ಉಪ್ಪು ಮತ್ತು ಸಕ್ಕರೆ ಎನ್ನುವುದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ. ಯಾವುದೇ ಆಹಾರಕ್ಕೆ ಒಂದಷ್ಟು ಉಪ್ಪು ಇಲ್ಲದಿದ್ದರೆ ರುಚಿಯಿರದು. ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ’ ಎಂಬ ಮಾತು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಸಕ್ಕರೆ ಕೂಡಾ ನಾವು ಕುಡಿಯುವ ಕಾಫಿ, ಟೀ, ಅಥವಾ ಇನ್ನಾವುದೇ ಆಹಾರಕ್ಕೆ ಒಂದು ಚಮಚ ಸಕ್ಕರೆ ಸೇರಿಸಿದಲ್ಲಿ, ಅದರ ರುಚಿ ಇಮ್ಮಡಿಯಾಗುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತು ನಾವು ಯಾವಾತ್ತೂ ನೆನಪಿನಲ್ಲಿಡಬೇಕು. ಅಗತ್ಯಕ್ಕಿಂತ ಜಾಸ್ತಿ ಉಪ್ಪು ಮತ್ತು ಸಕ್ಕರೆ ಬಹಳ ಅಪಾಯಕಾರಿ. ಈ ಕಾರಣದಿಂದಲೇ ವೈದ್ಯರು ಇವೆರಡನ್ನು ಬಿಳಿ ವಿಷ ಎಂದು ಕರೆಯುತ್ತಾರೆ. ಈ ಕಾರಣದಿಂದಲೇ ಇವೆರಡನ್ನೂ ಇತಿಮಿತಿಯೊಳಗೆ ಸೇವಿಸಬೇಕಾದ ಅನಿವಾರ್ಯತೆ ಇದೆ. ಒಬ್ಬ ಸಾಮಾನ್ಯ ಅಮೇರಿಕಾದ ಪ್ರಜೆ ಸುಮಾರು 17 ಚಮಚದಷ್ಟು ಸಕ್ಕರೆ ದಿನವೊಂದರಲ್ಲಿ ಸೇವಿಸುತ್ತಾರೆ.
ಒಬ್ಬ ಸಾಮಾನ್ಯ ಭಾರತೀಯ ಸುಮಾರು 10 ಚಮಚ ಸಕ್ಕರೆ ದಿನಂಪ್ರತಿ ಸೇವಿಸುತ್ತಾನೆ. ನಮ್ಮ ದೇಹ ಈ ರೀತಿ ಹೆಚ್ಚಿನ ಸಕ್ಕರೆಯನ್ನು ಬಳಸಲು ಪೂರಕವಾದ ವಾತಾವರಣ ಹೊಂದಿಲ್ಲ. ಹೆಚ್ಚಿನ ಎಲ್ಲಾ ಸಕ್ಕರೆಗಳು ಪ್ರಕ್ಟೋಸ್ ಎಂಬ ರೂಪದಲ್ಲಿ ದೇಹಕ್ಕೆ ಸೇರುತ್ತದೆ. ಇದೊಂದು ನಮ್ಮ ಯಕೃತ್ತಿಗೆ ಮಾರಕವಾದ ವಸ್ತುವಾಗಿದ್ದು ನೇರವಾಗಿ ನಮ್ಮ ಲಿವರನ್ನೂ ಹಾನಿಗೊಳಿಸುತ್ತದೆ. ಹೆಚ್ಚಿನ ಎಲ್ಲಾ ಪ್ರಕ್ಟೊಸ್ ಲಿವರನಲ್ಲಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಈ ರೀತಿ ಲಿವರ್ನ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಅದರ ಕಾರ್ಯಕ್ಷಮತೆ ಕುಗ್ಗಿಸಿ ಹತ್ತು ಹಲವಾರು ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ದಿನವೊಂದಕ್ಕೆ 25 ಗ್ರಾಂಗಿಂತ ಜಾಸ್ತಿ ಪ್ರಕ್ಟೋಸ್ ಸೇವಿಸಲೇಬಾರದು. ಹೆಚ್ಚಾದ ಪ್ರಕ್ಟೋಸ್ ಕ್ಯಾನ್ಸರ್ಕಾರಕ ಜೀವಕೋಶಗಳನ್ನು ಪ್ರಚೋದಿಸಿ ಮತ್ತಷ್ಟು ತೀವ್ರವಾಗಿ ಜೀವಕೋಶಗಳು ಬೆಳೆಯುವಂತೆ ಪ್ರಚೋದನೆ ನೀಡುತ್ತದೆ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ.
