ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಸಂಸ್ಥೆ
ಆರು ದಶಕಗಳಿಗೂ ಮಿಕ್ಕಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಪುತ್ತೂರಿನ ಏಕೈಕ ವಿದ್ಯಾಸಂಸ್ಥೆ
ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀಡುತ್ತಿರುವ ಪುತ್ತೂರಿನ ಏಕೈಕ ಪದವಿಪೂರ್ವ ಕಾಲೇಜು
"ಒಂದು ಸಮಾಜದ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ವ್ಯಕ್ತಿನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕಿಂತ ಸಾಂಸ್ಥಿಕ ನೆಲೆಯಲ್ಲಿ ಸ್ಥಾಪಿಸುವುದು ಸುಲಭವೂ ಅನುಕೂಲವೂ" ಎನ್ನುವ ಮೊಳಹಳ್ಳಿ ಸದಾಶಿವರಾಯರ ಆಶಯದೊಂದಿಗೆ 1915 ರಲ್ಲಿ ಹುಟ್ಟಿಕೊಂಡ ಸಂಸ್ಥೆ ಪುತ್ತೂರು ಎಜ್ಯುಕೇಶನ್ ಸೊಸೈಟಿ. ಪ್ರಸ್ತುತ ‘ವಿವೇಕಾನಂದ ವಿದ್ಯಾವರ್ಧಕ ಸಂಘʼ ಎಂದು 2009 ರಲ್ಲಿ ಮರುನಾಮಕರಣಗೊಂಡು ವಿಶಾಲವಾಗಿ ಮತ್ತು ಸದೃಢವಾಗಿ ಪುತ್ತೂರಿನಲ್ಲಿ ತಲೆಯೆತ್ತಿ ನಿಂತಿದೆ. 1916 ರಿಂದ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆಯು ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಬೇಕಾದ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುತ್ತಾ ಬಂದಿದೆ.
"ವಿದ್ಯಾಭ್ಯಾಸ ಎಂದರೇನು? ಪುಸ್ತಕ ಪಾಂಡಿತ್ಯವೇ? ಅಲ್ಲ, ಹಲವು ವಿಧದ ಜ್ಞಾನಾರ್ಜನೆಯೇ? ಅದೂ ಅಲ್ಲ, ಯಾವ ಬಗೆಯ ಶಿಕ್ಷಣದಿಂದ ಶೀಲ ರೂಪುಗೊಳ್ಳುವುದೋ, ಮನಃಶಕ್ತಿ ವೃದ್ಧಿಯಾಗುವುದೋ, ಬುದ್ಧಿ ವಿಕಾಸಗೊಳ್ಳುವುದೋ ಮತ್ತು ಯಾವುದರಿಂದ ನಮ್ಮ ಸ್ವಂತ ಕಾಲ ಮೇಲೆ ನಾವು ನಿಂತುಕೊಳ್ಳಬಲ್ಲೆವೋ, ಅಂತಹ ಶಿಕ್ಷಣ ನಮಗೆ ಅವಶ್ಯಕ" ಎಂಬ ಸ್ವಾಮಿ ವಿವೇಕಾನಂದರ ಮಾತಿನ ಅನ್ವಯದಂತೆ, ಗ್ರಾಮೀಣ ಪ್ರದೇಶದ ಜನತೆಯ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ ಮತ್ತು ಒಂದು ಮಗುವಿನ ಪರಿಪೂರ್ಣ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಬಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಕೂಸು ವಿವೇಕಾನಂದ ಪದವಿಪೂರ್ವ ಕಾಲೇಜು. ಪ್ರಸ್ತುತ ವಿವೇಕಾನಂದ ಪದವಿಪೂರ್ವ ಕಾಲೇಜು, ಮೌಲ್ಯಾಧಾರಿತ ಕಲಿಕೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುವ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾಗಿ ನಾಡಿನಾದ್ಯಂತ ಗುರುತಿಸಿಕೊಂಡಿದೆ.
