ದೇಹವು ಕ್ಯಾನ್ಸರ್ ಬಗ್ಗೆ ಪಿಸುಗುಟ್ಟಿದಾಗ!

Upayuktha
0

ಕ್ಯಾನ್ಸರ್‌ ನ ಆರಂಭಿಕ ಲಕ್ಷಣ, ಎಚ್ಚರಿಕೆಗಳು ಸೂಕ್ಷ್ಮವಾಗಿರುತ್ತವೆ- ತಡ ಮಾಡಿದರೆ ಚಿಕಿತ್ಸೆ ಕಷ್ಟಕರ




- ಡಾ. ಪ್ರಹ್ಲಾದ್ ಎಲಮರ್ತಿ,

ಕನ್ಸಲ್ಟೆಂಟ್, ಆಂಕಾಲಜಿ, ನಾರಾಯಣ ಹೆಲ್ತ್


ಸಾಮಾನ್ಯವಾಗಿ ಕಾಯಿಲೆಗಳು ತನ್ನನ್ನು ನಾಟಕೀಯವಾಗಿ ತೋರಿಸಿಕೊಳ್ಳುವುದಿಲ್ಲ. ಕಾಯಿಲೆ ಇದೆ ಎನ್ನುವುದೇ ಗೊತ್ತಾಗದಂತಿರುತ್ತದೆ. ಯಾವುದೇ ಎಚ್ಚರಿಕೆಯ ಗಂಟೆ ಇರುವುದಿಲ್ಲ. ಇದ್ದಕ್ಕಿದ್ದಂತೆ ಕುಸಿದು ಬೀಳುವ ಸಂದರ್ಭವಿರುವುದಿಲ್ಲ ಅಥವಾ ತಕ್ಷಣದ ಗಮನವನ್ನು ಸೆಳೆಯುವ ಘಟನೆಗಳೂ ಇರುವುದಿಲ್ಲ. ಬದಲಾಗಿ, ಅದು ನಿಶ್ಯಬ್ದವಾಗಿ ಬರುತ್ತದೆ.  ವಾಸಿಯಾಗಲು ನಿರಾಕರಿಸುವ ಕೆಮ್ಮು, ನಿರ್ಲಕ್ಷಿಸಲು ಸುಲಭವೆನಿಸುವ ನೋವಿಲ್ಲದ ಗಂಟು, ದಿನಚರಿಯ ಭಾಗವಾಗಿಬಿಡುವ ವಿಪರೀತ ಸುಸ್ತು ಕಾಡುತ್ತಿರುತ್ತದೆ. ದೈನಂದಿನ ಜೀವನದ ಧಾವಂತದಲ್ಲಿ, ಈ ಲಕ್ಷಣಗಳನ್ನು ಸಾಮಾನ್ಯವಾಗಿ ಒತ್ತಡ, ವಯಸ್ಸು ಅಥವಾ ಹವಾಮಾನದ ಬದಲಾವಣೆ ಎಂದು ಬದಿಗಿಡಲಾಗುತ್ತದೆ. ಆದರೆ ವೈದ್ಯಕೀಯ ಜಗತ್ತಿನಲ್ಲಿ, ಅತ್ಯಂತ ಗಂಭೀರವಾದ ಯಾವುದೋ ಒಂದು ಕಾಯಿಲೆಯ ಉಪಸ್ಥಿತಿಯನ್ನು ಸೂಚಿಸುವುದು ಇದೇ ಸೂಕ್ಷ್ಮವಾದ ಮತ್ತು ಸುಲಭವಾಗಿ ಮರೆತುಹೋಗುವ ಎಚ್ಚರಿಕೆಗಳೇ. ಕ್ಯಾನ್ಸರ್‌ ನಂತಹ ಕಾಯಿಲೆಗಳು ಹೆಚ್ಚಾಗಿ ನೋವಿನಿಂದಲ್ಲ, ಬದಲಿಗೆ ಮೌನವಾಗಿಯೇ ಶುರುವಾಗುತ್ತವೆ.


