ಧಾರವಾಡ: ಶ್ರೀಮದುತ್ತರಾದಿ ಮಠದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ 31ನೇ ಚಾತುರ್ಮಾಸ್ಯದ ಅಂಗವಾಗಿ, ಶ್ರೀ ಹಯಗ್ರೀವ ದೇವರ ಸನ್ನಿಧಾನದಲ್ಲಿ ಬೆಂಗಳೂರಿನ ‘ಯುವಾತ್ಮ’ ತಂಡವು ಶ್ರೀ ಸತ್ಯಪ್ರಮೋದತೀರ್ಥರ ಜೀವನ ಆಧಾರಿತ ‘ಪ್ರಮೋಧ್ಯಾಭ್ಯುದಯ’ ನಾಟಕವನ್ನು ಇತ್ತೀಚೆಗೆ ಪ್ರದರ್ಶಿಸಿತು.
ಶ್ರೀ ಸತ್ಯಪ್ರಮೋದತೀರ್ಥರ ಹುಟ್ಟೂರಾದ ಧಾರವಾಡದಲ್ಲಿ ನಡೆದ ಈ ನಾಟಕವನ್ನು ಆನಂತರಾಜ ಕಟ್ಟಿ ಹಾಗೂ ಆದಿತ್ಯ ಕುಲಕರ್ಣಿ ರಚಿಸಿದ್ದು, ವೆಂಕಟೇಶ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಅನಂತಕೃಷ್ಣ ಪ್ಯಾಟಿ ಅವರ ಸಂಗೀತ ನಿರ್ದೇಶನವಿದ್ದು, ವಿಶ್ವೇಶ ಹಾಗೂ ತಂಡ ರಂಗಸಜ್ಜಿಕೆ ನಿರ್ವಹಿಸಿದೆ. 30ಕ್ಕೂ ಹೆಚ್ಚು ಯುವ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಿದ್ದಾರೆ.
ಮಾನವ ಜೀವನದ ಗೊಂದಲಗಳನ್ನು ಸಂಭಾಷಣೆಯ ಮೂಲಕ ಆರಂಭಿಸುವ ಈ ನಾಟಕವು, ಸತ್ಯಪ್ರಮೋದತೀರ್ಥರ ಬಾಲ್ಯ, ವಿದ್ಯಾಭ್ಯಾಸ, ಸನ್ಯಾಸ ಸ್ವೀಕಾರ ಹಾಗೂ ಅವರ ಜೀವನದ ಪ್ರಮುಖ ಘಟನೆಗಳನ್ನು 1 ಗಂಟೆ 45 ನಿಮಿಷಗಳ ಅವಧಿಯಲ್ಲಿ ರಂಗದ ಮೇಲೆ ತಂದಿದೆ.
ವಿಶೇಷವಾಗಿ, ಅವರ ತಂದೆ ಪಂಡಿತ ರಂಗಾಚಾರ್ಯ ಗುತ್ತಲ (ಧಾಬಳಿ ಮಾಸ್ಟರ್) ಅವರ ಧರ್ಮನಿಷ್ಠೆ ಮತ್ತು ಸಂಸ್ಕಾರದ ಮೌಲ್ಯಗಳನ್ನು ನಾಟಕದಲ್ಲಿ ಬಿಂಬಿಸಲಾಗಿದೆ. ಉತ್ತಮ ತಂದೆ-ತಾಯಂದಿರ ಸಂಸ್ಕಾರ ಹಾಗೂ ಗುರುಭಕ್ತಿಯಿಂದ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳ ಕೊಡುಗೆ ಸಿಗುತ್ತದೆ ಎಂಬ ಸಂದೇಶವನ್ನು ಈ ಪ್ರದರ್ಶನ ನೀಡಿತು.
ಯುವಾತ್ಮ ತಂಡದ ಹಿನ್ನೆಲೆ:
ಶ್ರೀ ಸತ್ಯಾತ್ಮತೀರ್ಥರ ಸೂಚನೆಯಂತೆ 2023ರಲ್ಲಿ ಆರಂಭವಾದ ‘ಯುವಾತ್ಮ’ ಸಂಸ್ಥೆಯು ಯುವಜನರಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಪಂ. ವಿದ್ಯಾಧೀಶಾಚಾರ್ಯ ಗುತ್ತಲ್, ಪಂ. ಸತ್ಯಧ್ಯಾನಾಚಾರ್ಯ ಕಟ್ಟಿ ಹಾಗೂ ಹನುಮಂತಾಚಾರ್ಯ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ತಂಡ, ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ಉದ್ಯೋಗ ಮೇಳ, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