ಸಂಸ್ಥೆಯ ಧ್ಯೇಯ:
ಪ್ರತಿ ವಿದ್ಯಾರ್ಥಿಯಿಂದ ಶ್ರಮ, ಶ್ರದ್ಧೆ, ಪ್ರಾಮಾಣಿಕತೆಯನ್ನು ಅಪೇಕ್ಷಿಸುವ ವಿದ್ಯಾಸಂಸ್ಥೆಯು ತನ್ನದೇ ಆದ ಧ್ಯೇಯವನ್ನು ಹೊಂದಿದೆ.
• ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಒಳಗೊಂಡ ಶುದ್ಧ, ಸರಳ, ಆಧುನಿಕ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು.
• ವಿದ್ಯಾರ್ಥಿ ಸಮೂಹದಲ್ಲಿ ನಿಸ್ವಾರ್ಥ ಶ್ರದ್ಧಾಪೂರ್ಣ ರಾಷ್ಟ್ರಸೇವೆಯ ಚೈತನ್ಯವನ್ನು ಉದ್ದೀಪನಗೊಳಿಸುವುದು.
• ಯುವ ಜನಾಂಗದಲ್ಲಿ ಶ್ರೇಷ್ಠತಮ ಶೀಲಸಂವರ್ಧನೆಯನ್ನು ಮೈಗೂಡಿಸುವುದು.
• ವಿದ್ಯಾರ್ಥಿ ಸಮೂಹದಲ್ಲಿ ಓರಣದ ನಡತೆ, ಸುಹವ್ಯಾಸ, ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು.
• ಸ್ವಯಂ ಶಿಸ್ತಿನ ವರ್ಚಸ್ಸನ್ನು ಬೆಳೆಸುವುದು.
• ಯುವಕ ಯುವತಿಯರು ನಿಜ ಜೀವನದ ಸಮಸ್ಯೆಗಳನ್ನೆದುರಿಸಲು ಅಗತ್ಯವಿರುವ ದೃಷ್ಟಿಕೋನವನ್ನು ಬೆಳೆಸುವುದು.
ಉತ್ತಮ ಫಲಿತಾಂಶ
60 ಸಂವತ್ಸರಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿರುವ ಸಂಸ್ಥೆಯು ಕಳೆದ ಹಲವು ದಶಕಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವುದು ಗಮನಾರ್ಹ. 2024-25ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 362 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 391 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಅನುಶ್ರೀ 597 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಮತ್ತು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಕಲಾ ವಿಭಾಗದಲ್ಲಿ 593 ಅಂಕಗಳನ್ನು ಗಳಿಸುವ ಮೂಲಕ ಯುಕ್ತಶ್ರೀ ಪಿ. ರಾಜ್ಯಕ್ಕೆ 5 ನೇ ಸ್ಥಾನವನ್ನು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅನಘ ಡಿ. ಶೆಟ್ಟಿ 597 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 4 ನೇ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ವ್ಯೆದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2025ರ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಸಾಯಿ ಮಹೇಶ್ ಕೆ.ಎಸ್ 720ಕ್ಕೆ 523 ಅಂಕಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 13568 ನೇ ರಾಂಕ್ ಗಳಿಸಿದ್ದಾರೆ. ಅದೇ ರೀತಿ IIT ಹಾಗೂ NITಗಳಿಗೆ ಪ್ರವೇಶ ಕಲ್ಪಿಸುವ 2025 ನೇ ಸಾಲಿನ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಸಹನ್ ಕೆ.ಎಲ್ 99.27 ಪರ್ಸೆಂಟೈಲ್ ಅಂಕ ಗಳಿಸುವುದರ ಮೂಲಕ ಅಖಿಲ ಭಾರತ ಮಟ್ಟದಲ್ಲಿ 2545 ನೇ ರಾಂಕ್ ಪಡೆದು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ-2025 ನೇ ಸಾಲಿನಲ್ಲಿ ಸಹನ್ ಕೆ ಎಲ್ ಇಂಜಿನಿಯರಿಂಗ್ ನಲ್ಲಿ 542ನೇ ರಾಂಕ್ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಆಯ್ಕೆ
ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಪ್ರಸ್ತುತ ಸಾಲಿನಲ್ಲಿ ಸುಮಾರು 1600 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಈ ಶಿಕ್ಷಣ ಸಂಸ್ಥೆ ರಾಜ್ಯದಲ್ಲೇ ಪ್ರತಿಷ್ಠಿತ ಕಾಲೇಜು ಎಂದು ಗುರುತಿಸುವ ಮಟ್ಟಿಗೆ ಬೆಳೆದು ನಿಂತಿದೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಶಿಕ್ಷಣವನ್ನು ನೀಡಲು ಬೇಕಾದ ಕೊಠಡಿಗಳು, ಸುಸಜ್ಜಿತವಾದ ಎಂಟು ಪ್ರಯೋಗಾಲಯಗಳು, ವಿದ್ಯಾಭ್ಯಾಸಕ್ಕೆ ಸೂಕ್ತ ಪರಿಸರವನ್ನು ನಿರ್ಮಿಸುವ ವಸತಿ ನಿಲಯಗಳು, ವಿಸ್ತಾರವಾದ ಮೈದಾನ ಮತ್ತು ವ್ಯಾಯಾಮ ಶಾಲೆಗಳನ್ನು ಹೊಂದಿದೆ.
ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇಕಡ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿ ಹಾಗೂ ಶೇಕಡ 98 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ.
Integrated Batch:
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಜೆಇಇ/ ನೀಟ್ ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಬ್ಯಾಚ್ ಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಉತ್ತಮ ಫಲಿತಾಂಶದ ಉದ್ದೇಶದೊಂದಿಗೆ ವೈಯಕ್ತಿಕ ಗಮನವನ್ನು ವಿದ್ಯಾರ್ಥಿಗಳಿಗೆ ಕೊಡಬೇಕಾದ ಅವಶ್ಯಕತೆ ಇರುವುದರಿಂದ 50 ರಿಂದ 60 ವಿದ್ಯಾರ್ಥಿಗಳಿಗೆ ಮಾತ್ರ ಈ ಬ್ಯಾಚ್ ಗೆ ಪ್ರವೇಶಾವಕಾಶ ನೀಡಲಾಗುತ್ತದೆ. ಪ್ರತಿ ವಿಷಯಗಳಲ್ಲಿ ನುರಿತ / ಅನುಭವೀ ಉಪನ್ಯಾಸಕರ ತಂಡ ಲಭ್ಯವಿದ್ದು, ವಿದ್ಯಾರ್ಥಿಗಳಿಗೆ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಲಾಗುತ್ತಿದೆ. ರಜಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗಳನ್ನು ನಡೆಸಲಾಗುತ್ತದೆ. ಸಾಪ್ತಾಹಿಕ ಅಣುಕು ಪರೀಕ್ಷೆಗಳನ್ನು ಅಂತಿಮ ನೀಟ್, ಜೆಇಇ ಪರೀಕ್ಷಾ ಮಾದರಿಯಲ್ಲಿ ನಡೆಸಲಾಗುತ್ತದೆ. ತರಬೇತಿಗೆ ಸಂಬಂಧಿಸಿ ಪ್ರತಿ ವಿಷಯಗಳ ವಿವರದ ಮಾಹಿತಿಯುಳ್ಳ ಮಾಹಿತಿ ಪುಸ್ತಕಗಳನ್ನು ಪ್ರತಿ ವಿದ್ಯಾರ್ಥಿಗೂ ಒದಗಿಸಲಾಗುತ್ತದೆ. ದ್ವಿತೀಯ ಪಿಯುಸಿಯ ತರಗತಿಗಳು ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಿ, ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಅವಧಿಯಲ್ಲಿ JEE/NEET/KCET ಪರೀಕ್ಷೆ ತಯಾರಿಗೆ ಹೆಚ್ಚು ಒತ್ತು ನೀಡಿ ಸಮಯವನ್ನು ಮೀಸಲಿಡಲಾಗುತ್ತಿದೆ. ಮಕ್ಕಳ ಮಾನಸಿಕ ಒತ್ತಡ ನಿವಾರಣೆಗಾಗಿ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗಿದ್ದು ಅದಕ್ಕಾಗಿ ಪ್ರತ್ಯೇಕ ಅವಧಿಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿದ್ದು, ಸಂಸ್ಥೆಯು ಇದಕ್ಕೆ ಪೂರಕವಾದ ವಾತಾವರಣವನ್ನು ಒದಗಿಸುತ್ತಿದೆ.