ರೋಗಿಗಳು ಸಾಮಾನ್ಯವಾಗಿ ರೋಗಲಕ್ಷಣಗಳು ತಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುವವರೆಗೆ ವೈದ್ಯಕೀಯ ಸಹಾಯವನ್ನು ಪಡೆಯುವುದಿಲ್ಲ. ಅದಕ್ಕೂ ಮೊದಲು, ಅವರು ನೋವನ್ನು ಸಹಿಸಿಕೊಳ್ಳುತ್ತಾರೆ, ಅದನ್ನು ನಿರ್ಲಕ್ಷಿಸುತ್ತಾರೆ ಅಥವಾ ಮನೆಮದ್ದುಗಳ ಮೊರೆ ಹೋಗುತ್ತಾರೆ. ಇಲ್ಲಿ ಸಮಸ್ಯೆ ಕಾಳಜಿಯ ಕೊರತೆಯಲ್ಲ, ಬದಲಾಗಿ ಜ್ಞಾನದ ಕೊರತೆ. ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳು ಜನರಿಗೆ ಆರಾಮದಾಯಕ ಎನಿಸುತ್ತವೆ, ಏಕೆಂದರೆ ಅವು ಆಗಾಗ್ಗೆ ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ. ದುರದೃಷ್ಟವಶಾತ್, ದೇಹವು ಯಾವಾಗಲೂ ಎಚ್ಚರಿಕೆಯ ಸಂಕೇತಗಳನ್ನು ಸ್ಪಷ್ಟವಾಗಿ ನೀಡುವುದಿಲ್ಲ.


ಆರಂಭಿಕ ಲಕ್ಷಣಗಳನ್ನು ಜನರು ಏಕೆ ಗಮನಿಸುವುದಿಲ್ಲ?

ಸಣ್ಣಪುಟ್ಟ ಲಕ್ಷಣಗಳನ್ನು ಸುಲಭವಾಗಿ ನಿರ್ಲಕ್ಷಿಸಬಹುದಾಗಿರುತ್ತದೆ. "ಜನರು ಆಸಿಡಿಟಿಗೆ ತಮ್ಮ ಆಹಾರ ಪದ್ಧತಿಯನ್ನು ದೂರುತ್ತಾರೆ, ತೂಕ ಇಳಿಕೆಯಾದರೆ ಸಂತೋಷಪಡುತ್ತಾರೆ, ಉಸಿರಾಟದ ತೊಂದರೆಯನ್ನು ವಯಸ್ಸಿಗೆ ಸಂಬಂಧಿಸಿದ್ದು ಎಂದು ಭಾವಿಸುತ್ತಾರೆ ಮತ್ತು ನೋವು ನಿವಾರಕ ಮಾತ್ರೆಗಳ ಮೂಲಕ ನೋವನ್ನು ನಿಯಂತ್ರಿಸುತ್ತಾರೆ." ನೋವಿಲ್ಲದ ಗಂಟನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ. "ತಾನಾಗಿಯೇ ನಿಂತುಹೋಗುವ ರಕ್ತಸ್ರಾವವನ್ನು ಬೇಗನೆ ಮರೆತುಬಿಡುತ್ತಾರೆ." ಆಯಾಸವನ್ನು ಸಾಮಾನ್ಯವಾಗಿ ಕೆಲಸದ ಒತ್ತಡಕ್ಕೆ ಕಾರಣವೆಂದು ಹೇಳಲಾಗುತ್ತದೆ. ನೋವು ಇಲ್ಲದೇ ಇರುವುದರಿಂದ ಆರಾಮಾಗಿದ್ದೇವೆ ಎಂಬ ಭರವಸೆ ಉಂಟಾಗುತ್ತದೆ ಮತ್ತು ಅನೇಕ ವ್ಯಕ್ತಿಗಳು ಗಂಭೀರವಾದದ್ದು ಏನೂ ಆಗಿಲ್ಲ ಎಂದೇ ನಂಬುತ್ತಾರೆ.


ಕ್ಯಾನ್ಸರ್ ಮತ್ತು ಇತರ ದೀರ್ಘಕಾಲದ ಕಾಯಿಲೆಗಳು ಆರಂಭಿಕ ಹಂತಗಳಲ್ಲಿ ನೋವನ್ನು ಉಂಟುಮಾಡಬೇಕೆಂದೇನಿಲ್ಲ. ಇದೇ ಕಾರಣಕ್ಕೆ ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಸಾಧ್ಯವಿದ್ದರೂ, ಅದನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. "ದೇಹವು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ತನ್ನ ಕೆಲಸವನ್ನು ಮುಂದುವರಿಸುತ್ತದೆ, ಆದರೆ ಅದು ಇನ್ನು ಮುಂದೆ ನಿಭಾಯಿಸಲು ಸಾಧ್ಯವೇ ಆಗದ ಸ್ಥಿತಿಗೆ ತಲುಪಿದಾಗ ಮಾತ್ರ ತೊಂದರೆ ಗೊತ್ತಾಗುತ್ತದೆ."