ಏನು ತೊಂದರೆಗಳು?:
ಖ್ಯಾತ ರಸದೂತ ತಜ್ಞ ಮತ್ತು ಆಹಾರ ತಜ್ಞರಾದ ಕ್ಯಾಲಿಪೋರ್ನಿಯಾ ಯೂನಿವರ್ಸಿಟಿ ಇದರ ಪ್ರೋಫೇಸರ್ ಡಾ| ರಾಬರ್ಟ್ ಲಸ್ಟಿಂಗ್ ಇವರ ಪ್ರಕಾರ ಒಬ್ಬ ಸಾಮಾನ್ಯ ಮನುಷ್ಯರಿಗೆ ದಿನವೊಂದರಲ್ಲಿ ಗರಿಷ್ಠ 6 ಚಮಚ ಸಕ್ಕರೆ ನೀಡಬಹುದು. ಇದಕ್ಕಿಂತ ಜಾಸ್ತಿ ಸಕ್ಕರೆ ತೆಗೆದುಕೊಂಡಲ್ಲಿ ಹೆಚ್ಚಾದ ಸಕ್ಕರೆ ನೇರವಾಗಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ.
1. ಹೆಚ್ಚಾದ ಸಕ್ಕರೆ ನೇರವಾಗಿ ಲಿವರ್ ನ ಮೇಲೆ ಒತ್ತಡ ಹಾಕುತ್ತದೆ. ನಾವು ಸೇವಿಸಿದ ಎಲ್ಲಾ ಸಕ್ಕರೆ ಆಹಾರ ಎಲ್ಲವೂ ಲಿವರ್ ಮುಖಾಂತರವೇ ಜೀರ್ಣವಾಗಬೇಕು. ಅಲ್ಕೋಹಾಲ್ನಿಂದ ಉಂಟಾಗುವ ತೊಂದರೆಯಂತೆ, ಹೆಚ್ಚಾದ ಸಕ್ಕರೆಯೂ ಕೂಡ ಲಿವರನ್ನು ಹಾನಿಗೊಳಿಸುತ್ತದೆ.
2. ಸಕ್ಕರೆ ದೇಹದ ತೂಕ ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ರಸದೂತದ ಕಾರ್ಯಕ್ಷಮತೆಯನ್ನು ಹಾಳುಗೆಡವುತ್ತದೆ. ಹೆಚ್ಚಾದ ಸಕ್ಕರೆ ಅಂಶ ದೇಹದ ಹಸಿವನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಹಸಿವಿನ ರಸದೂತವಾದ ಗೆಲ್ಲಿನ್ ಎಂಬ ರಸದೂತವನ್ನು ಉತ್ತೇಜಿಸುತ್ತದೆ. ಮತ್ತಷ್ಟು ಹಸಿವು ಹೆಚ್ಚಾಗಿ ಹೆಚ್ಚು ಹೆಚ್ಚು ತಿನ್ನುವಂತೆ ಪ್ರೇರೇಪಿಸುತ್ತದೆ.
3. ಹೆಚ್ಚಾದ ಸಕ್ಕರೆ ಅಂಶ ದೇಹದ ಜೀರ್ಣಾಂಗ ವ್ಯವಸ್ಥೆ ಮತ್ತು ಮೂಲಭೂತ ಜೈವಿಕ ಕ್ರಿಯೆಗಳನ್ನು ನಿಷ್ಕ್ರಿಯಗೊಳಿಸುತ್ತದೆ. ತೂಕ ಜಾಸ್ತಿಯಾಗುವುದರ ಜೊತೆಗೆ ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆ, ಕೊಲೆಸ್ಟೊರಾಲ್ ಪ್ರಮಾಣ ಹೆಚ್ಚುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದು ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
4. ದೇಹದಲ್ಲಿ ಪ್ರಕ್ಟೋಸ್ ಪ್ರಮಾಣ ಜಾಸ್ತಿಯಾದಂತೆ, ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ. ಯೂರಿಕ್ ಆಮ್ಲ ಪ್ರಮಾಣ ಜಾಸ್ತಿಯಾದಂತೆ ಹೃದಯ ತೊಂದರೆ ಕಿಡ್ನಿ ವೈಫಲ್ಯಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ.
