ದಾವಣಗೆರೆ: ಕಳೆದ ನಾಲ್ಕು ದಶಕಗಳಿಂದ ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಕರಾವಳಿ ಜಿಲ್ಲೆಗಳ ಆರಾಧಾನ ಕಲೆ ಯಕ್ಷಗಾನವನ್ನು ದಾವಣಗೆರೆಗೆ ವೈಭವೀಕರಿಸಿದ್ದು ಯಕ್ಷರಂಗದ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಯಕ್ಷಗಾನ ಕೇವಲ ಮನೋರಂಜನೆಗೆ ಸೀಮಿತವಾಗದೇ ಶ್ರೀ ಗಣಪತಿ ದೇವರ ಪೂಜೆಯಾಗುತ್ತದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.
ದಾವಣಗೆರೆಯ ವಿದ್ಯಾನಗರ ರಸ್ತೆಯಲ್ಲಿ ಇರುವ ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಇತ್ತೀಚಿಗೆ ಯಕ್ಷಗಾನ ಪ್ರದರ್ಶನ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾಕುಂಚ ಯಕ್ಷರಂಗ, ಉಡುಪಿ ಜಿಲ್ಲೆಯ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಕಾಳಿಂಗ ನಾವಡ ವಿರಚಿತ “ನಾಗಶ್ರೀ” ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷರಂಗ ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಹಾಲಾಡಿಯ ಖ್ಯಾತ ಯಕ್ಷಗಾನ ಭಾಗವತರಾದ ಜಿ.ರಾಘವೇಂದ್ರ ಮಯ್ಯ, ಕಲಾಕುಂಚದ ಗೌರವ ಅಧ್ಯಕ್ಷ ಕೆ.ಹೆಚ್. ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಕ್ಷರಂಗದ ಖಜಾಂಚಿ ನೀಲಾವರ ಭಾಸ್ಕರನಾಯಕ್, ಖ್ಯಾತ ಯಕ್ಷಗಾನ ಕಲಾವಿದ ಯಕ್ಷರಂಗದ ಸಮಿತಿ ಸದಸ್ಯರಾದ ಹಟ್ಟಿಯಂಗಡಿ ಆನಂದಶೆಟ್ಟಿ, ಶಾಂತಪ್ಪ ಪೂಜಾರಿ, ರಾಜಶೇಖರ್ ಸಕ್ಕಟ್ಟು ಮುಂತಾದವರು ಉಪಸ್ಥಿತರಿದ್ದರು.
ಖ್ಯಾತ ಯಕ್ಷಗಾನ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗರವರಿಗೆ ಯಕ್ಷಗಾನ ರಂಗದ ಹಿರಿಯ ಸಾಂಪ್ರಾದಾಯಿಕ ಕಲಾವಿದ ಶ್ರೀ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ನವರ ಜನ್ಮ ಶತಮಾನೊತ್ಸವದ “ಯಕ್ಷಲೋಕದ ಮಾಸದ ಬಣ್ಣ-100 ಸಂಸ್ಮರಣೆ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಕ್ಷರಂಗದ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಹೇಮಾ ಶಾಂತಪ್ಪ ಪೂಜಾರಿ ಪ್ರಾರ್ಥಿಸಿ, ಪ್ರದೀಪ್ ಕೆ.ವಿ.ಕಾರಂತ್ ವಂದಿಸಿದರು.


