ಟ್ರೈನಿನಲ್ಲಿ ವಿದ್ವತ್ ಸನ್ಮಾನ

Upayuktha
0


ಬೆಂಗಳೂರು: ಶಿವಮೊಗ್ಗೆಯಿಂದ ಬೆಳಗ್ಗೆ ಬೆಂಗಳೂರಿಗೆ ಹೊರಡುವ ತಾಳಗುಪ್ಪ ರೈಲಿನ ಡಬ್ಬಿ ಡಿ -1 ರಲ್ಲಿ ಇದೇ ಮಂಗಳವಾರ, ಜೂನ್ 30 ರಂದು ನಡೆದ ಒಂದು ಅನಿರೀಕ್ಷಿತ ಸಮಾರಂಭಕ್ಕೆ ಪ್ರಯಾಣಿಕರು ಸಾಕ್ಷಿಯಾದರು.


ವಾರಣಾಸಿಯಲ್ಲಿನ ಶ್ರೀ ವಿಶ್ವೇಶ್ವರ ವೇದಧರ್ಮ ಗುರುಕುಲದ ಹದಿನಾರು ವಿದ್ಯಾರ್ಥಿಗಳು ತುಂಗ ಭದ್ರಾ ಸಂಗಮ ಕ್ಷೇತ್ರ ಕೂಡ್ಲಿ ಶ್ರೀ ಶಂಕರ ಮಠದಲ್ಲಿನ ವೇದ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಪಾಠಕ್ರಮದ ಅಧ್ಯಯನಕ್ಕಾಗಿ ಒಂದು ತಿಂಗಳು ವಾಸವಿದ್ದು ಪುನಃ ವಾರಣಾಸಿಗೆ ಪ್ರಯಾಣ ಹೊರಟಿದ್ದ ಎಲ್ಲಾ ವೇದಾಧ್ಯಯನ ನಿರತ ವಟುಗಳೂ 10-16 ವಯೋಮಿತಿಯಲ್ಲಿದ್ದು ಅವರ ವಿಶಿಷ್ಠ ಧೋತ್ರ, ಶಲ್ಯ, ಶಿಖೆ ಹಾಗೂ ದಂಡ ಕೋಲುಗಳಿಂದಾಗಿ ಎಲ್ಲರ ಗಮನ ಸೆಳೆದರು.


ತಂಡದ ನೇತೃತ್ವ ವಹಿಸಿದ್ದ 26 ವಯಸ್ಸಿನ ಆಚಾರ್ಯ ವಿದ್ವಾನ್ ಸುಮನ್ ಕೊಯಿರಾಲಾ ನೇಪಾಳದವರಾಗಿದ್ದು, ಸಂಸ್ಕೃತ ವಿದ್ವತ್ ಮುಗಿಸಿ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಪ್ರೊ. ಉಮಾಂಕಾಂತ ಚತುರ್ವೇದಿ ಅವರ ಮಾರ್ಗದರ್ಶನದಲ್ಲಿ 'ಸಂಸ್ಕೃತ ವ್ಯಾಕರಣ, ಸಾಹಿತ್ಯ ಸಿದ್ಧಾಂತದ ಪ್ರಾಚೀನ ಮತ್ತು ಅರ್ವಾಚೀನ ನೆಲೆಗಳು' ಅನ್ನುವ ವಿಷಯದಲ್ಲಿ ಪಿಹೆಚ್. ಡಿ. ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.


