ಸಿದ್ದು ಬಜೆಟ್ ಜನವಿರೋಧಿ: ಡಾ. ಉಮೇಶ್ ಜಾಧವ್ ಟೀಕೆ

Upayuktha
0


ಕಲಬುರಗಿ: ರಾಜ್ಯ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್ ಏಳು ಕೋಟಿ ಕನ್ನಡಿಗರ ಮೇಲೆ ಸಾಲದ ಹೊರೆಯನ್ನು ಹಾಕುವ ಜನವಿರೋಧಿ ಬಜೆಟ್ ಆಗಿದೆ ಎಂದು ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಟೀಕಿಸಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿಗೆ ಬಜೆಟ್ ಮಂಡಿಸಿರುವುದಾಗಿ ಹೆಮ್ಮೆಪಡುತ್ತಿದ್ದರೂ, ಬಜೆಟ್‌ನಲ್ಲಿ ಜನಪರ ಯೋಜನೆಗಳ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಜನರ ಮೇಲೆ ತೆರಿಗೆ ಭಾರ ಹೆಚ್ಚಿಸುವಂತ ಸಾಲಾಧಾರಿತ ಬಜೆಟ್ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.


ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಸರ್ಕಾರ ಭಾರೀ ಹಣಕಾಸು ಒತ್ತಡ ಎದುರಿಸುತ್ತಿರುವುದು ಬಜೆಟ್‌ನಿಂದ ತಿಳಿದುಬರುತ್ತದೆ. ಶಕ್ತಿ ಯೋಜನೆಗೆ ₹5,300 ಕೋಟಿ, ಗೃಹಲಕ್ಷ್ಮಿ ಯೋಜನೆಗೆ ₹8,600 ಕೋಟಿ, ಅನ್ನಭಾಗ್ಯ ಯೋಜನೆಗೆ ₹6,200 ಕೋಟಿ ಹಾಗೂ ಗೃಹಜ್ಯೋತಿ ಯೋಜನೆಗೆ ₹10,578 ಕೋಟಿ ವೆಚ್ಚವಾಗುತ್ತಿದೆ ಎಂದು ಅವರು ಹೇಳಿದರು.


ಈ ವೆಚ್ಚಗಳನ್ನು ನಿರ್ವಹಿಸಲು ಸರ್ಕಾರಕ್ಕೆ ಸುಮಾರು ₹8.24 ಲಕ್ಷ ಕೋಟಿ ಸಾಲ ಎತ್ತುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದಲ್ಲಿ ಅತಿ ಹೆಚ್ಚು ಸಾಲ ಎತ್ತಿದ ಎರಡನೇ ಮುಖ್ಯಮಂತ್ರಿಯಾಗಿ ಅಪಖ್ಯಾತಿಗೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದರು.


2026–27ನೇ ಸಾಲಿಗೆ ₹4.48 ಲಕ್ಷ ಕೋಟಿ ಬಜೆಟ್ ಮಂಡನೆಯಾಗಿದ್ದರೂ, ಅದು ಬಡಜನರಿಗೆ ಪ್ರಯೋಜನಕಾರಿಯಾಗಿಲ್ಲ. ಸಾಲದ ಹೊರೆ ನಿಭಾಯಿಸಲು ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಸಾರಿಗೆ, ಮುದ್ರಾಂಕ ಶುಲ್ಕ ಹಾಗೂ ಮದ್ಯದ ಮೇಲೆ ತೆರಿಗೆ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಭಾರ ಹಾಕುವ ಸಾಧ್ಯತೆ ಇದೆ ಎಂದು ದೂರಿದರು.


ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಉದ್ಯೋಗ, ನೀರಾವರಿ ಮತ್ತು ಕೃಷಿ ಕ್ಷೇತ್ರಗಳಿಗೆ ಯಾವುದೇ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ. ರಾಜ್ಯ ಸರ್ಕಾರ ನೇಮಿಸಿದ್ದ ಗೋವಿಂದರಾವ್ ಸಮಿತಿ ವರದಿ ಈ ಭಾಗದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸೂಚಿಸಿದ್ದರೂ, ಈ ಬಜೆಟ್‌ನಲ್ಲಿ ಅದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಅವರು ಹೇಳಿದರು.


ಕೇಂದ್ರ ಸರ್ಕಾರದ ಪಿಎಂ ಮಿತ್ರ ಯೋಜನೆಯಡಿ ಕಲಬುರಗಿಯಲ್ಲಿ ಆರಂಭವಾಗಿರುವ ಜವಳಿ ಪಾರ್ಕ್‌ಗೆ ರಾಜ್ಯ ಸರ್ಕಾರ ₹390 ಕೋಟಿ ಅನುದಾನ ನೀಡಬೇಕಾಗಿದ್ದರೂ, ಈ ಬಜೆಟ್‌ನಲ್ಲಿ ಕನಿಷ್ಠ ಅನುದಾನವೂ ಘೋಷಿಸದಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.


ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಕಳೆದ ಅಕ್ಟೋಬರ್‌ನಿಂದ ಸ್ಥಗಿತಗೊಂಡಿದ್ದರೂ, ಅದನ್ನು ಪುನರಾರಂಭಿಸುವ ಕುರಿತು ಸರ್ಕಾರ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಒಟ್ಟಿನಲ್ಲಿ ಈ ಬಜೆಟ್ ಸಾಮಾನ್ಯ ಜನರಿಗೆ ನಿರಾಶೆ ಉಂಟುಮಾಡುವ ಜನವಿರೋಧಿ ಬಜೆಟ್ ಆಗಿದೆ ಎಂದು ಡಾ. ಉಮೇಶ್ ಜಾಧವ್ ಹೇಳಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top