ಇಲ್ಲಿ ಮೂರು ರೀತಿಯ ಬ್ಯಾಚ್ ಗಳು ಇದ್ದು ಮೂರು ಹಂತಗಳಲ್ಲಿ ವಿದ್ಯಾರ್ಥಿಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆ ಮತ್ತು ವೃತ್ತಿಪರ ಶಿಕ್ಷಣಕ್ಕೆ ಬೇಕಾಗುವ ಪ್ರವೇಶ ಪರೀಕ್ಷೆಗೂ ತರಬೇತಿಗೊಳಿಸಲಾಗುತ್ತದೆ. ಜೆಇಇ ಮತ್ತು ನೀಟ್, ಕೆಸಿಇಟಿ ಪರೀಕ್ಷೆಗೆ ತರಬೇತಿಯನ್ನು ನೀಡಲಾಗುತ್ತಿದೆ. ನುರಿತ ಹಾಗೂ ಅನುಭವೀ ಉಪನ್ಯಾಸಕರು ಈ ತರಗತಿಗಳಿಗೆ ಬೋಧನೆಯನ್ನು ಮಾಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವುದಕ್ಕೆ ನಿರಂತರ ಅಣುಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
Advanced Integrated Batch: ಇಲ್ಲಿ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಾದ ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ತಯಾರು ಮಾಡಲಾಗುತ್ತದೆ. ಕಲಿಕಾ ಅವಧಿಯು ಹೆಚ್ಚಾಗಿದ್ದು ವಿದ್ಯಾರ್ಥಿಗಳು ವೇಗ ಮತ್ತು ನಿಖರತೆಯಿಂದ ಬಹು ಆಯ್ಕೆಯ ಪ್ರಶ್ನೆಗಳನ್ನು ಉತ್ತರಿಸಲು ಸಹಕಾರಿಯಾಗುವಂತೆ ಅವರನ್ನು ತರಬೇತುಗೊಳಿಸಲಾಗುತ್ತಿದೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ನಿರಂತರ ತರಗತಿಗಳನ್ನು ನಡೆಸಿ, ಘಟಕ ಪರೀಕ್ಷೆ, ಮಾಸಿಕ ಪರೀಕ್ಷೆ ಹೀಗೆ ಹಂತ ಹಂತವಾಗಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ನೀಡಿ ಆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಿ ಪೋಷಕರಿಗೆ ನೀಡಲಾಗುವುದು. ವಿದ್ಯಾರ್ಥಿಗಳು ಎಲ್ಲಾ ರೀತಿಯ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಸಜ್ಜಾಗಬೇಕು ಎನ್ನುವ ನಿಟ್ಟಿನಲ್ಲಿ ಆನ್ಲೈನ್ ಅಣುಕು ಪರೀಕ್ಷೆಗಳನ್ನು ಕೂಡ ನಡೆಸಲಾಗುವುದು.
