ಇತ್ತೀಚಿನ
ದಿನಗಳಲ್ಲಿ ಪರೀಕ್ಷೆ ಎಂದರೆ ಸಾಕು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭಯ, ಮತ್ತು ಆತಂಕ
ಶುರುವಾಗುತ್ತದೆ. ಪರೀಕ್ಷೆ ಹತ್ತಿರ ಬಂದಾಗ ಮನೆಯಲ್ಲೂ, ಕಾಲೇಜಿನಲ್ಲೂ ಒಂದು ರೀತಿಯ ಯುದ್ಧದ
ವಾತಾವರಣವೇ ಸೃಷ್ಟಿಯಾಗುತ್ತದೆ. “ಈ ಸಲ ಮೊದಲಿನಿಂದಲೇ
ಚೆನ್ನಾಗಿ ಓದಬೇಕು, ಪ್ರತಿದಿನ ಒಂದು ಪಾಠ ಆದರೂ
ಮುಗಿಸಬೇಕು” ಎಂದು ಪ್ರತಿಯೊಬ್ಬ ವಿದ್ಯಾರ್ಥಿಯೂ
ಶಾಲೆ ಅಥವಾ ಕಾಲೇಜು ಆರಂಭವಾದಾಗ
ಯೋಚಿಸುತ್ತಾನೆ. ಆದರೆ ಆ ಯೋಚನೆ
ಬಹಳ ಬಾರಿ ಯೋಚನೆಯಾಗಿಯೇ ಉಳಿದುಬಿಡುತ್ತದೆ.
ಮೊದಲಿನ
ದಿನಗಳಲ್ಲಿ “ಇನ್ನೂ ಸಮಯ ಇದೆ” ಎಂದು
ಓದನ್ನು ಮುಂದೂಡುತ್ತೇವೆ. ನಂತರ ಅಸೈನ್ಮೆಂಟ್ಸ್, ಇಂಟರ್ನಲ್ಸ್,
ಸೆಮಿನಾರ್ಸ್, ಮೊಬೈಲ್, ರೀಲ್ಸ್, ಸ್ನೇಹಿತರ ಜೊತೆ ಸಮಯ ಕಳೆಯುವುದು
— ಇವೆಲ್ಲದರ ನಡುವೆ ಓದು ನಿಧಾನವಾಗಿ ಹಿಂದೆ
ಸರಿಯುತ್ತದೆ. ಕೊನೆಗೆ ಪರೀಕ್ಷೆಗೆ ಕೆಲವೇ ದಿನಗಳು ಉಳಿದಾಗ ಮಾತ್ರ ಪುಸ್ತಕ ತೆರೆದು “ಇಷ್ಟೊಂದು ಪಠ್ಯಕ್ರಮ ಯಾವಾಗ ಮುಗಿಸೋದು?” ಎಂದು ತಲೆ ಹಿಡಿಯುವ
ಪರಿಸ್ಥಿತಿ ಬರುತ್ತದೆ.
ಪರೀಕ್ಷೆಯ
ಹಿಂದಿನ ದಿನ ರಾತ್ರಿಯಿಡೀ ಜಾಗರಣೆ
ಮಾಡಿ ಓದುವುದು ಈಗ ಹಲವಾರು ವಿದ್ಯಾರ್ಥಿಗಳ
ಸಾಮಾನ್ಯ ಜೀವನವಾಗಿದೆ. ಕೆಲವರು ಕಾಫಿ ಕುಡಿಯುತ್ತಾ, ಕೆಲವರು
ಮುಖ್ಯವಾದ ಪ್ರಶ್ನೆ ಹುಡುಕುತ್ತಾ, ಮತ್ತೊಬ್ಬರು ಸ್ನೇಹಿತರಿಗೆ ಕರೆ ಮಾಡಿ “ಯಾವ
ಪಾಠ ಮುಖ್ಯ?” ಎಂದು ಕೇಳುತ್ತಾ ರಾತ್ರಿ
ಕಳೆಯುತ್ತಾರೆ. ಓದಿದದ್ದು ನೆನಪಿರುತ್ತದೆಯೋ ಇಲ್ಲವೋ ಎಂಬ ಆತಂಕ ಬೇರೆ.
ಆದರೆ
ನಿಜವಾಗಿ ನೋಡಿದರೆ ಪರೀಕ್ಷೆ ಎಂದರೆ ಭಯಪಡುವ ವಿಷಯವಲ್ಲ. ಅದು ನಮ್ಮ ಜ್ಞಾನವನ್ನು
ಪರೀಕ್ಷಿಸುವ ಒಂದು ಹಂತ ಮಾತ್ರ.
ಪ್ರತಿದಿನ ಸ್ವಲ್ಪ ಸಮಯ ಓದಿದರೆ ಕೊನೆಯ
ಕ್ಷಣದ ಒತ್ತಡ ಕಡಿಮೆಯಾಗುತ್ತದೆ. ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.
ವಿದ್ಯಾರ್ಥಿ
ಜೀವನದಲ್ಲಿ ಪರೀಕ್ಷೆ ಮುಖ್ಯವೇ ಸರಿ. ಆದರೆ ಆರೋಗ್ಯ,
ಆತ್ಮವಿಶ್ವಾಸ ಮತ್ತು ಮನದ ಶಾಂತಿ ಕೂಡ
ಅಷ್ಟೇ ಮುಖ್ಯ. ಆದ್ದರಿಂದ ಕೊನೆಯ ದಿನದ ಓದನ್ನು ಬಿಟ್ಟು,
ಪ್ರತಿದಿನ ಸ್ವಲ್ಪ ಸ್ವಲ್ಪ ಕಲಿಯುವ ಅಭ್ಯಾಸ ಬೆಳೆಸಿಕೊಂಡರೆ ಪರೀಕ್ಷೆ ಯುದ್ಧದಂತೆ ಅನ್ನಿಸದೇ, ಒಂದು ಸಾಮಾನ್ಯ ಹಂತದಂತೆ
ಕಾಣುತ್ತದೆ.
ರಮ್ಯಾ ನಾಯ್ಕ್
ಎಸ್.
ಡಿ. ಎಂ. ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



