ಅಮ್ಮಾ ಐ ಲವ್ ಯೂ.... !

Upayuktha
0


ಭಾರತೀಯ ಭಾಷೆಗಳಲ್ಲಿ ಅಮ್ಮಾ, ಮಾ ಎಂಬ ಶಬ್ದ ಹೊಟ್ಟೆಯೊಳಗಿನಿಂದ ಮೇಲೆ ಬಂದು, ನಾಲಿಗೆ ಉಲಿಯುವ ಮರೆಯಲಾಗದ ಬಾಂಧವ್ಯದ ಶಬ್ದ. 9 ತಿಂಗಳು ನನ್ನನ್ನು ಹೊತ್ತು-ಹೆತ್ತ ತಾಯಿಯ ಋಣ ತೀರಿಸಲು ಎಂದೆಂದಿಗೂ ಸಾಧ್ಯವಿಲ್ಲ. ‘ಕುಪುತ್ರೋ ಜಾಯೇತ, ಕ್ಪಚಿತಪಿ ಕುಮಾತಾ ನ ಭವತಿ’ ಎಂಬ ಶ್ಲೋಕ ಆರ್ಥಪೂರ್ಣ. ಒಂದು ವೇಳೆ ಕೆಟ್ಟಮಗ ಹುಟ್ಟಬಹುದು, ಆದರೆ ಕೆಟ್ಟತಾಯಿ ಹುಟ್ಟಲು ಸಾಧ್ಯವೇ ಇಲ್ಲ.


ಹಿಂದಿನ ಹಿಂದಿ ಚಿತ್ರಗಳಲ್ಲಿಯ, ಅನೇಕ ಕನ್ನಡ ಚಿತ್ರಗಳಲ್ಲಿಯ ವಿವಿಧ ನಾಯಕರು, ಖಳನಾಯಕರಿಗೆ ಹಾಕಿದ ಸವಾಲು ನೆನಪಿದೆಯೇ ? - “ಇಲ್ಲಿ ನನ್ನನ್ನು ಎದುರಿಸಲು ತಾಯಿಹಾಲು ಕುಡಿದ ಗಂಡಸರು ಯಾರಾದರೂ ಇದ್ದರೆ ಮುಂದೆ ಬನ್ನಿ...’ 


ತಂದೆ-ತಾಯಿ-ಅಜ್ಜ-ಅಜ್ಜಿ ದೊಡ್ಡ ಕುಟುಂಬ ನೋಡಿರದ, ಇಂದಿನ ತಲೆಮಾರಿನ ಬಹಳ ಜನರಿಗೆ ತಂದೆ-ತಾಯಿ ಕುಟುಂಬದ ಬಗ್ಗೆ ಅಷ್ಟೊಂದು ಗಾಢ ಸಂಬಂಧವಿರುವುದಿಲ್ಲ. ಆದರೆ ನನಗೆ ನನ್ನ ಮುತ್ತಜ್ಜಂದಿರು, ಅಜ್ಜ-ಅಜ್ಜಿ, ಅಪ್ಪ-ಅಮ್ಮ ಇವರೆಲ್ಲ ನನ್ನ ಆರಾಧ್ಯ ದೈವಗಳು. ಹೀಗಾಗಿ ನನ್ನ ತಾಯಿ ಗಿರಿಜಾ ನನಗೆ ದೇವತಾ ಸ್ವರೂಪಿಣಿ. ಕಾಲ್ಪನಿಕವಾಗಿ ತಾಯಿಯ ಮಹತ್ವದ ಬಗ್ಗೆ ಹೇಳುವುದಕ್ಕಿಂತ ನನ್ನ ತಾಯಿಯ ಜೀವನಾನುಃಭವದ ಮಾತುಗಳನ್ನೇ ಇಲ್ಲಿ ನೆನೆಪು ಮಾಡಿಕೊಳ್ಳುತ್ತಿದ್ದೇನೆ.