Intermediate Integrated Batch:
ಈ ಬ್ಯಾಚ್ ನಲ್ಲಿ ಒಂದು ಮಧ್ಯಮ ಹಂತದ ಬೋಧನಾ ಅವಧಿ ಇರುತ್ತದೆ. ಇಲ್ಲಿಯೂ ಎಲ್ಲಾ ಹಂತದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ. ವಾರ ವಾರ ಅಣುಕು ಪರೀಕ್ಷೆಗಳನ್ನು ನಡೆಸಿ ಫಲಿತಾಂಶವನ್ನು ಪೋಷಕರಿಗೆ ಕಳುಹಿಸಲಾಗುವುದು.
Basic Integrated Batch:
ಮೊದಲಿನ ಎರಡು ಬ್ಯಾಚ್ ಗಳಿಗಿಂತ ಬೋಧನಾ ಅವಧಿ ಕಡಿಮೆ ಇದ್ದು ಸಣ್ಣ ಮಟ್ಟದಲ್ಲಿ ಪ್ರವೇಶ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವವರಿಗೆ ಇದು ಅನುಕೂಲವಾಗುತ್ತದೆ. ಈ ಬ್ಯಾಚಿನಲ್ಲಿ ಕೂಡ ಎರಡು ವಾರಕ್ಕೊಮ್ಮೆ ಅಣುಕು ಪರೀಕ್ಷೆಗಳನ್ನು ನಡೆಸಲಾಗುವುದು.
CA Foundation ತರಬೇತಿ:
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ CA Foundation ತರಬೇತಿಯ ವ್ಯವಸ್ಥೆ ಕಾಲೇಜಿನಲ್ಲಿ ಲಭ್ಯವಿದ್ದು, ನುರಿತ ಅಧ್ಯಾಪಕರಿಂದ ತರಬೇತಿ ನೀಡಲಾಗುತ್ತಿದೆ.
CSEET ತರಬೇತಿ:
ಪ್ರಸಕ್ತ ವರ್ಷದಲ್ಲಿ ಕಾಲೇಜಿನ ವತಿಯಿಂದ CSEET ತರಬೇತಿಯನ್ನು ಆರಂಭಿಸಲಾಗುತ್ತಿದೆ. company secretary course ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಈ ತರಬೇತಿಯು ಸಹಕಾರಿಯಾಗಲಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 5 ವಿದ್ಯಾರ್ಥಿಗಳು CSEET ಪರೀಕ್ಷೆಯಲ್ಲಿ ಈಗಾಗಲೇ ತೇರ್ಗಡೆ ಹೊಂದಿರುತ್ತಾರೆ.
ವಿಶೇಷ ಸರ್ಟಿಫಿಕೇಟ್ ಕೋರ್ಸ್:
ಕಳೆದ ಎರಡು ವರ್ಷಗಳಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗವು ವಿಶೇಷವಾಗಿ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಪರಿಚಯಿಸಿದೆ. ಪದವಿಪೂರ್ವ ಶಿಕ್ಷಣ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಈ ವಿನೂತನ ಪ್ರಯೋಗವನ್ನು ಸಂಸ್ಥೆಯು ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯಗಳನ್ನು ಪರಿಚಯಿಸಲು ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ ಶೇರುವಹಿವಾಟು, ಟ್ಯಾಲಿ, ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮುಂತಾದ ವಿಷಯಗಳ ಬಗ್ಗೆ ವ್ಯಾವಹಾರಿಕ ಹಾಗೂ ಪ್ರಾಯೋಗಿಕ ಜ್ಞಾನ ನೀಡಲು ಈ ಕೋರ್ಸ್ ಗಳು ಸಹಕಾರಿಯಾಗಲಿದೆ.
ಒಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವಲ್ಲಿ ಸಂಸ್ಥೆಯು ಹೆಚ್ಚಿನ ಕಾಳಜಿ ವಹಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಪಡಿಸುವಲ್ಲಿ ಸಾಕಷ್ಟು ಮುತುವರ್ಜಿಯನ್ನು ವಹಿಸುತ್ತಿದೆ.