5. ಅತಿಯಾದ ಸಕ್ಕರೆ ಸೇವನೆ ಆಲ್ಝೈಮರ್ಸ್ ರೋಗಕ್ಕೆ ಕಾರಣ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ, ಹೆಚ್ಚಾದ ಸಕ್ಕರೆ ಅಂಶ ಮೆದುಳಲ್ಲಿ ಸೇರಿಕೊಂಡು ಮರೆಗುಳಿತನಕ್ಕೂ ಕಾರಣವಾಗುತ್ತದೆ.
ಹೇಗೆ ನಿಯಂತ್ರಿಸುವುದು?:
ಸಕ್ಕರೆಯನ್ನು ಅದರ ನೈಸರ್ಗಿಕವಾದ ರೂಪದಲ್ಲಿ ಹಿತಮಿತವಾಗಿ ಧಾರಾಳವಾಗಿ ಬಳಸಬಹುದು. ಆದರೆ ಕೃತಕವಾಗಿ ತಯಾರಿಸಲಾದ ಪಾನೀಯ, ಪೇಯ ಮತ್ತು ಆಹಾರಗಳಲ್ಲಿನ ಕೃತಕವಾಗಿ ಪ್ರಕ್ಟೋಸ್ನಿಂದ ತಯಾರಿಸಿದ ಸಿಹಿಕಾರಕ ವಸ್ತು, ಅತಿ ಅಪಾಯಕಾರಿ. ಸುಮಾರು 60 ವಿಧವಿಧದ ಹೆಸರಿನಲ್ಲಿ ಈ ಸಿಹಿಕಾರಕ ವಸ್ತು ಕೃತಕ ಸಿದ್ಧ ಪಡಿಸಿದ ಆಹಾರದ 74 ಶೇಕಡಾ ಭಾಗವನ್ನು ಆವರಿಸಿಕೊಂಡಿರುತ್ತದೆ. ಈ ಕಾರಣದಿಂದಲೇ ನಮ್ಮ ಆಹಾರದ 30 ಶೇಕಡಾವನ್ನು ನೈಸರ್ಗಿಕವಾದ ಮೂಲಾಹಾರ ಮುಖಾಂತರ ಸೇವಿಸಿದಲ್ಲಿ ಸಕ್ಕರೆಯ ಅಂಶವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ನಮ್ಮ ದೈನಂದಿನ ಜೀವನದಲ್ಲಿ 10 ಶೇಕಡಾಕ್ಕಿಂತ ಜಾಸ್ತಿ ಸಿದ್ಧ ಕೃತಕ ಆಹಾರ ಸೇವಿಸಲೇಬಾರದು. ದಿನವೊಂದರಲ್ಲಿ 25ಗ್ರಾಂಗಿಂತ ಜಾಸ್ತಿ ಪ್ರಕ್ಟೋಸ್ ಸೇವನೆ ಮಾಡಬಾರದು. ಸಾಮಾನ್ಯವಾಗಿ ನೈಸರ್ಗಿಕ ಹಣ್ಣು ಹಂಪಲುಗಳಲ್ಲಿ ಈ ಪ್ರಕ್ಟೋಸ್ ಸಕ್ಕರೆ ಜೊತೆಗೆ ಇತರ ಜೀವಸತ್ವಗಳು, ಪೋಷಕಾಂಶಗಳು ಮತ್ತು ಆಂಟಿ ಆಕ್ಸೆಡೆಂಟ್ಗಳು ಲಭ್ಯವಿರುತ್ತದೆ. ಈ ಕಾರಣದಿಂದಲೇ ನೈಸರ್ಗಿಕ ಆಹಾರವನ್ನು ಜಾಸ್ತಿ ಸೇವಿಸಬೇಕು.
1. ಕೃತಕ ಸಕ್ಕರೆಗಳನ್ನು ಸೇವಿಸಬಾರದು.