ನನ್ನ ತಂದೆ ವಾಮನ್ ತಾತ ವೆಂಕಟಾಚಲ ಶಾಸ್ತ್ರಿ, ಮೈಸೂರು ಅರಮನೆಯಲ್ಲಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಧರ್ಮಶಾಸ್ತ್ರ ಹಾಗೂ ನ್ಯಾಯಶಾಸ್ತ್ರಗಳ ಸಲಹೆಗಾರರಾಗಿದ್ದರೆ, ನನ್ನ ತಾಯಿಯ ತಾತ ಶ್ರೀಕಂಠೇಶ್ವರ ಅಯ್ಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ಅರಮನೆಗೆ ಸಂಬಂಧಿಸಿದ ವಿವಿಧ ಹುದ್ದೆಗಳು ಹಾಗೂ ಮೈಸೂರಿನ ಐಜಿಪಿಯಾಗಿದ್ದರು. ಈ ಹಿನ್ನೆಲೆಯ ನನ್ನ ತಾಯಿಯ ಅನುಭವಗಳೇನು ಎಂದು 10-2-1980ರಂದು ಗುಲಬರ್ಗಾದಲ್ಲಿ ಧ್ವನಿಮುದ್ರಿಸಿದ ಸಂದರ್ಶನದಲ್ಲಿ ಅವರು ಹೇಳಿದ ಮಾತುಗಳಿಗೆ ಇಲ್ಲಿ ಬರಹದ ರೂಪ ಕೊಡುತ್ತಿದ್ದೇನೆ.


“ನಾನು ಚಿಕ್ಕಂದಿನಿಂದ ಮೈಸೂರಿನ ಲಕ್ಷ್ಮೀಪುರಂನಲ್ಲಿದ್ದೆ. ನಮ್ಮ ಮಾವ ಸಿ. ರಾಮಸ್ವಾಮಿ ಅಯ್ಯರ್, ಅವರ ಮೈಸೂರಿನ ಮಹಾಲಕ್ಷ್ಮಿ ಹೆಸರಿನ ಮನೇಲಿ ಬೆಳೆದೆ. ಚಿಕ್ಕಂದಿನಿಂದ ನನಗೆ ಆಟ, ಹೂವು, ಇದೇ ಇಷ್ಟ. ಓದೋದರ ಮೇಲೆ ಅಷ್ಟು ಇಷ್ಟ ಇರಲಿಲ್ಲ. 7ನೇ ಕ್ಷಾಸ್ ತನಕ ಓದಿದೆ. ನಮ್ಮಜ್ಜಿ, ಬಹಳ ಮಡಿ ಮಡಿ ಅಂತಿದ್ರು ನಮ್ಮ ಅಜ್ಜಿ ನಿಮ್ಮ ನಂಜನಗೂಡು ಅಜ್ಜಿ ಬಹಳ ಸ್ನೇಹಿತರು. ಅವರು ಒಂದ್ಸಲ ಬಂದು “ನಿಮ್ಮ ಮೊಮ್ಮಗಳನ್ನು, ನಮ್ಮ ಮೊಮ್ಮಗನಿಗೆ ಕೊಡು” ಅಂತ ಕೇಳಿದ್ರು. ಜಾತಕ ಕೊಟ್ರು. ನನ್ನ ನೋಡೋಕೆ ಬಂದ್ರು. ನಾನು ಲಂಗ ದಾವಣಿಲಂಗ ಹಾಕ್ಕೋತಾ ಇದ್ದೆ. ವಾಮನವರನ್ನ ನೋಡಿದ್ರೆ ಕೆಂಪಾಗಿದ್ರು. ತುಂಬಾ ಇಷ್ಟವಾಯಿತು. ಒಪ್ಪಿಕೊಂಡೆ. ಮದುವೆ ಮಾಡಿಕೊಟ್ರು. ಅತ್ತೆ ಮನೆಗೆ ಬಂದೆ, ನನಗೆ ಆಗ ಹೆದರಿಕೆ ಜಾಸ್ತಿ. ನಮ್ಮನೇಲಿ ಮುದ್ದಾಗಿ ಬೆಳೆದಿದ್ದೆ. ನಾನು ಒಂದು ಕೆಲಸಾನೂ ಮಾಡ್ತಾ ಇರಲಿಲ್ಲ. ನನ್ನ ಅತ್ತೆ ನನಗೆಲ್ಲ ಹೇಳಿಕೊಟ್ರು. ನನ್ನ ನಾದಿನಿ ನನ್ನ ಜೊತೆ ಕೆಲಸ ಮಾಡಿದಳು. 