ತಡ ಮಾಡುವುದರಿಂದ ಆಗುವ ವೈದ್ಯಕೀಯ ನಷ್ಟ

ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿನ ಬಹುದೊಡ್ಡ ಸವಾಲುಗಳಲ್ಲಿ ಒಂದು ಎಂದರೆ ವೈದ್ಯಕೀಯ ತಪಾಸಣೆಯನ್ನು ವಿಳಂಬ ಮಾಡುವುದು. ಕ್ಯಾನ್ಸರ್‌ ನಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದಾಗ, ಅವುಗಳನ್ನು ಗುಣಪಡಿಸುವುದು ಸುಲಭವಾಗಿರುತ್ತದೆ. ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಹಾಯವಾಗುತ್ತದೆ. ಆರಂಭಿಕ ಹಂತದ ಚಿಕಿತ್ಸೆಯಲ್ಲಿ ಸರಳವಾದ ಚಿಕಿತ್ಸೆ ಇರುತ್ತದೆ ಮತ್ತು ರೋಗಿಯ ದೈಹಿಕ ಹಾಗೂ ಮಾನಸಿಕ ಹೊರೆ ಕಡಿಮೆ ಇರುತ್ತದೆ.


ರೋಗನಿರ್ಣಯ ಮಾಡುವುದು ವಿಳಂಬವಾದಾಗ, ಕಾಯಿಲೆಯು ಗುಪ್ತವಾಗಿ ಬೆಳೆಯುತ್ತಾ ಹೋಗುತ್ತದೆ. ಇದರಿಂದ ಚಿಕಿತ್ಸೆಯು ದೀರ್ಘಕಾಲದವರೆಗೆ ನಡೆಯಬೇಕಾಗುತ್ತದೆ ಮತ್ತು ಗುಣಮುಖರಾಗುವುದು ಕಷ್ಟವಾಗಬಹುದು. ಕೇವಲ ಅಲ್ಪಾವಧಿಯ ಚಿಕಿತ್ಸೆಯಿಂದ ಗುಣವಾಗಬಹುದಾದ ಕಾಯಿಲೆಯು, ತಿಂಗಳುಗಟ್ಟಲೆ ಚಿಕಿತ್ಸೆ ಮತ್ತು ಸುದೀರ್ಘ ಚೇತರಿಕೆಯ ಹಂತಕ್ಕೆ ತಿರುಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಕಾಯಿಲೆಗಿಂತ ಹೆಚ್ಚಾಗಿ ರೋಗನಿರ್ಣಯದ ಮೊದಲು ವ್ಯರ್ಥವಾದ 'ಸಮಯ'ವೇ ಆರೋಗ್ಯ ಸ್ಥಿತಿಯನ್ನು ಬಿಗಡಾಯಿಸುತ್ತದೆ.


ನಿಯಮಿತ ತಪಾಸಣೆ ಮಾಡುವುದರಿಂದ ಇಂತಹ ವಿಳಂಬವನ್ನು ತಡೆಯಬಹುದು. ಸ್ಕ್ರೀನಿಂಗ್ ಪರೀಕ್ಷೆಗಳು ಕ್ಯಾನ್ಸರ್‌ ನ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಅದನ್ನು ಗುರುತಿಸಬಹುದು, ಇದರಿಂದ ಚಿಕಿತ್ಸೆ ನೀಡಲು ಸುಲಭವಾದ ಹಂತದಲ್ಲೇ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ನಿಯಮಿತ ತಪಾಸಣೆ ಮತ್ತು ಸ್ಕ್ರೀನಿಂಗ್‌ಗೆ ಆದ್ಯತೆ ನೀಡುವ ಮೂಲಕ, ಆರೋಗ್ಯ ರಕ್ಷಣೆಯನ್ನು 'ಕೊನೆಯ ಹಂತದ ಚಿಕಿತ್ಸೆ'ಯಿಂದ 'ಆರಂಭಿಕ ಹಂತದ ತಡೆಗಟ್ಟುವಿಕೆ'ಯ ಕಡೆಗೆ ಬದಲಾಯಿಸಬಹುದು. ಇದು ಜೀವ, ಸಮಯ ಮತ್ತು ಸಂಪನ್ಮೂಲ ಎಲ್ಲವನ್ನೂ ಉಳಿಸುತ್ತದೆ. 


