ಕಲಬುರಗಿ: ಬೆಂಗಳೂರು- ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ಮಾ. 12 ರಂದು ಎರಡು ವರ್ಷಗಳನ್ನು ಪೂರ್ಣಗೊಳಿಸಿದ್ದು ಇದಕ್ಕಾಗಿ ಪ್ರಯಾಣಿಕರಿಗೆ ಹಾಗೂ ರೈಲ್ವೆ ಇಲಾಖೆಯನ್ನು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅಭಿನಂದಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಯಾಣಿಕರಿಗೆ ಎರಡು ವರ್ಷಗಳ ಮೀಸಲಾದ ಸೇವೆಯನ್ನು ಯಶಸ್ವಿಯಾಗಿ ಪೂರೈಸಿ 2026 ಫೆಬ್ರವರಿ ತಿಂಗಳ ವರೆಗೆ ಶೇ. 103.52 ರಷ್ಟು ಪ್ರಯಾಣಿಕರ ದಟ್ಟಣೆಯೊಂದಿಗೆ 5 ಲಕ್ಷದ 72 ಸಾವಿರದ 566ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವಾ ಸೌಲಭ್ಯ ಒದಗಿಸಿದೆ.ಇದು ಆಧುನಿಕ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಕರ್ಯದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವುದರ ಜೊತೆಗೆ ಸಮಯದ ಉಳಿತಾಯವನ್ನು ಕಲ್ಪಿಸಿದೆ. ಈ ಪ್ರತಿಷ್ಠಿತ ಸೇವೆಯನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 12, 2024 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಚಾಲನೆ ನೀಡಿದ್ದರು.
ರಾಜಧಾನಿ ಹಾಗೂ ಐಟಿ-ಬಿಟಿ ಕೇಂದ್ರ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ನಡುವೆ ವೇಗದ ಮತ್ತು ವಿಶ್ವ ದರ್ಜೆಯ ರೈಲು ಸಂಪರ್ಕವನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಅಂದಿನ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಜೊತೆ ಚರ್ಚಿಸಿ ರೈಲ್ವೆ ಇಲಾಖೆಯು ಈ ಮಹತ್ವದ ಕೊಡುಗೆಯನ್ನು ನೀಡಿತ್ತು. ವಂದೇ ಭಾರತ್ ಸೇವೆಯನ್ನು, ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಕ್ಕಳ ಜೊತೆ ಮಹಿಳೆಯರು ಹಾಗೂ ವೃತ್ತಿನಿರತರು ಕಳೆದ ಎರಡು ವರ್ಷಗಳಲ್ಲಿ ಸೇವೆಯನ್ನು ಬಳಸಿ ರೈಲ್ವೆ ಇಲಾಖೆಗೂ ಲಾಭದಾಯಕವನ್ನಾ ಗಿಸಿದೆ. ವೈದ್ಯಕೀಯ ಸೇವೆ ಪಡೆಯಲು ಬೆಂಗಳೂರಿಗೆ ಪ್ರಯಾಣಿಸುವವರಿಗೂ ಸುಗಮ ಸೇವೆ ಒದಗಿಸುತ್ತಿದೆ. ಪ್ರಯಾಣಿಕರ ಬೇಡಿಕೆ ಮನ್ನಿಸಿ ಯಾದಗಿರಿ ಮತ್ತು ಪ್ರಶಾಂತಿ ನಿಲಯಂ ನಿಲುಗಡೆಯನ್ನು ಕಲ್ಪಿಸಲಾಗಿದೆ.
ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಮುಂತಾದ ಪ್ರಮುಖ ಪಟ್ಟಣಗಳಿಗೆ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸಿದೆ, ಜೊತೆಗೆ ಮಂತ್ರಾಲಯ ಮತ್ತು ಪುಟ್ಟಪರ್ತಿ (ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೂಲಕ) ಮುಂತಾದ ಶ್ರದ್ಧಾ ಕೇಂದ್ರಗಳಿಗೆ ಸಂಪರ್ಕ ಒದಗಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ಮಾತ್ರವಲ್ಲದೆ ವಂದೇ ಭಾರತ್ ಎಕ್ಸ್ಪ್ರೆಸ್ ಕೇವಲ 8 ಗಂಟೆಗಳಲ್ಲಿ 561 ಕಿಮೀ ದೂರವನ್ನು ಕ್ರಮಿಸುತ್ತದೆ,ಈಗ ಅಸ್ತಿತ್ವದಲ್ಲಿರುವ ಸೂಪರ್ಫಾಸ್ಟ್ ಸೇವೆಗಳು 10 ರಿಂದ 12 ಗಂಟೆಗಳಿಗೆ ಹೋಲಿಸಿದರೆ, ಇದರಿಂದಾಗಿ ಸುಮಾರು 2 ರಿಂದ 4 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಪ್ರಸ್ತುತ ರೈಲು ವಾರದಲ್ಲಿ ಆರು ದಿನಗಳು ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಅನಂತಪುರ, ಸಾಯಿ ಪ್ರಶಾಂತಿ ನಿಲಯಂ ಮತ್ತು ಯಲಹಂಕದಲ್ಲಿ ನಿಲುಗಡೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು 8 ಬೋಗಿಗಳನ್ನು ಹೊಂದಿದೆ. ಈ ರೈಲು 400 ಚೇರ್ ಕಾರ್ (CC) ಸೀಟುಗಳು ಮತ್ತು 52 ಎಕ್ಸಿಕ್ಯುಟಿವ್ ಚೇರ್ ಕಾರ್ (EC) ಸೀಟುಗಳನ್ನು ಒಳಗೊಂಡ ಒಟ್ಟು 452 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.
ರೈಲಿನ ಅಪಾರ ಜನಪ್ರಿಯತೆಯು ಅದರ ಗಮನಾರ್ಹ ಕಾರ್ಯಕ್ಷಮತೆಯನ್ನು ಪ್ರತಿಫಲಿಸುತ್ತದೆ. ರೈಲಿನಲ್ಲಿ ಉತ್ತಮ ಊಟೋಪಚಾರ ಹಾಗೂ ಗುಣಮಟ್ಟದ ಸೇವೆ ಯೊಂದಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ಎರಡು ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿದ್ದು, ರಸ್ತೆ ರೈಲು ಮತ್ತು ವಾಯು ಯಾನಗಳ ಮೂಲಕ ಪ್ರಾದೇಶಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಸಂಪರ್ಕಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಬೇಕು ಎನ್ನುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸು ಸಾಕಾರಗೊಳ್ಳುವ ಅಂಗವಾಗಿ ವಂದೇ ಭಾರತ ರೈಲು ಸೇವೆ ಕೂಡ ಪ್ರಯಾಣಿಕರಿಗೆ ವರದಾನವಾಗಿದೆ. ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವರಾದ ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುವುದಲ್ಲದೆ ಇದರ ಸೇವೆಯನ್ನು ಪ್ರಯಾಣಿಕರು ಇನ್ನಷ್ಟು ಹೆಚ್ಚಾಗಿ ಬೆಳಸಿ ಯಶಸ್ವಿಗೊಳಿಸಬೇಕು ಎಂದು ಡಾ. ಜಾಧವ್ ಮನವಿ ಮಾಡಿದ್ದಾರೆ.