2. ದೇಹದ ಆರೊಗ್ಯಕ್ಕೆ ಪೂರಕವಾದ ಕೊಬ್ಬದ ಓಮೆಗಾ-3, ಸಾಚುರೇಟೆಡ್ ಮತ್ತು ಮೋನೋಸಾಚುರೇಟೆಡ್ ಕೊಬ್ಬನ್ನು ಹೆಚ್ಚು ಸೇವಿಸಬೇಕು. ಸಸ್ಯಮೂಲ ಅಥವಾ ಪ್ರಾಣಜನ್ಯ ಮೂಲದ ಈ ಆರೋಗ್ಯಕರ ಕೊಬ್ಬನ್ನು ಹೆಚ್ಚು ಸೇವಿಸಿ.
3. ಕೃತಕ ಪೇಯಗಳು ಇಂಗಾಲಯುಕ್ತ ಸೋಡಾಗಳನ್ನು ತಿರಸ್ಕರಿಸಿ ಶುದ್ಧ ನೀರನ್ನು ಹೆಚ್ಚು ಬಳಸಿ ಇದರಿಂದ ನಿಮ್ಮ ದೇಹದ ಕೊಬ್ಬನ್ನು ಸಕ್ಕರೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ.
4. ದೈನಂದಿನ ಆಹಾರ ಸೇವನೆಯಲ್ಲಿ ಸಕ್ಕರೆಯ ಅಂಶದ ಮೇಲೆ ಒಂದು ನಿಗಾ ಯಾವತ್ತೂ ಇಡಬೇಕು. ಅತಿಯಾದ ಹೆಚ್ಚಾದ ಸಕ್ಕರೆ ಕೊಬ್ಬಾಗಿ ಕಾಡಿ ಎಲ್ಲಿ ವ್ಯವಸ್ಥೆಯನ್ನು ಹಾಳುಗೆಡುವುತ್ತದೆ.
ಕೊನೆಮಾತು:
ಸಕ್ಕರೆ ಎನ್ನುವುದು ಆಧುನಿಕ ಆಹಾರದಲ್ಲಿನ ಅತ್ಯಂತ ಅಪಾಯಕಾರಿ ವಸ್ತುವಾಗಿದೆ. ಇದರಿಂದ ಬರೀ ಕ್ಯಾಲರಿಗಳ ಮಟ್ಟ ಜಾಸ್ತಿಯಾಗುತ್ತದೆ ಹೊರತು ಇನ್ಯಾವುದೇ ಪೋಷಕಾಂಶ ಜೀವಸತ್ವ ಸಿಗುವುದಿಲ್ಲ ಮತ್ತು ಜೀವಕೋಶಗಳಲ್ಲಿ ಮೂಲಭೂತ ಜೈವಿಕ ಕ್ರಿಯೆಗಳನ್ನು ಹಾಳು ಮಾಡಿ ಬಿಡುತ್ತದೆ. ನೈಸರ್ಗಿಕವಾದ ಹಣ್ಣು ಹಂಪಲುಗಳಲ್ಲಿ ಸಕ್ಕರೆ ಅಂಶದ ಜೊತೆಗೆ ನಾರು, ನೀರು ಮತ್ತು ಇತರ ಜೀವಸತ್ವಗಳು ಲವಣಗಳು ಇರುತ್ತದೆ. ಆದರೆ ಕೃತಕ ಸಕ್ಕರೆ ದ್ರಾವಣದಲ್ಲಿ ಮತ್ತು ಆಹಾರಗಳಲ್ಲಿ ಇವೆಲ್ಲವೂ ಇರುವುದಿಲ್ಲ. ಬರೀ ಕ್ಯಾಲರಿ ಮಾತ್ರ ಸೇರಿಕೊಳ್ಳುತ್ತದೆ. ಪ್ರಕ್ಟೊಸ್ ಕಾರ್ನ್ ಸಿರಾಫ್ ಇದಕ್ಕೆ ತಾಜಾ ಉದಾಹರಣೆ. ಅಮೇರಿಕದ ಹೃದಯ ತಜ್ಞರ ಸಂಘದ ಪ್ರಕಾರ ದಿನವೊಂದಕ್ಕೆ ಪುರುಷರು 150 ಕ್ಯಾಲರಿ ಅಂದರೆ 37.5 ಗ್ರಾಂ ಎಂದು 9 ಟೀ ಸ್ಪೂನ್ಗಳಷ್ಟು ಸಕ್ಕರೆ ಸೇವಿಸಬಹುದು. ಮಹಿಳೆಯರಿಗೆ 100 ಕ್ಯಾಲರಿ ಅಂದರೆ 25ಗ್ರಾಮ ಅಥವಾ 6 ಟೀ ಸ್ಪೂನ್ ಚಮಚದಷ್ಟು ಸಕ್ಕರೆ ಸಾಕಾಗುತ್ತದೆ.
