ಉಡಾನ್ ಯೋಜನೆ: ಕಲಬುರಗಿ ವಿಮಾನ ನಿಲ್ದಾಣದ ತ್ರಿಶಂಕು ಸ್ಥಿತಿ

Upayuktha
0

ಸರಕಾರ ನೀಡಿದ ಮಾರ್ಚ್ 23 ರ ಗಡುವು ಈಡೇರಿಸಲು ವಿಮಾನ ಸಂಸ್ಥೆಗಳು ವಿಫಲ




ಕಲಬುರಗಿ: ಕೇಂದ್ರ ಸರ್ಕಾರ ಇತ್ತೀಚೆಗೆ ಪರಿಸ್ಕೃತ ಉಡಾನ್ ಯೋಜನೆ (ಉಡಾನ್ 2.0)ಯಲ್ಲಿ  ಕಲಬುರಗಿ ವಿಮಾನ ನಿಲ್ದಾಣವನ್ನು ಸೇರಿಸುವ ಪ್ರಸ್ತಾಪ ಇನ್ನೂ ಕೈಗೂಡಲಿಲ್ಲ ಹಾಗೂ ಮಾರ್ಚ್ 23ರ ಮುಂಚಿತವಾಗಿ ವಿಮಾನ ಸಂಸ್ಥೆಗಳು ವಿಮಾನ ಸಂಚಾರದ ವೇಳಾಪಟ್ಟಿ ಹಾಗೂ ಮಾರ್ಗ ಸೂಚಿಯನ್ನು ಸರಕಾರಕ್ಕೆ ಒದಗಿಸಬೇಕೆನ್ನುವ ಕರ್ನಾಟಕ ಸರ್ಕಾರದ ಗಡುವು ಮುಗಿದರೂ ಯಾವುದೇ ಪ್ರಗತಿ ಕಾಣದಿರುವುದು ಅತ್ಯಂತ ದುರದೃಷ್ಟಕರ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ. 


ಕಲಬುರಗಿ ವಿಮಾನ ನಿಲ್ದಾಣದಿಂದ ಸಂಚರಿಸುತ್ತಿದ್ದ ವಿಮಾನ ಸೇವೆಯನ್ನು ಕಳೆದ ವರ್ಷ ಅಕ್ಟೋಬರ್ 19 ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು ಸ್ಥಳೀಯ ಮಂತ್ರಿಗಳು, ಶಾಸಕರು, ಗಣ್ಯರು  ಈಗ ಬೀದರ್ ವಿಮಾನ ಸೇವೆಯನ್ನು ಬಳಸುತ್ತಿದ್ದು ಸಾಮಾನ್ಯರು ಮಾತ್ರ ವಿಮಾನ ಸಂಚಾರವಿಲ್ಲದೆ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರದ ನೇತೃತ್ವದಲ್ಲಿ ಇತ್ತೀಚಿಗೆ ವಿಮಾನ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿ ಮಾ. 23ರ ಮೊದಲಾಗಿ ವಿಮಾನ ಸಂಚಾರದ ವೇಳೆ ಮತ್ತು ಮಾರ್ಗ ಸೂಚಿ ನೀಡುವಂತೆ ಕಟ್ಟುನಿಟ್ಟಾಗಿ ತಿಳಿಸಿದ್ದರೂ ಹತ್ತು ದಿನ ಕಳೆದರೂ ಯಾವುದೇ ವಿಮಾನ ಸಂಸ್ಥೆಗಳು ಸರಕಾರದ ನಿರ್ದೇಶನವನ್ನು ಪಾಲಿಸದೆ ಕಡೆಗಣಿಸಿದೆ. ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಆಸಕ್ತಿ ಹೊಂದಿದ ವಿಮಾನ ಸಂಸ್ಥೆಗಳ ಶೀಘ್ರ ಸಭೆ ನಡೆಸಿ ವಿಮಾನ ಸೇವೆ ಆರಂಭಕ್ಕೆ ಕಟ್ಟುನಿಟ್ಟಿನ ಆದೇಶವನ್ನು ನೀಡಬೇಕೆಂದು ಡಾ.ಪೆರ್ಲ ಒತ್ತಾಯಿಸಿದ್ದಾರೆ. 


