ವಿಷ್ಣುದೇವನು ಧರೆಗೆ ಬಂದನು
ಕೃಷ್ಣನೆಂಬಭಿಧಾನ ಪಡೆಯುತ
ವೃಷ್ಣಿಕುಲದಲಿ ದೇವಕೀ ವಸುದೇವ ಗರ್ಭದಲಿ |
ಉಷ್ಣವಿಲ್ಲದ ವರ್ಷ ಋತುವಲಿ
ಕೃಷ್ಣ ಜನನದಿ ಹರ್ಷವುಕ್ಕಿತು
ಜಿಷ್ಣುವೆನಿಸುವ ಲೋಕಪಾಲಕ ಜಗದ ಗುರುವಂದ್ಯ || ೧ ||
ಕುಣಿದು ನಲಿಯುತ ಭಜಿಸಿರೆಲ್ಲರು
ತೃಣವ ಪರ್ವತ ಗೈದ ಕೃಷ್ಣನ
ಕಣದಿ ವಿಶ್ವವ ತೋರಿ ಮೆರೆದಿಹ ಪರಮ ಪಾವನನ |
ಅಣುವ ಮಹತಿಯನೊಡನೆ ಸೇರಿಸಿ
ಗುಣದ ರಾಶಿಯ ಜಗಕೆ ತೋರಿಸಿ
ರಣದಿ ಜಯವನು ಧರ್ಮಪಕ್ಷದಿ ನೆಲೆಯ ಗೊಳಿಸಿದನ || ೨ ||
ದುಷ್ಟ ಪೂತನಿ ಧೇನು ಶಕಟರ
ಭ್ರಷ್ಟ ದಾನವ ಬಳಗವೆಲ್ಲವ
ನಿಷ್ಠೆಯಿಂದಲಿ ವಧಿಸಿ ಗೊಲ್ಲರ ಕಾಯ್ದ ಗೋಪಸುತ |
ಕಷ್ಟವಿಲ್ಲದೆ ಗಿರಿಯನೆತ್ತುತ
ವೃಷ್ಟಿ ರಭಸವ ತಡೆದು ಹಸುಗಳ
ನಷ್ಟವಾಗದ ತೆರದಿ ಸಲಹಿದ ದೇವಕೀ ಕಂದ || ೩ ||
ಬೆಣ್ಣೆ ಮೆಲ್ಲುತ ತುಂಟ ನಗೆಯನು
ತಿಣ್ಣನೋಟದ ಜತೆಗೆ ಹರಿಸಿದ
ಬಣ್ಣಬಣ್ಣದ ವೇಷಭೂಷಣ ಹಾರ ಕೇಯೂರ |
ಸಣ್ಣಬಾಲಕ ವಾಸುದೇವನು
ಕಣ್ಣು ಮಿಟುಕಿಸಿ ಮುಗುಳು ನಗುವನು
ಕಣ್ಣಮಣಿಯಿವ ಭಕುತಕೋಟಿಗೆ ಕರುಣೆ ವಾರಿಧಿಯು || ೪ ||
ಗೋವ ಸಲಹಿದ ಶಿಷ್ಟ ರಕ್ಷಕ
ದೇವರಾಗುತ ಜಗವ ಪೊರೆಯುತ
ಭಾವಿ ಪ್ರಜೆಗಳ ಬದುಕಿಗಾಸರೆಯಾಗಿ ಹರಸಿದನು |
ಮಾವ ಕಂಸನ ಕೊಂದು ಕೆಡಹುತ
ಭಾವ ಪಾಂಡವರನ್ನು ಸಲಹುತ
ಕಾವ ಶ್ರೀಹರಿ ಬಾಲ ಕೃಷ್ಣನು ನಿಜಕು ಭಗವಂತ || ೫ ||
ಛಲವ ಪಿಡಿಯುತ ದನುಜ ಕುಲವನು
ಕೆಲವೆ ಚಣದಲಿ ವಧಿಸಿ ಬಿಟ್ಟನು
ತಲೆಯನೊತ್ತುತ ಬಲಿಯನಟ್ಟಿದ ಲೋಕ ಪಾತಾಳ |
ತುಳಿದು ಕಾಳಿಯ ಹೊಡೆದು ಭಂಗಿಸಿ
ಕುಲಕೆ ನಾಯಕನಾಗಿ ಮೆರೆಯುತ
ತಿಲಕನೆನಿಸಿದ ಭಕುತ ವೃಂದಕೆ ಪೊರೆವ ಹರಿಯಾಗಿ || ೬ ||
ಗೀತೆ ಸಾರವ ಜಗಕೆ ತಿಳಿಸುತ
ಸೋತು ಹೋಗುವ ಜನರನೆತ್ತುತ
ಛಾತಿಯಿಂದಲಿ ಸುಜನರೆಲ್ಲರ ಮುಂದೆ ನಡೆಸುವನು |
ಭೀತಿಯೇತಕೆ ದೇವ ಹರಸಲು
ದಾತರನು ಬೇರೇಕೆ ಹುಡುಕುವೆ
ಮಾತು ಮಾಣಿಕದಂತೆ ಹೊಳೆಯಲು ಭಯವು ನಮಗೇಕೆ || ೭ ||
ಧರ್ಮ ರಕ್ಷಣೆ ಮಾಡಲೋಸುಗ
ಕರ್ಮಯೋಗದ ಮಹಿಮೆ ಬೋಧಿಸಿ
ನರ್ಮಕರಣದಿ ಸಾರಗುಣಗಳ ನೀಡಿ ಹರಸಿದನು |
ಪೆರ್ಮೆಯಿಂದಲಿ ದೇವನಿತ್ತಿಹ
ಮರ್ಮವೆಲ್ಲವ ನಮ್ಮದಾಗಿಸಿ
ಚರ್ಮಚಕ್ಷುವ ಮುಚ್ಚಿ ಸಾಗಿರಿ ಧರ್ಮಮಾರ್ಗದಲಿ || ೮ ||
(ಶ್ರೀ ಕೃಷ್ಣ ಜನ್ಮಾಷ್ಟಮಿಯ ಪರ್ವಕಾಲದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಆಶು ಅಷ್ಟಕ)
- ವಿ.ಬಿ.ಕುಳಮರ್ವ, ಕುಂಬ್ಳೆ
ಕಾಸರಗೋಡು