ಕ್ರೀಡೆ:
ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ದೈಹಿಕ ಬೆಳವಣಿಗೆಗೂ ಸಾಕಷ್ಟು ಬೆಂಬಲವನ್ನು ನೀಡುತ್ತಿದೆ. ವಿಶಾಲವಾದ ಕ್ರೀಡಾಂಗಣವನ್ನು ಹೊಂದಿರುವ ಕಾಲೇಜು ತನ್ನ ಆರಂಭದ ದಿನಗಳಿಂದಲೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ತರಬೇತಿಯನ್ನು ನೀಡಲು ಸಂಸ್ಥೆಯಲ್ಲಿ ಅನುಭವಿ ದೈಹಿಕ ಶಿಕ್ಷಕರ ತಂಡವಿದ್ದು, ವಿದ್ಯಾರ್ಥಿಗಳು ಇಲಾಖೆ ಹಾಗೂ ವಿದ್ಯಾಭಾರತಿ ನಡೆಸುತ್ತಿರುವ ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಸಂಸ್ಥೆಯ ಕೀರ್ತಿಗೆ ಮತ್ತಷ್ಟು ಗರಿ ಮೂಡಿಸುತ್ತಿದೆ. ಇದರೊಂದಿಗೆ ಸೈನಿಕ ಶಿಕ್ಷಣವನ್ನು ಪಡೆಯುವ ಆಸಕ್ತಿ ಉಳ್ಳವರಿಗೆ NCC ವಿಭಾಗ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲೇಜು ವಾಹನ ಸೌಲಭ್ಯ
ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ನಾಲ್ಕು ಕಾಲೇಜು ವಾಹನಗಳ ಸೌಲಭ್ಯವಿದೆ. ಕಾಲೇಜು ವಾಹನ ಮಾರ್ಗಗಳು ಈ ಕೆಳಗಿನಂತಿವೆ.
1. ಪೆರ್ಲ – ಅಡ್ಯನಡ್ಕ – ವಿಟ್ಲ – ಕಬಕ – ಕಾಲೇಜು ಆವರಣ
2. ಕಾಟುಕುಕ್ಕೆ – ಪಾಣಾಜೆ – ಆರ್ಲಪದವು – ರೆಂಜ – ಸಂಟ್ಯಾರ್ - ಪುತ್ತೂರು ಬೈಪಾಸ್ ರಸ್ತೆ – ಕಾಲೇಜು ಆವರಣ
3. ಕಾವು – ಕೌಡಿಚ್ಚಾರ್ - ಕುಂಬ್ರ – ಪರ್ಪುಂಜ – ಸಂಪ್ಯ – ಮುಕ್ರಂಪಾಡಿ – ದರ್ಬೆ – ಪುತ್ತೂರು ಬಸ್ ನಿಲ್ದಾಣ – ಮುಖ್ಯ ಅಂಚೆ ಕಛೇರಿ - ಬೊಳ್ವಾರ್ - ನೆಹರು ನಗರ - ಕಾಲೇಜು ಆವರಣ
4. ಕಲ್ಲೇರಿ – ಉಪ್ಪಿನಂಗಡಿ – ಕೋಡಿಂಬಾಡಿ – ಬನ್ನೂರು – RTO ಕಛೇರಿ - ಕಾಲೇಜು ಆವರಣ
ವಸತಿನಿಲಯ:
ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ದಾಖಲಾತಿ ಬಯಸುವುದರಿಂದ ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಮತ್ತು ಸುಸಜ್ಜಿತವಾದ ವಸತಿ ನಿಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶಿಸ್ತು ಬದ್ಧವಾದ ವಾತಾವರಣ, ಅಚ್ಚುಕಟ್ಟಾದ ಊಟ, ಸಮಯ ಪಾಲನೆ, ಪ್ರಾರ್ಥನೆ, ಓದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳು ಹೀಗೆ ಮತ್ತಿತರ ಚಟುವಟಿಕೆಗಳಿಗೆ ಪೂರಕವಾದ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಬೌದ್ಧಿಕ ವಿಕಾಸಕ್ಕೆ ಪ್ರೋತ್ಸಾಹ:
