ಹಾಸನ : ವಿದ್ಯೆ ಸಜೀವ ಸೌಂದರ್ಯ, ವಿದ್ಯೆಯ ಸೌಂದರ್ಯಕ್ಕೆ ಯಾವ ಸೌಂದರ್ಯವೂ ಸಾಟಿ ಇಲ್ಲ. ವಿದ್ಯಾರ್ಜನೆಯ ಸಮಯ ಅಂದರೆ ಆತ್ಮ ಶಕ್ತಿಯನ್ನು ಸಂಪಾದಿಸುವ ಮತ್ತು ಸಂಗ್ರಹಿಸು ಕಾಲ. ವಿದ್ಯಾರ್ಥಿಯ ಜೀವನ ಒಂದು ತಪಃ ಸಾಧನೆ. ವಿದ್ಯಾರ್ಥಿಗಳು ತಪಸ್ವಿಗಳು ಎಂದು ಶಿಕ್ಷಣ ಪ್ರೇಮಿ ಡಾ. ಜೆ.ಬಿ. ತಮ್ಮಣ್ಣಗೌಡ ಹೇಳಿದರು.
ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಂದಲಿ ಇಲ್ಲಿ 2025-26 ನೇ ಸಾಲಿನಲ್ಲಿ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಈ ಶಾಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆಯ ಸಮಾರಂಭದಲ್ಲಿ ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಒಳ್ಳೆಯ ಏಳ್ಗೆಗಾಗಿ ತಪಸ್ಸು ಮಾಡಿದಂತೆ ಓದಬೇಕು. ಆಗ ಎಲ್ಲರಿಗೂ ಸಂತಸವಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಎಲ್ಲರೂ ಸಹಕರಿಸಬೇಕು ಎಂದರು. ಮುಂದುವರಿದು ನಾವೆಲ್ಲರೂ 21ನೇ ಶತಮಾನದ ಸ್ಪರ್ಧಾತ್ಮಕ ಯುಗದಲ್ಲಿದ್ದು ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ, ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ದೊಡ್ಡ ಸಾಧನೆ ಮಾಡಬೇಕು. ಏಕೆಂದರೆ ಭವಿಷ್ಯವು ಜ್ಞಾನದ ಆಧಾರದ ಮೇಲೆ ನಿಂತಿದೆ ಎಂದರು.
ಹಾಸನ ಜಿಲ್ಲೆಯ ವಸತಿ ಶಾಲೆಗಳ ಸೌಕರರ ಸಂಘದ ಅಧ್ಯಕ್ಷೆ ಉಷಾ ಮಾತನಾಡಿ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಶಾಲೆಯ ಹಿರಿಯ ವಿದ್ಯಾರ್ಥಿ ಮತ್ತು ಪ್ರಸ್ತುತ ಹೆಚ್ ಡಿ ಸಿ ಸಿ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲೆ ಪ್ರಸವಿ ಮಾತನಾಡಿ ತಮ್ಮಣ್ಣಗೌಡರು ನೀಡುವ ಪ್ರತೀ ವರ್ಷದ ನಗದು ಬಹುಮಾನದ ಮಾನದಂಡಕ್ಕೊಳಪಟ್ಟು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಜನರಾಗಬೇಕು ಎಂದು ಹೇಳಿದರು.
ಶಿಕ್ಷಕಿ ವೀಣಾ ಸ್ವಾಗತಿ, ಶಿಕ್ಷಕ ಪ್ರಮೋದ್ ನಿರೂಪಿಸಿದರೆ, ಶಿಕ್ಷಕಿ ಜರೀನಾ ವಂದಿಸಿದರು.