ಕೇಂದ್ರ ಸರಕಾರವು ಮಾರ್ಚ್ 25ರಂದು 28,840 ಕೋಟಿ ರೂಪಾಯಿ ಮೊತ್ತದೊಂದಿಗೆ ಎರಡನೇ ಹಂತದ ಉಡಾನ್ ಯೋಜನೆ ಪ್ರಕಟ ಮಾಡಿದ್ದು ಇದರಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಕೂಡ ಪರಿಗಣಿಸುವುದಾಗಿ ರಾಜ್ಯಸಭೆಯಲ್ಲಿ ವಿಮಾನಯಾನ ಖಾತೆಯ ರಾಜ್ಯ ಸಚಿವರಾದ ಮುರಳಿಧರ ಮೋಹೋಲ್ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿರುವುದು ಆಶಾದಾಯಕ ಬೆಳವಣಿಗೆಯಾದರೂ ಈವರೆಗೆ ಅದರ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ಹೊರಡಿಸದಿರುವುದು ಈ ಭಾಗದ ಜನರಿಗೆ ತೀವ್ರ ಬೇಸರವನ್ನುಂಟು ಮಾಡಿದೆ. 


ಕಲ್ಯಾಣ ಕರ್ನಾಟಕ ಭಾಗದ ಸಚಿವರೊಂದಿಗೆ ರಾಜ್ಯದ ಬೃಹತ್ ಕೈಗಾರಿಕಾ ಸಚಿವರು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಖಾತೆಯ ಸಚಿವರಾದ ಎಂ ಬಿ ಪಾಟೀಲ್ ವಿಮಾನ ಸಂಸ್ಥೆಗಳ ಮುಖ್ಯಸ್ಥರನ್ನು  ಕರೆಸಿ ಇತ್ತೀಚೆಗೆ ಮಾತುಕತೆ ನಡೆಸಿದ್ದರು. ವಿಮಾನ ಸಂಸ್ಥೆಗಳಿಗೆ ಮಾರ್ಗ ಹಾಗೂ ಸಮಯ ಸೂಚಿ ನಿಗದಿಪಡಿಸುವಂತೆ ಸೂಚನೆ ನೀಡಿದ್ದ ರೂ ವಿಮಾನ ಸಂಸ್ಥೆಗಳು ಸಕಾರಾತ್ಮಕ ಸ್ಪಂದನೆ ನೀಡದಿರು ವುದು ಈ ಭಾಗದ ನಿರ್ಲಕ್ಷಕ್ಕೆ ಜ್ವಲಂತ ಸಾಕ್ಷಿಯಾಗಿದೆ. ವಿಮಾನ ಸೇವೆ ಸ್ಥಗಿತಗೊಂಡ ಕಾರಣದಿಂದ ಕಲ್ಯಾಣಕ ಕರ್ನಾಟಕ ಪ್ರದೇಶದಲ್ಲಿ ಪ್ರವಾಸೋದ್ಯಮ, ವ್ಯಾಪಾರ, ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಪ್ರಗತಿಗೆ ತೀವ್ರ ತೊಂದರೆಯಾಗಿದ್ದು ಉಡಾನ್ ಯೋಜನೆ ಪುನರಾರಂಭಗೊಂಡರೆ ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಪೂರಕವಾಗಲಿದೆ. ತಕ್ಷಣ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ಪಂದನೆ ನೀಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಕಲಬುರಗಿಯಿಂದ ಬೆಂಗಳೂರು ಮಂಗಳೂರು, ಮುಂಬೈ, ದೆಹಲಿ ಹಾಗೂ ತಿರುಪತಿ ಮುಂತಾದ ಕಡೆಗಳಿಗೆ ಸಂಚಾರ ಪ್ರಾರಂಭಿಸುವಂತೆ ಪ್ರಯಾಣಿಕರಿಂದ ತೀವ್ರ ಒತ್ತಾಯ ಕೇಳಿ ಬರುತ್ತಿದೆ. ವಿಮಾನ ಸಂಸ್ಥೆಗಳು ಪ್ರಯಾಣಿಕರ ಬೇಡಿಕೆ ಈಡೇರಿಸುವಂತೆ ಕೂಡ ಒತ್ತಾಯಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top