ವಿಪರ್ಯಾಸವೆಂದರೆ ಒಂದು 100ml ನ ಕೋಕ್ ಕ್ಯಾನ್ನಲ್ಲಿ 140 ಕ್ಯಾಲರಿ ಮತ್ತು ಸಾಮಾನ್ಯ ಚಾಕಲೇಟ್ ಬಾರ್ನಲ್ಲಿ 120 ಕ್ಯಾಲರಿ ಇರುತ್ತದೆ. ಅದೇನೇ ಇರಲಿ ನಾವು ನಮ್ಮ ದೈನಂದಿನ ಆಹಾರದ ಸಕ್ಕರೆಯ ಅಂಶವನ್ನು ನಿಯಂತ್ರಿಸಲೇಬೇಕು. ಕೃತಕ ಸಕ್ಕರೆಯನ್ನು ಸೇರಿಸಿದ ಪೇಯಗಳನ್ನು ಮತ್ತು ಆಹಾರವನ್ನು ದೂರವಿಡಬೇಕು. ಇಲ್ಲವಾದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸದ ಸಕ್ಕರೆ ಕೊಬ್ಬಾಗಿ ಪರಿವರ್ತನೆಗೊಂಡು ರಕ್ತನಾಳಗಳಲ್ಲಿ ಸೇರಿಕೊಂಡು ಹೃದಯದ ತೊಂದರೆ, ಮೆದುಳು ತೊಂದರೆ, ಮಧುಮೇಹ, ರಕ್ತದೊತ್ತಡ ಮುಂತಾದ ರೋಗಗಳಿಗೆ ಸದ್ದಿಲ್ಲದೇ ಮುನ್ನುಡಿ ಬರೆಯುತ್ತಿರುತ್ತದೆ. ದಿನ ಬೆಳಗಾಗುವುದರೊಳಗೆ ನಿಮಗೆ ಈ ರೋಗಗಳು ಬರದಿದ್ದರೂ, ನಿಮಗೆ ತಿಳಿಯುವಾಗ ಸಾಕಷ್ಟು ವಿಳಂಬವಾಗಿ, ಜೀವಮಾನವಿಡೀ ನೀವು ಕೊರಗಬೇಕಾದ ಪ್ರಮೇಯ ಬರಬಹುದು. ಕ್ಷಣಿಕ ಸುಖಕ್ಕಾಗಿ ಬಾಯಿ ಚಪಲಕ್ಕಾಗಿ, ನಾಲಗೆ ದಾಸರಾಗಿ ಅತಿಯಾದ ಉಪ್ಪು, ಖಾರ, ಸಿಹಿ ಸಕ್ಕರೆ ತಿಂದಲ್ಲಿ ನಿಮ್ಮ ದೇಹ ರೋಗ ರುಜಿನಗಳ ಹಂಧರವಾಗಿ ನೀವು ಗಳಿಸಿದ ಹಣವೆಲ್ಲ ವೈದ್ಯಕೀಯ ವೆಚ್ಚಕ್ಕಾಗಿ ಖರ್ಚು ಮಾಡಬೇಕಾಗಿ ಬರಬಹುದು. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಎಲ್ಲವನ್ನೂ ಹಿತಮಿತವಾಗಿ ಸೇವಿಸಿದ್ದಲ್ಲಿ ರೋಗ ರುಜಿನಗಳಿಲ್ಲದೇ ನೂರು ಕಾಲ ಸುಖವಾಗಿ ಬದುಕಬಹುದು. ಅದರಲ್ಲಿಯೇ ನಮ್ಮೆಲ್ಲರ ಹಿತ ಅಡಗಿದೆ.
- ಡಾ| ಮುರಲಿ ಮೋಹನ್ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon
drmuraleechoontharu@gmail.com
9845135787
www.surakshadental.com
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