ನಮ್ಮನೇಲಿ ತುಂಬಾ ನಾಗಲಿಂಗ ಪುಷ್ಪ ಬಿಡ್ತಾ ಇತ್ತು. ನನ್ನ ಮೈದುನ ಸುಂದರ್ ಬಂದು, ಕಿತ್ಕೊಂಡು ಹೋಗ್ತಿದ್ರು. ನಾನು ಆಗ ವೀಣೆ ಕಲೀತಿದ್ದೆ. ಮಾವನವರು ಆಗಾಗ ಬರ್ತಿದ್ರು. ಆ ಹಬ್ಬ ಈ ಹಬ್ಬ ಸೊಸೇನ ಕಳಿಸಿ ಅಂತ ಬರ್ತಿದ್ರು. ನನಗೋ ಚಿಕ್ಕ ವಯಸ್ಸು. ಗಂಡನ ಮನೆಗೆ ಹೋಗಿ ಎಲ್ಲರ ಜೊತೆ ಮಾತಾಡಬೇಕು, ಹಾಡಬೇಕು, ಕುಣಿಬೇಕು, ಸಿನಿಮಾಗೆ ಹೋಗಬೇಕು ಅಂತ ಆಸೆ. ನಮ್ಮನೇಲಿ ನಮ್ಮಜ್ಜಿ ಸಿನಿಮಾಗೆಲ್ಲಾ ಕಳಿಸ್ತಾ ಇರ್ಲಿಲ್ಲ. ಅವರಿಗೆ ನಾವೆಲ್ಲ ಮನೇಲೇ ಇರಬೇಕು. ಹೊರಗೆ ಹೋಗಲೇಬಾರದು. ಅನ್ನೂ ಹಳೇ ಕಾಲದವರು ನನ್ನ ನಾದಿನಿ, ಮೈದುನ, ಬಂದ ಕೂಡಲೇ, ಏನಾದರೂ ನೆವ ಹೇಳಿ, ಅವರ ಜೊತೆ ಹೊರಟು ಬಿಡ್ತಿದ್ದೆ.


ನನ್ನ ಗಂಡ ಮೈಸೂರು ಆಕಾಶವಾಣೀಲಿ ನಾಟಕಗಳಲ್ಲಿ ಹೆಂಗಸರ ಜೊತೆ ಪಾರ್ಟು ಮಾಡ್ತಿದ್ದರಲ್ಲ, ನನಗೆ ರೇಡಿಯೋ ಕಾರ್ಯಕ್ರಮ ಹೇಗೆ ಮಾಡ್ತಾರೆ ಅದೆಲ್ಲ ಗೊತ್ತಿರಲಿಲ್ಲ ನಾಟಕ ಹೇಗಿರೋದು? ಗಂಡು-ಹೆಣ್ಣು ಒಟ್ಟಿಗೆ ಹ್ಯಾಗೆ ಪಾರ್ಟು ಮಾಡ್ತಾರೆ. ತುಂಬಾ ಹತ್ತಿರ ಇರ್ತಾರ ?  ಪ್ರೇಮ ದೃಶ್ಯಗಳಲ್ಲಿ ನಿಜವಾಗ್ಲೂ ಲವ್ ಮಾಡ್ತಾರಾ, ಅಂತ ತಿಳಿಕೋಬೇಕು ಅನ್ನೋ ಹಟದಿಂದ, ನಾನೂ ಬರ್ತಿನಿ ಅಂತ ಒಂದ್ಸಲ ಹಟ ಹಿಡಿದೆ. ಆಗ ನಾರಾಯಣರಾವ್ ಅವರ ಹೆಂಡತಿ, ಕಾಮಾಕ್ಷಮ್ಮ, ಕುಮಾರ(ವಿಷ್ಣುವರ್ಧನ) ರವಿ ಎಲ್ಲ ಬಂದಿದ್ರು. ಧ್ರುವ ಅಂತ ನಾಟಕ ಮಾಡಿದ್ರು. ನಾಟಕದ ಪ್ರಾಕ್ಟೀಸ್ ಆಕಾಶವಾಣಿಗೆ ಬಂದು ನೋಡಿದ ಮೇಲೆ, ಅಯ್ಯೋ ಇಷ್ಟೇನಾ ? ಬರೀ ಓದ್ತಾ ದೂರ ದೂರ ಇರ್ತಾರೆ ಪರವಾಗಿಲ್ಲಪ್ಪ. ಅಂತ ಧೈರ್ಯ ಬಂತು (ನಗುವರು).


