ಎನ್ಎಂಐಟಿ ವಿಶೇಷ ಕಾರ್ಯಕ್ರಮದಲ್ಲಿ ನೇಪಾಳಿ ಸಮುದಾಯದ ಪ್ರತಿನಿಧಿ
ಬೆಂಗಳೂರು, ಮಾ. 28: ಭಾರತ ಮತ್ತು ನೆರೆಯ ರಾಷ್ಟ್ರ ನೇಪಾಳದ ನಡುವೆ ಸಹಸ್ರಾರು ವರ್ಷಗಳಿಂದ ಇರುವ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಐತಿಹಾಸಿಕ ಸಂಬಂಧಗಳು ಇನ್ನಷ್ಟು ಸದೃಢವಾಗಿವೆ ಎಂದು ಭಾರತದಲ್ಲಿರುವ ನೇಪಾಳಿ ಸಮುದಾಯದ ಪ್ರತಿನಿಧಿ ಮಾಧವ ರಾಜ್ ಕಡಾಯತ್ ತಿಳಿಸಿದ್ದಾರೆ.
ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ನೇಪಾಳೀಸ್ ಇನ್ ಬೆಂಗಳೂರು’ ಸಂಘಟನೆಯ ವತಿಯಿಂದ ಆಯೋಜಿಸಿದ್ದ ‘ಧನ್ಯವಾದ ಸಮರ್ಪಣೆ ಹಾಗೂ ಗುರುವಂದನೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೇಪಾಳದ ನೂತನ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಾಲೇಂದ್ರ ಶಾ ಅವರು ಇದೇ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆಯಾಮ ನೀಡಿದೆ ಎಂದು ಅವರು ಹೇಳಿದರು. “ಈ ವಿದ್ಯಾಸಂಸ್ಥೆ ಬಾಲೇಂದ್ರ ಶಾ ಅವರಿಗೆ ಕೇವಲ ತಾಂತ್ರಿಕ ಶಿಕ್ಷಣವನ್ನಷ್ಟೇ ನೀಡದೆ, ನಾಯಕತ್ವದ ಗುಣಗಳನ್ನೂ ಬೆಳೆಸಿದೆ,” ಎಂದು ಅಭಿಪ್ರಾಯಪಟ್ಟರು.
ಬಾಲೇಂದ್ರ ಶಾ ಅವರು 2016–18ರ ಅವಧಿಯಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ರಚನಾತ್ಮಕ ತಂತ್ರಜ್ಞಾನ’ (ಸ್ಟ್ರಕ್ಚರಲ್ ಇಂಜಿನಿಯರಿಂಗ್) ವಿಷಯದಲ್ಲಿ ಎಂ.ಟೆಕ್ ಪದವಿ ವ್ಯಾಸಂಗ ಮಾಡಿದ್ದರು. ಸಂಶೋಧನಾ ಸೌಲಭ್ಯಗಳು, ವಿದ್ವತ್ ಸಂಪನ್ಮೂಲಗಳು ಹಾಗೂ ವಿಷಯಾಧಾರಿತ ಅಧ್ಯಯನಕ್ಕೆ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಅವರು ಉತ್ತಮ ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಹಿರಿಯ ಸಹೋದರಿ ಸುಜಾತ ಶಾ ಹರೀಶ್ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಮಾತನಾಡಿ, “ನಮ್ಮ ವಿದ್ಯಾರ್ಥಿಯೊಬ್ಬರು ಒಂದು ದೇಶದ ಪ್ರಧಾನಮಂತ್ರಿಯಾಗಿ ಏರಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ‘ನೇಪಾಳೀಸ್ ಇನ್ ಬೆಂಗಳೂರು’ ಸಂಘಟನೆಯ ಪ್ರಮುಖರಾದ ಅರ್ಜುನ್ ಥಾಪಾ, ನಿಶಾ ಝಾ, ಸುಮಿತ ಪ್ರಸಾದ್, ಹರೀಶ್ ಕುಮಾರ್ ಸಜಾಕನ್; ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ; ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ನ ಉಪಾಧ್ಯಕ್ಷ ಪ್ರೊ. ಸಂದೀಪ್ ಶಾಸ್ತ್ರಿ; ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