ಸ್ಪರ್ಧಾತ್ಮಕ ಯುಗದಲ್ಲಿ ಕಳೆದು ಹೋಗಬಹುದಾದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಎತ್ತರಿಸುವ ದೃಷ್ಟಿಯಿಂದ ಕಾಲೇಜಿನಲ್ಲಿ ಬೇರೆ ಬೇರೆ ಸಂಘ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದು, ಅಂತರ್ ಕಾಲೇಜು ಮಟ್ಟದ ಸ್ಪರ್ಧೆಗಳಿಗೆ ಅವಕಾಶ ಒದಗಿಸಲಾಗುತ್ತದೆ. ಕಾಲೇಜಿನಲ್ಲಿ ನಡೆಸಲ್ಪಡುವ ವಿವಿಧ ರೀತಿಯ ಸ್ಪರ್ಧೆಗಳು, ವಿದ್ಯಾರ್ಥಿಗಳ ಸಾಹಿತ್ಯ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿಗುರು ವಾರ್ಷಿಕ ಸಂಚಿಕೆ, ಫೋಟೋಗ್ರಾಫಿ, ರೇಡಿಯೋ ಪಾಂಚಜನ್ಯ, ವಿಕಸನ ಟಿವಿ ಮೊದಲಾದ ಚಟುವಟಿಕೆಗಳು ಕಾರ್ಯಾಚರಿಸುತ್ತಿದ್ದು, ವಿದ್ಯಾರ್ಥಿಗಳು ತಮ್ಮನ್ನು ತಾವು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
ಸಂಸ್ಕಾರಯುತ ಶಿಕ್ಷಣ:
ಸಮಗ್ರ ಶಿಕ್ಷಣ ಪರಂಪರೆಯನ್ನು ಹೊಂದಿರುವ ಸಂಸ್ಥೆ, ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ಕಾಲೇಜಿನ ಪ್ರತೀ ವಿದ್ಯಾರ್ಥಿಯು ಬೆಳಗ್ಗಿನ ಪ್ರಾರ್ಥನೆ ಸರಸ್ವತಿ ವಂದನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಓಂಕಾರ ಧ್ಯಾನವನ್ನು ಒಳಗೊಂಡ ಸರಸ್ವತಿ ವಂದನೆಯು ಪ್ರತಿ ವಿದ್ಯಾರ್ಥಿಯ ಮಾನಸಿಕ ಹಾಗೂ ಬೌದ್ಧಿಕ ವಿಚಾರಗಳನ್ನು ಆಂತರಿಕವಾಗಿ ಪೋಷಿಸುತ್ತದೆ ಎಂಬ ಭರವಸೆಯನ್ನು ವಿದ್ಯಾಸಂಸ್ಥೆಯು ಇರಿಸಿದೆ. ಇಷ್ಟು ಮಾತ್ರವಲ್ಲದೆ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಬಲ್ಲ, ಪರಿಸರ, ಸಾಮಾಜಿಕ ಕಳಕಳಿಯನ್ನು ಉದ್ದೀಪನಗೊಳಿಸಬಲ್ಲ ಕಾರ್ಯಕ್ರಮಗಳು ಕಾಲೇಜಿನಲ್ಲಿ ನಿರಂತರವಾಗಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಇವೆಲ್ಲದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಗಮನಹರಿಸಲಾಗುತ್ತಿದೆ.