ಕರ್ನಾಟಕಕ್ಕೆ ಆಗಮಿಸಿದ್ದ ಈ ವಿಶೇಷ ಅತಿಥಿಗಳನ್ನು ಅಲ್ಲಿಯೇ ಗುರುತಿಸಿ ಶಾಲು ಹೊದಿಸಿ ಕಾಣಿಕೆ ನೀಡಿ ಸನ್ಮಾನಿಸುವ ತತ್ಕ್ಷಣದ ವಿಚಾರ ಹೊಳೆದದ್ದು ಅದೇ ಡಬ್ಬಿಯಲ್ಲಿ ಪ್ರಯಾಣಿಸುತ್ತಿದ್ದ ನಿವೃತ್ತ ಪ್ರಾಂಶುಪಾಲ ಡಿ.ಧನ್ವಂತರಿ, ಕರ್ನಾಟಕ ಸರ್ವೋದಯ ಮಂಡಲದ ಪೂರ್ವಾಧ್ಯಕ್ಷ ಡಾ. ಹೆಚ್.ಎಸ್. ಸುರೇಶ್, ಬ್ರಾಂಡ್ ಕಾರ್ಪೊರೇಟ್ ಕಮ್ಯುನಿಕೇಶನ್ ಕನ್ಸಲ್ಟೆಂಟ್ ಮತ್ತು ರಂಗ ನಿರ್ದೇಶಕ ಬಿ.ಆರ್.ಶ್ರೀನಿವಾಸ ಮೂರ್ತಿ ಮತ್ತು ಶಿವಮೊಗ್ಗೆಯ ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್‌ನ ಪೂರ್ವಾಧ್ಯಕ್ಷ ಎಸ್.ದತ್ತಾತ್ರಿ ಅವರಿಗೆ.


ಇದಕ್ಕೆ ಸಹ ಪ್ರಯಾಣಿಕರೂ ಸ್ಪಂದಿಸಿ ಮಕ್ಕಳಿಗೆ ತಿನಿಸುಗಳ ವಿತರಣೆ ಮಾಡಿದರು.


ಕೂಡ್ಲಿಯನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಕೇಳಿದಾಗ ವಿದ್ವಾನ್ ಸುಮನ್ ಕೊಯಿರಾಲಾ ಹೇಳಿದ್ದು ಹೀಗೆ: 'ಸಂಗಮಕ್ಕಿರುವ ಪಾವಿತ್ರ್ಯತೆ ಒಂಟಿ ನದಿಗೆ ಬಾರದು, ಇಲ್ಲಿ ಶಾರದೆಯ ತುಂಗೆ ಜೊತೆ ಅನ್ನಪೂರ್ಣೆಯ ಭದ್ರೆ ಸಹ ಸಂಗಮಿಸುತ್ತಾಳೆ. ಅದಕ್ಕಾಗಿ ಈ ಆಯ್ಕೆ'


ಬೆಂಗಳೂರು ಸಮೀಪದ ಚನ್ನೇನಹಳ್ಳಿಯಲ್ಲಿರುವ ವೇದ ವಿಜ್ಞಾನ ಗುರುಕುಲಮ್ ನಲ್ಲಿ ಕೆಲಕಾಲ ವಿಶ್ರಮಿಸಿ ಅದೇ ರಾತ್ರಿ ವಾರಣಾಸಿಗೆ ವಟು ವೃಂದ ಪ್ರಯಾಣ ಬೆಳೆಸಿತು.


ಧಾರ್ಮಿಕ ಶ್ರದ್ಧೆ ನಶಿಸುತ್ತಿರುವ ಈ ದಿನಗಳಲ್ಲಿ ಈ ಮಕ್ಕಳ ಪಾಲಕರ ತ್ಯಾಗ ಮಹತ್ವದ್ದು. ಕಾಶಿಯ ಈ ಗುರುಕುಲದಲ್ಲಿ ಒಟ್ಟು 80 ವೇದ ಜ್ಞಾನಾರ್ಥಿ ಗಳಿದ್ದು ಅವರೆಲ್ಲಾ ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಾಸ್ಥಾನ, ಗುಜರಾತ್ ರಾಜ್ಯಗಳ ಬಡ ಬ್ರಾಹ್ಮಣ ಪರಿವಾರದ ಮಕ್ಕಳು.


ಇನ್ನೊಂದು ಇವರ ಅರಿವಿನ ಮಟ್ಟ ತಿಳಿಯಲು ವೇದದ ಕೆಲವು ಋಕ್ಕುಗಳನ್ನು ಹೇಳುವಂತೆ ಕೋರಿದಾಗ ಎಲ್ಲ ಮಕ್ಕಳೂ ಏಕ ಕಾಲದಲ್ಲಿ ಏಕ ರೀತಿ ಮಂತ್ರ ಘೋಷ ನಡೆಸಿದ್ದು ಪ್ರಯಾಣಿಕರಲ್ಲಿ ವಿಸ್ಮಯ ಮೂಡಿಸಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top