ್ಷಯ ಸೇವಾ ಪುರಸ್ಕಾರ/ಗುರು ಪುರಸ್ಕಾರ/ಗೌರವ ಪುರಸ್ಕಾರ..

ಈ ಸಂದರ್ಭದಲ್ಲಿ ಬೊಳ್ವಾರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯರವರಿಗೆ ಅಕ್ಷಯ ಸೇವಾ ಪುರಸ್ಕಾರ, ಸಂತ ಫಿಲೋಮಿನಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಎಸ್.ಐ ಭಟ್‌ರವರಿಗೆ ಅಕ್ಷಯ ಗುರು ಪುರಸ್ಕಾರ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಕೆ.ರವರಿಗೆ ಅಕ್ಷಯ ಗೌರವ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.


ಸಮ್ಮಾನ ಪುರಸ್ಕೃತರು..

ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು ಆ ವಿದ್ಯಾರ್ಥಿಗಳ ಹೆತ್ತವರು ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು ಪ್ರಸಕ್ತ ವರ್ಷದ ಪ್ರಥಮ ಪದವಿ ವಿದ್ಯಾರ್ಥಿಗಳ ಪೋಷಕ ಶಿಕ್ಷಕರಾದ ಆಲರ್ಮೆ ಅಂಗನವಾಡಿ ಕೇಂದ್ರದ ಧೂಮಾವತಿ, ತೆಂಕಿಲ ವಿವೇಕಾನಂದ ಶಾಲೆಯ ರುಕ್ಮಯ ಪೂಜಾರಿ ಬಿ, ನೇರಲ್ಪಲ್ಕೆ ಅಂಗನವಾಡಿ ಕೇಂದ್ರದ ಶ್ರೀಮತಿ ಮೋಹಿನಿ, ಮುಂಡೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವನಿತಾ ಬಿ, ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಳಿನಿ ಪಿ, ಅಜ್ಜಿಕಲ್ಲು ಅಂಗನವಾಡಿ ಕೇಂದ್ರದ ಗೀತಾ ಡಿ, ಕೆಲಿಂಜ ಅಂಗನವಾಡಿ ಕೇಂದ್ರದ ಡಿ.ರೇವತಿ, ಉಪ್ಪಿನಂಗಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ  ಸುಮಲತಾರವರಿಗೆ ಸನ್ಮಾನ ಪುರಸ್ಕೃತ ಕಾರ್ಯಕ್ರಮ ನೆರವೇರಿತು. 


ಪುಸ್ತಕ ಬಿಡುಗಡೆ..

ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಭಿಲಾಷ್ ಕ್ಷತ್ರೀಯರವರ ನೂತನ ಕಿರು ಹೊತ್ತಗೆಯನ್ನು ಕುಂಬ್ರ ಮೂರ್ತೆದಾರರ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್‌ರವರು ಪುಸ್ತಕ ಬಿಡುಗಡೆಯನ್ನು ನೆರವೇರಿಸಿದರು. ಬಳಿಕ ಪುಸ್ತಕದ ಬಗ್ಗೆ ಲೇಖಕ ಅಭಿಲಾಷ್ ಕ್ಷತ್ರೀಯರವರು ಪುಸ್ತಕದ ಬಗ್ಗೆ ವಿಮರ್ಶೆಯನ್ನು ವ್ಯಕ್ತಪಡಿಸಿದರು.



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top