ತಾತಾ ಕೃಷ್ಣ ರಾಜೇಂದ್ರ ಒಡೆಯರ್ ಕಾಲದಲ್ಲಿ ಪೋಲೀಸ್ ಐ.ಜಿ. ಆಗಿದು. ದಿವಾನ್ ಬಹದ್ದೂರು ಆಗಿದ್ರು, ನಮ್ಮ ತಾತಾನ ಕಂಡ್ರೆ ಹೆದರಿಕೆ, ಹುಲಿ ತರಹ ಇದ್ರು. ಅವರಿಗೆ ಆ ಮನೆಯ ಯಾವ ಹೆಂಗಸರೂ ಹೊರಗೆ ಹೋಗಬಾರದು. ಸುಮ್ಮನೆ ಮಾತಾಡ್ತಾ ಕೂರಬಾರದು. ಬಹಳ ಕಟ್ಟಪ್ಪಣೆ. ನಮ್ಮಜ್ಜಿ ನಮ್ಮ ತಾಯಿ ಚಿಕ್ಕಮ್ಮ ಎಲ್ಲ ಹೆದರಿಕೊಳ್ಳೋವ್ರು. ಮನೇಲೇ ಓದಬೇಕು. ಮನೇಲೇ ಆಡಬೇಕು, ಅರಮನೆಯಿಂದ ಆಗ ಕೋಚ್ ಗಾಡಿ ಬರ್ತಿತ್ತು. ಮಹಾರಾಣಿ, ನಮ್ಮಜ್ಜಿ ಬಹಳ ಸ್ನೇಹಿತರು. ಅವರು ಅರಮನೆಯಿಂದ ಬಹಳ ತಿಂಡಿ ತಂದುಕೊಡೋವ್ರು. ನಮ್ಮಜ್ಜೀನೂ ಹಪ್ಪಳ, ಸಂಡಿಗೆ, ಮೆಣಸಿನ ಪುಡಿ ಎಲ್ಲ ಬೇಕಾದಷ್ಟು ಮಾಡಿ ಕಳಿಸ್ತಿದ್ರು. ಆಗ ಅರಮನೆ, ದಸರಾ ಎಲ್ಲ ಬಹಳ ಚೆನ್ನಾಗಿತ್ತು ಅಂತ ನೋಡಿದ ನೆನಪು. ಂ ಅಟಚಿss Pಚಿss ನಮ್ಮ ತಾತಗೂ ಬರೋದು. ನಮ್ಮ ಮಾವ ಊigh ಅouಡಿಣ ಎuಜge ಸಿ.ಸುಬ್ರಹ್ಮಣ್ಣ ಅಯ್ಯರ್ ಅಂತ. ನಮ್ಮ ತಾಯಿ ಅಣ್ಣ. ಬೆಂಗಳೂರಿನಿಂದ ಬರೋವ್ರು. ಅವ್ರಿಗೂ ಪಾಸ್ ಬರೋದು. ನಮ್ಮನ್ನು ಕಾರಲ್ಲಿ ಕರಕೊಂಡು ಹೋಗೋವ್ರು. ಆಗ ದಾವಣಿ ಲಂಗ ಹಾಕ್ಕೋತ್ತಿದ್ದೆ ಚಿಕ್ಕ ಹುಡುಗಿ ಎಲ್ಲ ಕಡೆ ಹೋಗಬೇಕು ನೋಡಬೇಕು ಅನ್ನೋ ಆಸೆ. 


ನಮ್ಮಣ್ಣ ಪಿ.ವಿ. ರಾಮಚಂದ್ರನ್ ನನ್ನ ಚೆನ್ನಾಗಿ ನೋಡಿಕೊಂಡು ನನಗೆ ಮದುವೆ ಎಲ್ಲ ಮಾಡಿಕೊಟ್ರು. ನನಗೆ 4-5 ಅಬಾರ್ಶನ್ ಆಯ್ತು. ನಮ್ಮಜ್ಜಿ ರಾಮೇಶ್ವರಕ್ಕೆ ಕಳಿಸಿ ಅಲ್ಲಿ ನಾಗಪ್ರತಿಷ್ಟೆ ಮಾಡಿ ಬಂದ ಮೇಲೆ ರಮೇಶ ಹುಟ್ಟಿದ. ನಮ್ಮ ತಾಯಿ ಮಗೂಗೆ ಎಣ್ಣೆ ನೀರು ಹಾಕಿ ಧೂಳೀಲಿ ಮಲಗಿಸಿರೋವ್ರು. ನಮ್ಮತ್ತೆ ಧಡಧಡ ಬಂದು ಮಗೂನ ಎಬ್ಬಿಸಿ ಅಂತಿದ್ರು. ನಮ್ಮ ತಾಯಿ ‘ಪಾಪ ಮಗು ಈಗ ತಾನೆ ಮಲಗಿದೆ, ನಿದ್ರೆ ಮಾಡ್ತಿದೆ’ ಅಂತಿದ್ರು. ಆದ್ರೂ ನಮ್ಮತ್ತೆ ಮಗೂನ ಎಬ್ಬಿಸಿ ಆಟ ಆಡಿಸಿ ಹೋಗ್ತಿದ್ರು ಮಗು ಚೆನ್ನಾಗಿ ಆಟ ಆಡ್ತಿತ್ತು. ರಾತ್ರಿ ಮಗು ರಚ್ಚೆ ಹಿಡಿದ್ರೆ ನಾನು ಅಳ್ತಿದ್ದೆ. 


