ಪುತ್ತೂರು: 'ಶರೀರವನ್ನು ಮತ್ತು ಮನಸ್ಸನ್ನು ಸರಿಯಾಗಿ ಬಳಸಿಕೊಂಡಷ್ಟು ಶ್ರೇಯಸ್ಸು ಹೆಚ್ಚುತ್ತದೆ. ಇದಕ್ಕೆ ಯೋಗ ಸಹಾಯ ಮಾಡುತ್ತದೆ. ಮನಸ್ಸಿನ ಹಿಡಿತ ಇಟ್ಟುಕೊಳ್ಳಲು ಮತ್ತು ದೇಹದ ಸ್ವಾಸ್ಥ್ಯ ಕಾಪಾಡಲು ಯೋಗ ಸಹಕಾರಿ. ಏಕಾಗ್ರತೆಯನ್ನು ಪಡೆದುಕೊಳ್ಳಲು ಯೋಗ ಅತ್ಯುತ್ತಮ ಸಾಧನ. ಹಾಗೆಯೇ ನಮ್ಮನ್ನು ನಾವು ಯಾವುದಾದರೂ ಒಂದು ವಿಷಯಕ್ಕೆ ಸಮರ್ಪಿಸಿಕೊಳ್ಳುವುದು ಸಹ ಯೋಗವೇ' ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ ನುಡಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಪುತ್ತೂರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಂಯೋಜನೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ "ಯೋಗೋತ್ಸವ" ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ , 'ಯೋಗ ಬದುಕಿನ ಅನುಷ್ಠಾನದ ವಿಧಾನ. ಯೋಗಕ್ಕೆ ಪ್ರಾಚೀನ ಭಾರತದಲ್ಲಿ ವಿಶಿಷ್ಟ ಸ್ಥಾನಮಾನ ಇತ್ತು. ಹಿಂದೆ ದಿನನಿತ್ಯದ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸಿತ್ತು. ಇಂದು ಯೋಗ ವಿಜ್ಞಾನದ ಮೂಲಕ ಬದುಕು ರೂಪಿಸಿಕೊಳ್ಳಬಹುದು. ಯೋಗಕ್ಕೆ ಮನಸ್ಥಿತಿಯೂ ಅತಿಮುಖ್ಯ' ಎಂದು ಹೇಳಿದರು.
'ಇಂದಿನ ಆಧುನಿಕ ಯುಗದ ಕೆಲಸದ ಒತ್ತಡಕ್ಕೆ ಯೋಗ ಉತ್ತಮ ಮದ್ದು. ಯೋಗ ಮನಸ್ಸಿನ ಹಿಡಿತವನ್ನು ಸಾಧಿಸುತ್ತದೆ. ವಿದ್ಯಾರ್ಥಿಗಳ ಏಕಾಗ್ರತೆಗೆ ಯೋಗ ಸಹಾಯ ಮಾಡುತ್ತದೆ' ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೋಗಾರೋಗ್ಯ ಮತ್ತು ಯೋಗವಸಿಷ್ಟ ಯೋಗ ತೆರಪಿ, ಪುತ್ತೂರು ಇದರ ನಿರ್ದೇಶಕ ಡಾ. ಮಹಾಬಲ ಭಟ್ ಯೋಗ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮವನ್ನು ಎನ್.ಸಿ.ಸಿ. ಕೆಡೆಟ್ ಭೂಮಿಕಾ ಸ್ವಾಗತಿಸಿ, ರೋವರ್ ಮತ್ತು ರೇಂಜರ್ ಘಟಕದ ಹರ್ಷಿತ ಟಿ. ವಂದಿಸಿ, ಎನ್ ಸಿ. ಸಿ. ಕೆಡೆಟ್ ಸ್ಫೂರ್ತಿ ಮತ್ತು ಬಳಗದವರು ಪ್ರಾರ್ಥಿಸಿ,ಎನ್.ಎಸ್.ಎಸ್. ಘಟಕದ ನಾಯಕಿ ಕೆ. ಕೃತಿಕಾ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


