ಚನ್ನರಾಯಪಟ್ಟಣ: ಗುರು ಸಮಾಜದಲ್ಲಿ ಸದಾ ಗುರುವಾಗಿಯೇ ಇರಬೇಕು. ಗುರು ಯಾವ ಕಾರಣಕ್ಕೂ ಲಘುವಾಗಬಾರದು. ಏಕೆಂದರೆ ಗುರು ಎರಡು ಮಾತ್ರೆಯ ಅಕ್ಷರವಾದರೆ ಲಘು ಒಂದು ಮಾತ್ರೆಯ ಅಕ್ಷರ. ಗುರುವಿನಿಂದ ಗೌರವ ಬರುತ್ತದೆ, ಲಘುವಿನಿಂದ ಲಾಘವ ಬರುತ್ತದೆ. ಲಾಘವ ಎಂದರೆ ಗಟ್ಟಿ ಇಲ್ಲದೆ ಇರುವುದು ಅಂದರೆ ಟೊಳ್ಳಾದ ಎಂದರ್ಥ. ಹಾಗಾಗಿ ಗಟ್ಟಿತನವಿರುವ ಗುರುವಿಗೆ ಸಮಾಜದಲ್ಲಿ ಎಂದೆಂದೂ ಗೌರವ ಇರುತ್ತದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಡಾ. ಜೆ.ಬಿ. ತಮ್ಮಣ್ಣಗೌಡ ಹೇಳಿದರು.
ತಾಲ್ಲೂಕಿನ ಜಿನ್ನೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಓಂಕಾರಮೂರ್ತಿಯವರ ವಯೋ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಅವರು ನಾವೆಲ್ಲಾ ಶಾಲೆಯನ್ನು ಪ್ರೀತಿಸಬೇಕು. ಶಾಲೆ ಅಕ್ಷರ ಸಂಪತ್ತನ್ನು ಕೊಡುವ ಕೇಂದ್ರ. ಅಕ್ಷರ ಸಂಪತ್ತು ಎಂದರೆ ಮೂರಕ್ಷರದ ಪದವೇ ತಿಳಿಸುವಂತೆ ನಾಶವಾಗದೆ ಇರುವಂತದ್ದು. ಈ ನಾಶವಾಗದೆ ಇರುವ ಸಂಪತ್ತನ್ನು ಶಾಲೆ ಕೊಡುವುದರಿಂದ ಶಾಲೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಅಂತಹ ಶಾಲೆಯನ್ನು ಕಟ್ಟುವಂತಹ, ಬೆಳೆಸುವಂತಹ ಮತ್ತು ಉಳಿಸುವಂತಹ ಮನೋಭಾವ ಸಮಾಜದ ಸರ್ವ ಸದಸ್ಯರಲ್ಲೂ ಇರಬೇಕು ಎಂದು ತಿಳಿಸಿದರು.
ನಮ್ಮೂರ ಶಾಲೆ ಎಂಬ ಪರಿಕಲ್ಪನೆಯಡಿಯಲ್ಲಿ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತೀ ವರ್ಷವೂ ನಗದು ಬಹುಮಾನ ನೀಡಲಾಗುತ್ತಿದೆ ಎಂಬ ವಿಚಾರವನ್ನು ಸ್ಮರಿಸುತ್ತ ಪ್ರಸ್ತುತ ನಿವೃತ್ತಿ ಹೊಂದುತ್ತಿರುವ ಮುಖ್ಯೋಪಾಧ್ಯಾಯರಾದ ಓಂಕಾರಮೂರ್ತಿ ಅವರ ನಿವೃತ್ತಿಯ ಬದುಕು ಅತ್ಯಂತ ಸುಖ ಸಂತೋಷದಿಂದ ಕೂಡಿರಲೆಂದು ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್ ಮಾತನಾಡಿ ಶಿಕ್ಷಣ ಸೇವೆ ಪವಿತ್ರವಾದದ್ದು ಅಂತೆಯೇ ಶಿಕ್ಷಕ ವೃತ್ತಿಯೂ ಪವಿತ್ರವಾದದ್ದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಸೇವೆ ಮಾಡಿದರೆ ಶಿಷ್ಯರಿಂದ, ಪೋಷಕರಿಂದ ಮತ್ತು ಸಮಾಜದಿಂದ ಅಪಾರ ಗೌರವ ಸಿಗುತ್ತದೆ ಎಂದು ಹೇಳಿದರು.
ಸನ್ಮಾನಿತರಾದ ಓಂಕಾರಮೂರ್ತಿ ಮಾತನಾಡಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಅಕ್ಷರದಾಸೋಹ ಅಧಿಕಾರಿ ಉಮಾಶಂಕರ್ ಮತ್ತು ಶಿಕ್ಷಣ ಸಂಯೋಜಕ ಶ್ರೀನಿವಾಸ್ ಮಾತನಾಡಿ ಶುಭ ಹಾರೈಸಿದರು.
ಕೆ.ಜಿ.ಐ.ಡಿ. ಇಾಖೆಯಲ್ಲಿ ಅಧಿಕಾರಿ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಇಂಜಿನಿಯರ್ ದರ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕಿ ಲತಾ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿದರು. ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು , ಗ್ರಾಮಸ್ಥರು, ನೆರೆಹೊರೆ ಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


