ಮಂಗಳೂರು: ಸಂಸ್ಕೃತಿ ಎಂದರೆ ಮಾನವನು ತನ್ನ ಜೀವನವನ್ನು ಸುಧಾರಿಸಲು ಹಾಗೂ ಸಮಾಜದಲ್ಲಿ ಒಗ್ಗಟ್ಟಿನಿಂದ ಬಾಳಲು ರೂಢಿಸಿಕೊಂಡಿರುವ ಜ್ಞಾನ, ನಂಬಿಕೆ, ಕಲೆ ಆಚಾರ ವಿಚಾರ, ಸಂಪ್ರದಾಯ ಮತ್ತು ಮೌಲ್ಯಗಳ ಒಟ್ಟು ಮೊತ್ತ ಎಂದು ವೈಟ್ ಲೋಟಸ್ ಫೌಂಡೇಶನ್ ಅಧ್ಯಕ್ಷೆ ಪ್ರಮೀಳಾ ಮನೂರು ಹೇಳಿದರು.
ಅವರು ರಾಷ್ಟೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕದ್ರಿಯಲ್ಲಿ ಆಯೋಜಿಸಿದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿಯು ವಂಶ ಪಾರಂಪರ್ಯವಾಗಿ ಬರುವುದಿಲ್ಲ. ಸಮಾಜದಲ್ಲಿ ಬದುಕುತ್ತಾ ಕಲಿಯುವಂತದ್ದು. ಇದು ಒಬ್ಬ ವ್ಯಕ್ತಿಗೆ ಸೀಮಿತವಾಗಿರುವುದಿಲ್ಲ. ಸಮುದಾಯದ ಎಲ್ಲರೂ ಇದನ್ನು ಹಂಚಿಕೊಳ್ಳುತ್ತಾರೆ. ಸಂಸ್ಕೃತಿ ನಿರಂತರವಾಗಿ ಬದಲಾಗುತ್ತಿರುತ್ತದೆ.
ಸಂಸ್ಕಾರವು ಸಮಾಜದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ನೈತಿಕ ಮೌಲ್ಯವನ್ನು ಕಲಿಸುತ್ತದೆ. ಹಿಂದಿನ ಇತಿಹಾಸ ಕಲೆ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುತ್ತದೆ. ಮತ್ತು ಸಂಪ್ರದಾಯಗಳ ಮೂಲಕ ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ಇಂತಹ ಕಾರ್ಯಕ್ರಮ ವನ್ನು ಆಯೋಜಿಸಿದ ರಾಷ್ಟೀಯ ಸಾಮಾಜಿಕ ಸಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ಗಾಂಧಿ ಮತ್ತು ಬಳಗದವರ ಕಾರ್ಯ ಶ್ಲಾಘನೀಯ ಎಂದರು.
NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಗಳಾಗಿದ್ದ ಇನ್ಫೋಸಿಸ್ ಲೆಕ್ಕ ಪರಿಶೋಧಕಿ ಶ್ರೀಮತಿ ರಶ್ಮಿ ಸನಿಲ್ ಮಾತನಾಡಿ ನಾನು ನೂರಾರು ಕಾರ್ಯಕ್ರಮ ನಿರೂಪಣೆ ಮಾಡಿದ್ದೇನೆ. ಆದರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಇದೇ ಮೊದಲು ಎಂದು ಹೇಳಿದ ಅವರು ಇದು ನನ್ನ ಜೀವನದ ಅವಿಸ್ಮರಣೀಯ ಕಾರ್ಯಕ್ರಮ ಎಂದು ಹೇಳಿದರು. ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಮಾತನಾಡಿ ಸಂಸ್ಕೃತಿ ಸಂಭ್ರಮದಂತಹ ಕಾರ್ಯಕ್ರಮಗಳು ಜಗತ್ತಿನಾದ್ಯoತ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕು. ಶರಣ್ಯ ಬೆಳುವಾಯಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಯಿಷಾ ಪೆರ್ನೆ, ಜಯಂತಿ ಎಸ್. ನಂದಳಿಕೆ ಕಾರ್ಕಳ, ಆಂಟೋನಿ ಲೂಯಿಸ್ ಮಣಿಪಾಲ, ಪ್ರಶಾಂತ್ ಆಚಾರ್ಯ ಎಡಪದವು, ಗಿರೀಶ್ ಪೆರಿಯಡ್ಕ, ಎಂ.ಎ.ಮುಸ್ತಫಾ ಬೆಳ್ಳಾರೆ, ಸುಳ್ಯ, ಸುಮಯ್ಯಾ ಎಂ ಪಾಟೀಲ್, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ರಶ್ಮಿ ಸನಿಲ್, ಕಸ್ತೂರಿ ಜಯರಾಮ್, ಆಕೃತಿ ಐ ಎಸ್ ಭಟ್, ಮಂಗಳೂರು, ನಿಶಾನ್ ಅಂಚನ್ ಮೊದಲಾದ ಕವಿಗಳು ತಮ್ಮ ಚುಟುಕು ವಾಚಿಸಿದರು.
ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ನಡೆಸಿಕೊಟ್ಟ ವಿವಿಧ ನೃತ್ಯಗಳು ಜನಮನ ಸೂರೆಗೊಂಡವು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಆಯಿಷಾ ಪೆರ್ನೆ ನಿರೂಪಿಸಿದರೆ, ಕವಿಗೋಷ್ಠಿ ನಿರೂಪಣೆಯನ್ನು ರಶ್ಮಿ ಸನಿಲ್ ಮಾಡಿದರು, ರಾಣಿ ಪುಷ್ಪಲತಾ ದೇವಿ ವಂದಿಸಿದರು.
ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಕಲಾವಿದರಿಂದ ಗೀತಾ ನೃತ್ಯ ಕಾರ್ಯಕ್ರಮ ನೆರದ ಪ್ರೇಕ್ಷಕರ ಮನಸೊರೆಗೊಂಡಿತು.