ಲಭ್ಯವಿರುವ ವಿಷಯಗಳು:
ವಿಜ್ಞಾನ ವಿಭಾಗದಲ್ಲಿ PCMB/ PCMC/PCMS/PCME (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ, ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ), ವಾಣಿಜ್ಯ ವಿಭಾಗದಲ್ಲಿ SEBA/SCBA/ECBA (ಸಂಖ್ಯಾಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಶಾಸ್ತ್ರ, ಗಣಕವಿಜ್ಞಾನ, ಲೆಕ್ಕಶಾಸ್ತ್ರ) ಹಾಗೂ ಕಲಾ ವಿಭಾಗದಲ್ಲಿ HEPS (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ) ಇವುಗಳ ಜೊತೆಗೆ ಇಂಗ್ಲಿಷ್, ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳ ಅಧ್ಯಯನಕ್ಕೆ ಅವಕಾಶವಿದೆ.
ಒಟ್ಟಿನಲ್ಲಿ ಕಲಿಕೆ, ಕ್ರೀಡೆ, ಸಾಹಿತ್ಯಿಕ - ಸಾಂಸ್ಕೃತಿಕ ರಂಗಗಳಲ್ಲಿ ನಿರಂತರ ಮುಂಚೂಣಿಯಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜು ಕಾಲದ ಅಗತ್ಯತೆಗಳಿಗೆ ತಕ್ಕಂತಹ ಶಿಕ್ಷಣ ನೀಡುವ ಸಮಗ್ರ ಚಿಂತನೆಯೊಂದಿಗೆ ಬದುಕಿನ ಜವಾಬ್ದಾರಿಗಳನ್ನು ಸಮರ್ಥವಾಗಿ ಮತ್ತು ಅಷ್ಟೇ ಸಮರ್ಪಕವಾಗಿ ನಿರ್ವಹಿಸಲು ಬೇಕಾದ ಕೌಶಲ್ಯವನ್ನು ರೂಪಿಸುವ, ವ್ಯಕ್ತಿತ್ವವನ್ನು ಅರಳಿಸುವ, ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳುವ ಸುಭದ್ರ ಪಂಚಾಂಗ ಇಲ್ಲಿನ ಶಿಕ್ಷಣ ಸ್ವರೂಪದಲ್ಲಿದೆ.
ಹೆಚ್ಚಿನ ಮಾಹಿತಿಗಳಿಗಾಗಿ ಕಾಲೇಜು ಜಾಲತಾಣ www.vivekanandapuc.com ಅಥವಾ ಮೊಬೈಲ್ ಸಂಖ್ಯೆ: 8105072386, 8971924424, 8073700468 ನ್ನು ಸಂಪರ್ಕಿಸಬಹುದು.
ಅಧ್ಯಕ್ಷರ ಮಾತು
ವಿವೇಕಾನಂದ ಪದವಿಪೂರ್ವ ಕಾಲೇಜು ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ. ಸುಮಾರು ಆರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವುದಲ್ಲದೇ ಸಂಸ್ಕಾರಯುತ ಸಮಾಜವನ್ನು ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ. ನಮ್ಮ ಹಲವಾರು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ನಮ್ಮ ಕಾಲೇಜಿಗೆ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಾರೆ. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣ ವಾತಾವರಣ ನಮ್ಮಲ್ಲಿದೆ.
- ಶ್ರೀ ರವೀಂದ್ರ ಪಿ. ಅಧ್ಯಕ್ಷರು, ಆಡಳಿತ ಮಂಡಳಿ
ಪ್ರಾಂಶುಪಾಲರ ನುಡಿ
ಕಳೆದ ಆರು ದಶಕಗಳಿಂದ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅವಶ್ಯಕವಾದ ವಾತಾವರಣ ನೀಡುತ್ತಿದೆ. ಕೇವಲ ಪುಸ್ತಕ ಕಲಿಕೆ ಮಾತ್ರವಲ್ಲದೇ ಓರ್ವ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ನಮ್ಮ ಕಾಲೇಜು ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರತಿ ವರ್ಷ ವಾರ್ಷಿಕ ಪರೀಕ್ಷೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿರುವ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
- ಶ್ರೀ ದೇವಿಚರಣ್ ರೈ ಎಂ., ಪ್ರಾಂಶುಪಾಲರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)

