ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 37 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸಿ ಮೇ 30 ರಂದು ನಿವೃತ್ತಿ ಹೊಂದಲಿರುವ ಕಾಲೇಜು ಕಚೇರಿಯ ಪ್ರಥಮ ದರ್ಜೆ ಸಹಾಯಕಿ ವಿಜಯ ಕುಮಾರಿ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಇಂದು (ಮೇ 26) ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಆಯೋಜಿಸಲಾಯಿತು.
ವಿಜಯ ಕುಮಾರಿ ಇವರ ಸೇವೆಯನ್ನು ಶ್ಲಾಘಿಸಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯ ಕುಮಾರಿ ಇವರು ವಿಜಯ ಕುಮಾರಿ ಇವರ ವೃತ್ತಿ ಜೀವನ ಕಿರಿಯರಿಗೆ ಮಾದರಿ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಲಕ್ಷ್ಮೀಶ ಭಟ್ ಮಾತನಾಡುತ್ತಾ, ವಿಜಯ ಕುಮಾರಿ ಇವರ ಕಾರ್ಯ ತತ್ಪರತೆಯನ್ನು ಶ್ಲಾಘಿಸಿದರು. ನಿಮ್ಮ ಮಾರ್ಗದರ್ಶನ ಮುಂದಿನ ದಿನಗಳಲ್ಲಿ ನಮ್ಮ ವೃತ್ತಿ ಬದುಕಿಗೆ ದಾರಿದೀಪ ಎಂದು ಹೇಳಿದರು.
ವಿಜಯ ಕುಮಾರಿ ಇವರೊಂದಿಗೆ ಸದಾ ಒಡನಾಟದಲ್ಲಿರುವ ಕಾಲೇಜಿನ ಕಚೇರಿ ಸಿಬ್ಬಂದಿ ರಂಜಿತಾ ಎಂ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, ಎಲ್ಲರಿಗೂ ಸಹಾಯ ಮಾಡುವ ಮನಸ್ಥಿತಿ ಹೊಂದಿರುವ ವಿಜಯಕ್ಕನ ಮಾರ್ಗದರ್ಶನ ಅವಿಸ್ಮರಣೀಯ. ನೇರ ನುಡಿಯ ವಿಜಯ ಕುಮಾರಿ ಇವರ ಸಲಹೆಗಳು ಎಂದಿಗೂ ನೆನಪಿರುವಂಥದ್ದು. ತೆರೆಮರೆಯ ಕಾಯಿಯಂತೆ ಬೋಧಕೇತರ ಸಿಬ್ಬಂದಿಗಳ ಕೆಲಸ ಸದಾ ಸ್ಮರಣೀಯ ಎಂದು ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಕಛೇರಿ ಪ್ರಬಂಧಕ ದಿವಾಕರ ಪಟವರ್ಧನ್ ವಿಜಯ ಕುಮಾರಿ ಇವರದ್ದು ಸಹೋದ್ಯೋಗಿಗಳೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಅವರ ಬಾಂಧವ್ಯ ಅವಿನಾಭಾವ ಎಂದು ಹೇಳುತ್ತಾ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್ ಎನ್ ಕಾಕತ್ಕರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ್ ಪಿ, ಹಾಗೂ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಡಾ . ರಾಜೇಶ್ ಬಿ ಅವರ ಇವರು ವಿಜಯ ಕುಮಾರಿ ಇವರ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಯನ್ನು ನೆನಪಿಸಿ ಗೌರವಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ವಿಜಯಕ್ಕ ಸಂಸ್ಥೆಯೊಂದಿಗೆ ತಮ್ಮ ಒಡನಾಟವನ್ನು ಹಂಚಿಕೊಳ್ಳುತ್ತಾ, ದಿವಂಗತ ಪ್ರೊ. ಎಸ್ ಪ್ರಭಾಕರ್ ಹಾಗೂ ಡಾ. ಬಿ ಯಶೋವರ್ಮ ಅವರ ಮಾರ್ಗದರ್ಶನವನ್ನು ನೆನಪಿಸಿಕೊಂಡರು. ಬದುಕು ಕಟ್ಟಿಕೊಟ್ಟ ಸಂಸ್ಥೆ ಈ ಕಾಲೇಜು. ಅದಕ್ಕೆ ನಾನು ಸದಾ ಚಿರಋಣಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಐಕ್ಯೂಎಸಿ ಸಂಜೋಜಕ ಜಿ ಆರ್ ಭಟ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸೌಮ್ಯ ಬಿ ಪಿ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಯುವರಾಜ ಪೂವಣಿ ಉಪಸ್ಥಿತರಿದ್ದರು.
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಂಘದ ಕಾರ್ಯದರ್ಶಿ ಸೀಮಾ ಪಿ ಸ್ವಾಗತಿಸಿ, ಪದವಿ ಕಾಲೇಜಿನ ಕಛೇರಿ ಸಿಬ್ಬಂದಿ ಅಜಯ್ ರಾಜ್ ವಂದಿಸಿದರು. ಪದವಿ ಪೂರ್ವ ಕಾಲೇಜಿನ ಗ್ರಂಥಾಲಯ ಸಹಾಯಕ ಹರೀಶ್ ಕಾರ್ಯಕ್ರಮ ನಿರೂಪಿಸಿದರು.


