ಕೆ.ಎಮ್.ಸಿ. ಕಾಲೇಜು, ಮಂಗಳೂರು ತಂಡಕ್ಕೆ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ – 2026 ಪ್ರಶಸ್ತಿ
ಮಂಗಳೂರು: ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಸ್ತ್ರ ಶಿಕ್ಷಣ ವಿದ್ಯಾರ್ಥಿಗಳಿಗಾಗಿ 5ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ – 2026 ದಿ. 27 ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಈ ಸ್ಪರ್ಧಾ ಕೂಟದಲ್ಲಿ ಕೆ.ಎಮ್.ಸಿ. ಕಾಲೇಜು ಮಂಗಳೂರು ತಂಡವನ್ನು ಪ್ರತಿನಿಧಿಸಿದ ಡಾ. ಭಾನ್ವಿ ಅಗರ್ವಾಲ್ ಮತ್ತು ಡಾ. ಕುನಾಲ್ ಸೇತ್ ತಂಡವು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು. ಅದೇ ಕಾಲೇಜನ್ನು ಪ್ರತಿನಿಧಿಸಿದ ಡಾ. ಅಭಿಶೇಕ್ ಭಟ್ ಮತ್ತು ಡಾ. ಸಾಯಿ ಕೃಷ್ಣ ತಂಡವು ದ್ವಿತೀಯ ಸ್ಥಾನ, ತೃತೀಯ ಸ್ಥಾನವನ್ನು ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಡಾ. ರಾಘವೇಂದ್ರ ಮತ್ತು ಡಾ. ವಿನಾಯಕ್ ತಂಡವು ಗಳಿಸಿತು. ಇದು ಒಂದು ಕುತೂಹಲಕಾರಿ ಮತ್ತು ರೋಮಾಂಚಕಾರಿ ಸ್ಪರ್ಧೆಯಾಗಿತ್ತು.
ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಶಹನವಾಜ್ ಮಣಿಪಾಡಿ ಮುಖ್ಯ ಅತಿಥಿಯಾಗಿ ಮಾತನಾಡಿ “ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಶೈಕ್ಷಣಿಕ ಜ್ಞಾನವನ್ನು ವ್ರದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು” ಎಂದು ಸಲಹೆ ನೀಡಿ ಸ್ಪರ್ಧಾ ವಿಜೇತರ ಸಾಧನೆಯನ್ನು ಪ್ರಶಂಸಿಸಿ ಪ್ರಶಸ್ತಿ, ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರಧಾನ ಮಾಡಿ ಅಭಿನಂದಿಸಿದರು.
ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರಾದ ಡಾ. ವೆಂಕಟ್ರಾಯ್ ಪ್ರಭು, ಕಣಚೂರು ವೈದ್ಯಕೀಯ ಕಾಲೇಜಿನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅಂಜನ್ ಕುಮಾರ್ ಮತ್ತು ಮುಖ್ಯ ಆಡಳಿತ ಅಧಿಕರಿಯಾದ ಡಾ. ರೋಹನ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ. ದೇವದಾಸ್ ರೈರವರು ಸ್ಪರ್ಧಾಕೂಟವನ್ನು ನಿರೂಪಿಸಿದ್ದರು.
ಅವಿಭಾಜಿತ ದ.ಕ. ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 31 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.
ಪ್ರೊ. ಡಾ. ದೇವದಾಸ್ ರೈ ಸ್ವಾಗತಿಸಿ ಸ್ಪರ್ಧಾಕೂಟದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಡಾ. ಅಬ್ದುಲ್ ಕರೀಮ್ ಫರೂಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಡಾ. ಪ್ರೀತಮ್ ಸಹಕರಿಸಿದರು. ಎಂ.ವಿ. ಮಲ್ಯರವರು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


