ಎಪಿಎಲ್ ಕಾರ್ಡ್ ನೆಪ: ಸ್ಥಗಿತಗೊಂಡ ದಿವ್ಯಾಂಗರ ಮಾಸಾಶನ ಪುನರಾರಂಭಕ್ಕೆ ಸರಕಾರಕ್ಕೆ ಪತ್ರಿಕಾ ಮನವಿ

Upayuktha
0

ಮಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕ ರಾಜ್ಯದಲ್ಲಿ ಎಪಿಎಲ್ (APL) ಕಾರ್ಡ್ ಹೊಂದಿರುವ ಸಾವಿರಾರು ದಿವ್ಯಾಂಗರ ಮಾಸಾಶನ/ಪಿಂಚಣಿಯನ್ನು ಸರಕಾರ ಸ್ಥಗಿತಗೊಳಿಸಿದ್ದು, ಇದರಿಂದ ದಿವ್ಯಾಂಗರು ಮತ್ತು ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ದಿವ್ಯಾಂಗರಲ್ಲಿರುವ ವೈಕಲ್ಯವನ್ನೇ ಮಾಸಾಶನ ಹಾಗೂ ಪ್ರೋತ್ಸಾಹಧನ ನೀಡಲು ಮುಖ್ಯ ಮಾನದಂಡವಾಗಿಸಬೇಕು ಹಾಗೂ ಈ ಸೌಲಭ್ಯವು ತಡೆರಹಿತವಾಗಿ ದೊರೆಯುವ ಗ್ಯಾರಂಟಿಯನ್ನು ಸರಕಾರ ನೀಡಬೇಕು ಎಂದು ಮಂಗಳೂರಿನ ದಿವ್ಯಾಂಗರ ಹಿತರಕ್ಷಣಾ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.


ಬೌದ್ಧಿಕ ಹಾಗೂ ದೈಹಿಕ ವೈಕಲ್ಯ ಹೊಂದಿದ ಮಕ್ಕಳ ಆರೈಕೆ, ಪೋಷಣೆ ಮತ್ತು ಸಮಾಜದ ಮುಖ್ಯವಾಹಿನಿಗೆ ಅವರನ್ನು ತರುವುದು ಇಂದಿನ ಸವಾಲಿನ ಸಂಗತಿಯಾಗಿದೆ. ಇಂತಹ ಮಕ್ಕಳಿಗೆ ಸ್ಪೀಚ್ ಥೆರಪಿ, ಬಿಹೇವಿಯರಲ್ ಥೆರಪಿ, ಫಿಸಿಯೋಥೆರಪಿ ಹಾಗೂ ಆಕ್ಯುಪೇಶನಲ್ ಥೆರಪಿಗಳ ಅಗತ್ಯವಿದ್ದು, ಹೆತ್ತವರು ತಿಂಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಮಾಸಾಶನ ಪಡೆಯಲು ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು 32,000 ರೂಪಾಯಿಗೆ ಸೀಮಿತಗೊಳಿಸಿ, ಸೌಲಭ್ಯಗಳನ್ನು ನಿರಾಕರಿಸುವುದು ಅತ್ಯಂತ ಅನ್ಯಾಯಕಾರಿ ನಿರ್ಧಾರವಾಗಿದೆ.


ದೃಷ್ಟಿ ದೋಷ, ಚಲನವಲನದ ತೊಂದರೆ, ಮಾತಿನ ಅಭಿವ್ಯಕ್ತಿಯ ಕೊರತೆ ಹಾಗೂ ಬೌದ್ಧಿಕ ವೈಕಲ್ಯದಿಂದ ಬಳಲುತ್ತಿರುವ ದಿವ್ಯಾಂಗರು ಒಟ್ಟಾಗಿ ಸೇರಿ ಅಧಿಕಾರಿಗಳನ್ನು ಭೇಟಿಯಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುವುದೂ ಸಹ ಸುಲಭವಲ್ಲ. ದಿವ್ಯಾಂಗರ ಜೀವನದಲ್ಲಿ ಮಾಸಾಶನ ಎನ್ನುವುದು ಕೇವಲ ಆರ್ಥಿಕ ನೆರವಷ್ಟೇ ಅಲ್ಲ, ಅದು ಅವರ ಸ್ವಾಭಿಮಾನ, ಆತ್ಮವಿಶ್ವಾಸ ಮತ್ತು ಬದುಕಿನ ಭದ್ರತೆಯ ಸಂಕೇತವಾಗಿದೆ.


ಆದ್ದರಿಂದ ಸರಕಾರವು ಆದಾಯದ ಮಿತಿ ಅಥವಾ ಎಪಿಎಲ್ ಕಾರ್ಡ್‌ನ ನೆಪವೊಡ್ಡಿ ದಿವ್ಯಾಂಗರನ್ನು ಸತಾಯಿಸದೆ, ಮಾನವೀಯ ದೃಷ್ಟಿಯಿಂದ ಈ ವಿಷಯವನ್ನು ಪರಿಗಣಿಸಬೇಕು. ಯಾವುದೇ ಕಟ್ಟುಪಾಡುಗಳಿಲ್ಲದೆ ತಕ್ಷಣವೇ ಮಾಸಾಶನವನ್ನು ಪುನರಾರಂಭಿಸಿ ದಿವ್ಯಾಂಗರು ಮತ್ತು ಅವರ ಕುಟುಂಬಗಳ ಬೆನ್ನಿಗೆ ನಿಲ್ಲಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ರಾಜಶೇಖರ ಭಟ್ ಕಾಕುಂಜೆ ಹಾಗೂ ಕಾರ್ಯದರ್ಶಿ ಹರೀಶ್ ಪ್ರಭು ಸರಕಾರವನ್ನು ವಿನಮ್ರವಾಗಿ ಒತ್ತಾಯಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top