ಹುನಗುಂದ ಇಳಕಲ್ಲ ಅವಳಿ ತಾಲೂಕಿನ 16 ಕೇಂದ್ರಗಳಲ್ಲಿ ಪರೀಕ್ಷೆ: 5400 ವಿದ್ಯಾರ್ಥಿಗಳು ನೋಂದಣಿ
ಹುನಗುಂದ: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮಾರ್ಚ್ ೧೮ರಿಂದ ಏಪ್ರಿಲ್ 2ರವರೆಗೆ ಹುನಗುಂದ ಮತ್ತು ಇಳಕಲ್ಲ ಅವಳಿ ತಾಲೂಕಿನ 7 ಸರ್ಕಾರಿ, 8 ಅನುದಾನಿತ ಹಾಗೂ 1 ಅನುದಾನ ರಹಿತ ಶಾಲೆ ಸೇರಿದಂತೆ ಒಟ್ಟು 16 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ. ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಇಲಾಖೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ ಕಿಲ್ಲೇದಾರ ಹೇಳಿದರು.
ಸೋಮವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ತಾಲೂಕಿನ 16 ಪರೀಕ್ಷೆ ಕೇಂದ್ರಗಳಲ್ಲಿ 85 ಪ್ರೌಢ ಶಾಲೆಗಳ ಒಟ್ಟು 5400 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.೨೩೧ ಕೊಠಡಿ ಸೇರಿದಂತೆ 16 ಹೆಚ್ಚುವರಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.
ಮಾರ್ಚ್ 18ರಂದು ಪ್ರಥಮ ಭಾಷೆ, ಮಾರ್ಚ್ 23ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಮಾರ್ಚ್ ೨೫ ದ್ವಿತೀಯ ಭಾಷೆ, ಮಾರ್ಚ್ 28 ರಂದು ಗಣಿತ ಮತ್ತು ಸಮಾಜಶಾಸ್ತ್ರ, ಮಾರ್ಚ್ 30 ರಂದು ತೃತೀಯ ಭಾಷೆ, ಎನ್.ಎಸ್.ಕ್ಯೂ, ಎಫ್, ಏ.1ರಂದು ಜೆ.ಟಿ.ಎಸ್ ವಿಷಯಗಳು ಮತ್ತು ಏ.2 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.ಪ್ರತಿ ಪರೀಕ್ಷೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಆರಂಭವಾಗುವ ಕನಿಷ್ಠ 30 ನಿಮಿಷಗಳ ಮೊದಲೇ ವಿದ್ಯಾರ್ಥಿಗಳು ಕೇಂದ್ರದಲ್ಲಿ ಇರಬೇಕು.
ಪರೀಕ್ಷೆ ಸಿಬ್ಬಂದಿಗಳು ಬೆಳಗ್ಗೆ 8 ಗಂಟೆಗೆ ಪರೀಕ್ಷೆ ಕೇಂದ್ರದಲ್ಲಿ ಇರಬೇಕು. ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಬಂದ ಮೇಲೆ ತಾವು ಕುಳಿತುಕೊಳ್ಳುವ ಕೊಠಡಿ ಮತ್ತು ಆಸನದ ವ್ಯವಸ್ಥೆ ತಿಳಿದುಕೊಳ್ಳಲು ಪರೀಕ್ಷೆ ಕೇಂದ್ರದಲ್ಲಿ ದೊಡ್ಡ ಅಕ್ಷರದಲ್ಲಿ ಮಾಹಿತಿ ಬೋರ್ಡನ್ನು ಇಡಲಾಗಿದೆ. ಪ್ರತಿ ಪರೀಕ್ಷೆ ಕೇಂದ್ರಕ್ಕೆ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ. ಪ್ರತಿಯೊಂದು ಶಾಲೆಯ ಎಸ್ಎಸ್ಎಲ್.ಸಿ ಮಗು ಪರೀಕ್ಷೆ ಕೇಂದ್ರಕ್ಕೆ ಬರಲು ತಮ್ಮ ಹಾಲ್ ಟಿಕೆಟ್ ಮತ್ತು ಐಡಿ ಕಾರ್ಡ್ ತೋರಿಸುವ ಮೂಲಕ ಕೆಎಸ್ಆರ್ಟಿಸಿ ಬಸ್ಸಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ.ಬೇಸಿಗೆ ಬಿಸಿಲು ಹೆಚ್ಚಿರುವುದರಿಂದ ವಿದ್ಯಾರ್ಥಿಗಳು ತಮ್ಮೊಂದಿಗೆ ನೀರಿನ ಬಾಟಲ್ ತರಬೇಕು. ಪ್ರತಿಯೊಂದು ಪರೀಕ್ಷೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಎಂ. ಕಲ್ಯಾಣಿ, ಶಿಕ್ಷಕ ಲಿಂಗರಾಜ ಗದ್ದನಕೇರಿ ಇದ್ದರು.
ಪರೀಕ್ಷೆ ಕೇಂದ್ರದ ಸುತ್ತಲು 200 ಮೀಟರ್ವರೆಗೆ ನಿಷೇಧಾಜ್ಞೆ: ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ನಕಲು ತಡೆಯಲು ಜೆರಾಕ್ಸ್ ಅಂಗಡಿಗಳ ಮೇಲೆ ನಿಗಾ ಇಡಲಾಗಿದೆ. ಪರೀಕ್ಷಾ ಕೇಂದ್ರಗಳಿಂದ ಸುತ್ತಲು 200 ಮೀಟರ್ ವ್ಯಾಪ್ತಿವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ನಡೆಯುವ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಹೆಸ್ಕಾಂ ಕ್ರಮ ವಹಿಸಬೇಕು.
ಪರೀಕ್ಷೆಗೆ ೪೧೬ ಸಿಬ್ಬಂದಿಗಳ ನಿಯೋಜನೆ: ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟು ಹಾಗೂ ಪಾರದರ್ಶಕವಾಗಿ ನಡೆಸಲು 4 ತಾಲೂಕ ಜಾಗೃತ ದಳ ತಂಡ, ಪ್ರತಿಯೊಂದು ಕೇಂದ್ರಕ್ಕೆ ಒಬ್ಬರಂತೆ 16 ಜನ ಮುಖ್ಯ ಅಧೀಕ್ಷಕರು, 6 ಉಪ ಮುಖ್ಯಅಧೀಕ್ಷಕರು, 16 ಜನ ಕಸ್ಟೋಡಿಯನ್, 7 ಮಾರ್ಗಾಧಿಕಾರಿಗಳು, 16 ಸ್ಥಾನಿಕ ಜಾಗೃತ ದಳ, 16 ಮೊಬೈಲ್ ಸ್ವಾಧೀನಾಧಿಕಾರಿಗಳು, ಇಬ್ಬರು ಸಿಸಿ ಟಿವಿ ವೀಕ್ಷಕರು, 320 ಕೊಠಡಿ ಮೇಲ್ವಿಚಾರಕರು ಸೇರಿದಂತೆ 416 ಜನ ಅಧಿಕಾರಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿಯೊಂದು ಪರೀಕ್ಷೆ ಕೇಂದ್ರಕ್ಕೆ ಸೂಕ್ತ ಬಂದೋಬಸ್ತು ಒದಗಿಸಲು ಪೊಲೀಸ್ ಸಿಬ್ಬಂದಿಗಳನ್ನು ಕೂಡಾ ನೇಮಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