ದಿಲ್ಲೀಲಿ ನಾವಿದ್ದಾಗ ಯುಗಾದಿ ದಿನ ನೀರು ಹಾಕಿದಾಗ ಮಗು ಕಾಲು ಊದುಕೊಂಡಿತ್ತು. ಹೊರಗೆ ಧಾರಕಾರ ಮಳೆ ಒಳಗೆ ಲೈಟ್ ಇರಲಿಲ್ಲ. ವಿಲ್ಲಿಂಗ್‍ಡನ್ ಆಸ್ಪತ್ರೆಗೆ ಸೇರಿಸಿದ್ವಿ ನಮಗೆ ಹಿಂದಿ ಬರ್ತಾ ಇರಲಿಲ್ಲ. 


ನಮ್ಮತ್ತೆ ತಂಗಮ್ಮ 3 ರೈಲು ಬದಲಾಯಿಸಿಕೊಂಡು ಮೈಸೂರಿನಿಂದ ದಿಲ್ಲಿಗೆ ಬಂದು ನಮ್ಮನ್ನ ಕರೆದುಕೊಂಡು ಮೈಸೂರಿಗೆ ಹೋದ್ರು ಆಗ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿದ್ದ ಸರ್ಜನ್ ಡಾ. ಆದಿಕೇಶ್ವರಲು ತಕ್ಷಣ ಚಿಜmiಣ ಮಾಡ್ಕೊಂಡ್ರು. ಮಾರನೇ ದಿನ ಆಪರೇಷನ್ ಮಾಡಿದ್ರು. ತಲೆ ತುಂಬಾ ಕೂದಲು ಜಡೆ. ಯಾರು ಆಸ್ಪತ್ರೆಗೆ ಬಂದ್ರೂ ಹೂ ಕೊಡು ಅಂತ ಕೇಳ್ತಿದ್ದ. ಕಡ್ಲೆಕಾಯಿ ಮಾರೋವ್ಳ ಹತ್ತಿರ ಕಡ್ಲೆಕಾಯಿ ಕೇಳ್ತಿದ್ದ. ಡಾಕ್ಟರ್ ಬಂದ್ರೆ ಆಯಾ ಬಗ್ಗೆ ಕಂಪ್ಲೆಟ್ ಹೇಳುವೆ. ಹಾಸಿಗೆ ಚೆನ್ನಾಗಿಲ್ಲ, ಹೊದಿಕೆ ಇಲ್ಲ ಅಲ್ಲಿ ಚುಚ್ಚುತ್ತೆ ಎನ್ನುತ್ತಿದ್ದ. ವಾರ್ಡ್ ಡಾಕ್ಟರ್ ಬಂದ್ರು ಪೆಪ್ಪರ್‍ಮೆಂಟ್ ಕೊಟ್ಟು ಇಂಜೆಕ್ಷನ್ ಕೊಟ್ಟು ಹೋಗ್ತಿದ್ರು. 2 ಡಬ್ಬಿ ತುಂಬಾ ಪೆನ್ಸಲಿನ್ ಬಾಟಲಿ ಸೇರಿಸಿ ಇಟ್ಟುಕೊಂಡು ರೈಲು ಮಾಡ್ತಿದ್ದ. ಕಾಲಿಗೆ ಪ್ಲಾಸ್ಟರ್ ಹಾಕಿದ್ರು. ಅವನಿಗೆ ಕಥೆ ಹುಚ್ಚು. ಅವನ ಮಾಮಿ ರಾಜಲಕ್ಷ್ಮಿ ಅವನಿಗೆ ದಿನಾ ಕಥೆ ಹೇಳ್ತಿದ್ರು. 


ನನ್ನ ತಾಯಿ ಗಿರಿಜಾಳ ಈ ಮಾತುಗಳನ್ನ ನೀವು ಓದಿದರೆ ಅನಿಸಬಹುದು - 1938ರಲ್ಲಿ ಹುಟ್ಟಿ 14ನೇ ವರ್ಷದಲ್ಲಿ ಮದುವೆಯಾದ ಈಕೆ 1980ರಲ್ಲಿ ನನಗೆ ಹೇಳಿರುವ ಈ ಜೀವನಾನುಭವ ನಿಮಗೆ ವಿಶೇಷ ಅನ್ನಿಸಬಹುದಲ್ವಾ !

****

-ಎನ್.ವ್ಹಿ. ರಮೇಶ್

ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು

ಆಕಾಶವಾಣಿ

ಮೈಸೂರು. ಮೊ. : 9845565238 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top