ಕರಾವಳಿ ಅಭಿವೃದ್ಧಿಗೆ ಭರವಸೆಗಳಿದ್ದರೂ ಯೋಜನೆಗಳಿಲ್ಲ | ಮೀನುಗಾರಿಕಾ ವಲಯಕ್ಕೂ ಸಮರ್ಪಕ ಅನುದಾನ ಇಲ್ಲವೆಂದ ಶಾಸಕ
ಮಂಗಳೂರು, ಮಾ.7: ಕರ್ನಾಟಕ ಸರ್ಕಾರದ 2026–27ನೇ ಸಾಲಿನ ಬಜೆಟ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬದಲು ಸಾಲದ ಹೊರೆಯನ್ನು ಹೆಚ್ಚಿಸುವಂತಾಗಿದೆ. ಜೊತೆಗೆ ಕರಾವಳಿ ಭಾಗದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಆರೋಪಿಸಿದರು.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹4.48 ಲಕ್ಷ ಕೋಟಿ ಗಾತ್ರದ ಬಜೆಟ್ ಎಂದು ಸರ್ಕಾರ ಬಿಂಬಿಸುತ್ತಿದ್ದರೂ, ಅದರಲ್ಲಿ ₹97,449 ಕೋಟಿ ವಿತ್ತೀಯ ಕೊರತೆ ಮತ್ತು ₹29,957 ಕೋಟಿ ರಾಜಸ್ವ ಕೊರತೆ ತೋರಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ರಾಜ್ಯದ ಒಟ್ಟು ಸಾಲದ ಹೊರೆ ₹8.24 ಲಕ್ಷ ಕೋಟಿಗೆ ಏರಿದೆ ಎಂದು ಅವರು ಆರೋಪಿಸಿದರು. ತಮ್ಮ ಏಳು ವರ್ಷದ ಆಡಳಿತಾವಧಿಯಲ್ಲಿ ಸುಮಾರು ₹6 ಲಕ್ಷ ಕೋಟಿ ಸಾಲವನ್ನು ರಾಜ್ಯದ ಜನರ ಮೇಲೆ ಹಾಕಲಾಗಿದೆ ಎಂದರು.
ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಪಕ್ಷವು ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕರಾವಳಿಗೆ ಪ್ರತ್ಯೇಕ ಬಜೆಟ್, ಕರಾವಳಿ ಅಭಿವೃದ್ಧಿಗೆ ₹2,500 ಕೋಟಿ ಅನುದಾನ ಮತ್ತು ಪ್ರತಿ ಮೀನುಗಾರನಿಗೂ ₹10 ಲಕ್ಷ ವಿಮಾ ಯೋಜನೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಈ ಬಜೆಟ್ನಲ್ಲಿ ಕರಾವಳಿಗೆ ಸಂಬಂಧಿಸಿದಂತೆ ಪ್ರಮುಖ ಯೋಜನೆಗಳ ಘೋಷಣೆ ಕಾಣಿಸದಿರುವುದು ನಿರಾಶಾದಾಯಕವಾಗಿದೆ ಎಂದು ಹೇಳಿದರು.
ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ನಗರವಾದ ಮಂಗಳೂರು ಮುಂದಿನ ದಿನಗಳಲ್ಲಿ ಐಟಿ ಹಾಗೂ ಗಾರ್ಮೆಂಟ್ ಉದ್ಯಮದ ಪ್ರಮುಖ ಕೇಂದ್ರವಾಗುವ ಎಲ್ಲಾ ಸಾಧ್ಯತೆಗಳಿದ್ದರೂ, ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ ಕುರಿತು ಯಾವುದೇ ಸ್ಪಷ್ಟ ಘೋಷಣೆ ಇಲ್ಲ ಎಂದು ಕಾಮತ್ ಹೇಳಿದರು.
ಕರಾವಳಿಯ ಪ್ರಮುಖ ಆರ್ಥಿಕ ವಲಯವಾದ ಮೀನುಗಾರಿಕೆಗೆ ಸಮರ್ಪಕ ಅನುದಾನ ನೀಡಲಾಗಿಲ್ಲ. ಮೀನುಗಾರಿಕಾ ಬಂದರುಗಳ ಆಧುನೀಕರಣಕ್ಕೆ ಯಾವುದೇ ಹೊಸ ಯೋಜನೆಗಳನ್ನೂ ಘೋಷಿಸದಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದರು.
ಬಜೆಟ್ನಲ್ಲಿ ಜಿಲ್ಲೆಗೆ ಎರಡು ಪೊಲೀಸ್ ಠಾಣೆಗಳ ಘೋಷಣೆ ಮಾಡಲಾಗಿದೆ. ಆದರೆ ಇಂತಹ ಕಟ್ಟಡಗಳನ್ನು ಎಂಆರ್ ಪಿಎಲ್ ಮುಂತಾದ ಕಂಪನಿಗಳ ಸಿಎಸ್ಆರ್ ಅನುದಾನದ ಮೂಲಕವೂ ನಿರ್ಮಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಭೆಗಳು ನಡೆದಿದ್ದರೂ, ಜಿಲ್ಲೆಯ ಪ್ರಮುಖ ಯೋಜನೆಗಳಿಗೆ ಬಜೆಟ್ನಲ್ಲಿ ಸ್ಥಾನ ದೊರೆಯದಿರುವುದು ನಿರಾಶಾದಾಯಕವಾಗಿದೆ. ಇದೇ ರೀತಿ ಮುಂದುವರಿದರೆ ಜನರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಈಡೇರದ ಭರವಸೆಗಳ ಬಗ್ಗೆ ಟೀಕೆ
ಶಾಸಕ ಕಾಮತ್ ಅವರು ಕಾಂಗ್ರೆಸ್ ಪಕ್ಷವು ನೀಡಿದ್ದ ಕೆಲ ಭರವಸೆಗಳನ್ನು ಉಲ್ಲೇಖಿಸಿ ಟೀಕಿಸಿದರು.
- ಕರಾವಳಿಗೆ ಪ್ರತ್ಯೇಕ ಬಜೆಟ್ ಘೋಷಣೆ
- ಕರಾವಳಿ ಅಭಿವೃದ್ಧಿಗೆ ₹2,500 ಕೋಟಿ ಅನುದಾನ
- ಪ್ರತಿ ಮೀನುಗಾರನಿಗೂ ₹10 ಲಕ್ಷ ವಿಮಾ ಯೋಜನೆ
- ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ
- ನಾರಾಯಣ ಗುರು ಹಾಗೂ ಬಂಟ್ಸ್ ಅಭಿವೃದ್ಧಿ ನಿಗಮಗಳಿಗೆ ಅನುದಾನ
ಈ ಭರವಸೆಗಳಲ್ಲಿ ಒಂದನ್ನೂ ಈ ಬಾರಿಯ ಬಜೆಟ್ನಲ್ಲಿ ಸ್ಪಷ್ಟವಾಗಿ ಕಾಣಲಾಗಿಲ್ಲ ಎಂದು ಅವರು ಹೇಳಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


