ಯುವಜನರು ತಂತ್ರಜ್ಞಾನ ಬೆಳವಣಿಗೆಗೆ ಸಂಶೋಧನೆಗೆ ಒತ್ತು ನೀಡಬೇಕು: ಉಲ್ಲಾಸ್ ಕೆ.ಟಿ

Upayuktha
0

ಮಂಗಳೂರು: ಭಾರತದಲ್ಲಿ ತಂತ್ರಜ್ಞಾನ ಅತೀ ವೇಗವಾಗಿ ಬೆಳೆಯುತ್ತಿದ್ದು, ಅದರಂತೆ ಸಮಾಜ ಬದಲಾಗಬೇಕಾಗಿದೆ. ದೇಶದ ಅಭಿವೃದ್ಧಿಗೆ ತಂತ್ರಜ್ಞಾನ ಬೆಳೆವಣಿಗೆ ಹೆಚ್ಚು ಪ್ರಾಮುಖ್ಯತೆ ವಹಿಸಿದ್ದು ಯುವಜನರು ಇನ್ನಷ್ಟು ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಿ ಹೊಸ ಆವಿಷ್ಕಾರ ಮಾಡಬೇಕಾಗಿದೆ ಎಂದು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಉಪ ನಿರ್ದೇಶಕ ಉಲ್ಲಾಸ್ ಕೆ.ಟಿ ಹೇಳಿದರು.


ಅವರು ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೇರಾ ಯುವ ಭಾರತ್ ದಕ್ಷಿಣ ಕನ್ನಡ, ವಿವೇಕಾನಂದ ಇಂಜಿನಿಯರಿಂಗ್  ಕಾಲೇಜು ಪುತ್ತೂರು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಲಕ್ಷ್ಮಿ ಯುವ ಫೌಂಡೇಶನ್ ಇದರ ಸಹಯೋಗದೊಂದಿಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನ 2026 ನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ಮುಖ್ಯಸ್ಥ ಡಾ. ಶ್ರೀಶ ಭಟ್ ಮಾತನಾಡಿ, ದೈನಂದಿನ ತಂತ್ರಜ್ಞಾನ ಬಳಕೆ ಅದೇ ನಮ್ಮ ಕಲಿಕೆಯಾಗಬಾರದು, ಭಾರತದಲ್ಲಿ ಯುವಜನರು  ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಇದರಿಂದ ಭಾರತ ವಿದೇಶಕ್ಕೆ ಪೈಪೋಟಿ ನೀಡಬಹುದಾಗಿದೆ. ತಂತ್ರಜ್ಞಾನ ಸಂಶೋಧನೆಯಿಂದ ಉತ್ತಮ ಅವಕಾಶಗಳು ಯುವಜನರಿಗೆ ಇದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಅವರು ಮಾತನಾಡಿ, ತಂತ್ರಜ್ಞಾನ ಬಳಕೆ ಜಿಡಿಪಿ ಬೆಳೆಯಲು ಸಹಕಾರಿಯಾಗುತ್ತಿದೆ. ಇಂದಿನ ಕೃತಕ ಬುದ್ಧಿಮತ್ತೆ ಎಲ್ಲಾ ಕೆಲಸಗಳಿಗೆ ಹೆಚ್ಚು ವೇಗವನ್ನು ನೀಡುತ್ತಿದ್ದು, ಕೃತಕ ಬುದ್ದಿಮತ್ತೆಯಿಂದ ಬಹಳಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂದರು.


ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮೇರಾ ಯುವ ಭಾರತ್ ಆಡಳಿತಾಧಿಕಾರಿ ಜಗದೀಶ್, ಕಾಲೇಜಿನ ದೈಹಿಕ ಶಿಕ್ಷಣ  ನಿರ್ದೇಶಕ ಬಾಲಚಂದ್ರ ಗೌಡ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರ ಶ್ರೀಕಾಂತ್ ಪೂಜಾರಿ ಬಿರಾವು ಸ್ವಾಗತಿಸಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ಕುಮಾರ್ ವಂದಿಸಿದರು. ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಮತ್ತು ಆಕಾಂಕ್ಷ ಕಾರ್ಯಕ್ರಮ ನಿರೂಪಿಸಿದರು.




Post a Comment

0 Comments
Post a Comment (0)
To Top