"ಆರೋಗ್ಯಕರ" ಬದಲಾವಣೆಗಳೇ ಎಚ್ಚರಿಕೆಯ ಸಂಕೇತಗಳಾದಾಗ

ಅತ್ಯಂತ ಹೆಚ್ಚಾಗಿ ನಿರ್ಲಕ್ಷಿಸಲ್ಪಡುವ ಲಕ್ಷಣಗಳಲ್ಲಿ ಒಂದು ಎಂದರೆ ಕಾರಣವಿಲ್ಲದೆ ತೂಕ ಇಳಿಕೆಯಾಗುವುದು. ಯಾವುದೇ ಪ್ರಯತ್ನವಿಲ್ಲದೆ ತೂಕ ಕಡಿಮೆಯಾಗುವುದನ್ನು ಸಾಮಾನ್ಯವಾಗಿ ಒಳ್ಳೆಯ ವಿಷಯವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಜನರು ಅಭಿನಂದನೆಗಳನ್ನು ಸಲ್ಲಿಸುತ್ತಾರೆ. ಆದರೆ ಆಹಾರ ಪದ್ಧತಿ ಬದಲಾವಣೆ ಅಥವಾ ವ್ಯಾಯಾಮ ಮಾಡದೇ ಇದ್ದರೂ ತೂಕ ಇಳಿಕೆಯಾಗುತ್ತಿದ್ದರೆ, ಅದರರ್ಥ ದೇಹವು ಒಳಗಿನ ಯಾವುದೋ ಕಾಯಿಲೆಯ ವಿರುದ್ಧ ಹೋರಾಡುತ್ತಿದೆ ಎಂಬರ್ಥವಾಗಿರಬಹುದು.


ಅಲ್ಲದೆ, ದೀರ್ಘಕಾಲದ ನೋವನ್ನು ಕೂಡ ದೀರ್ಘಕಾಲದವರೆಗೆ ನಿರ್ಲಕ್ಷಿಸಲಾಗುತ್ತದೆ. ಪದೇ ಪದೇ ಬರುವ ನೋವು, ಕಾಲಕ್ರಮೇಣ ಉಲ್ಬಣಗೊಳ್ಳುವ ನೋವು ಅಥವಾ ಸಾಮಾನ್ಯ ಚಿಕಿತ್ಸೆಗಳಿಗೆ ಮಣಿಯದ ನೋವು ಯಾವತ್ತೂ ಸಾಮಾನ್ಯ ನೋವುಗಳಲ್ಲ. ಆದರೂ ಅನೇಕರು ತಿಂಗಳುಗಟ್ಟಲೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ. ಇದರಿಂದ ಸಮಸ್ಯೆಗೆ ಉತ್ತರ ನೀಡಬಲ್ಲ ವೈದ್ಯಕೀಯ ಪರೀಕ್ಷೆ ನಡೆಸುವುದು ವಿಳಂಬವಾಗುತ್ತದೆ. ಅದೇ ರೀತಿ, ಅಕಾರಣವಾದ ತೂಕ ಇಳಿಕೆಯನ್ನು ಕೂಡ ಎಂದಿಗೂ ಕಡೆಗಣಿಸಬಾರದು. ನೀವು ಆಹಾರ ಅಥವಾ ವ್ಯಾಯಾಮದಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, 6 ರಿಂದ 12 ತಿಂಗಳ ಅವಧಿಯಲ್ಲಿ ನಿಮ್ಮ ದೇಹದ ತೂಕದ 5% ಕ್ಕಿಂತ ಹೆಚ್ಚು ತೂಕವನ್ನು ಕಳೆದುಕೊಂಡಿದ್ದರೆ, ಅದು ವೈದ್ಯಕೀಯ ತಪಾಸಣೆಯ ಅಗತ್ಯವಿದೆ ಎಂಬುದಕ್ಕೆ ಸ್ಪಷ್ಟ ಸಂಕೇತವಾಗಿದೆ.


ಮಲವಿಸರ್ಜನೆಯ ಅಭ್ಯಾಸದಲ್ಲಿ ಬದಲಾವಣೆ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು, ನುಂಗಲು ತೊಂದರೆಯಾಗುವುದು, ಸತತವಾಗಿ ಧ್ವನಿ ಗಡುಸಾಗುವುದು, ಮೂತ್ರ ವಿಸರ್ಜನೆಯಲ್ಲಿನ ಬದಲಾವಣೆಗಳು ಅಥವಾ ಗುಣವಾಗದ ಗಾಯಗಳನ್ನು ಕೂಡ ನಿರ್ಲಕ್ಷಿಸಬಾರದು. ಈ ಲಕ್ಷಣಗಳನ್ನು ಹೇಳಿಕೊಳ್ಳಲು ಮುಜುಗರವಾಗಬಹುದು ಅಥವಾ ಇವು ಅಷ್ಟು ಮುಖ್ಯವಲ್ಲ ಎಂದು ಅನಿಸಬಹುದು, ಆದರೆ ರೋಗಗಳನ್ನು ಮೊದಲೇ ಪತ್ತೆಹಚ್ಚಲು ವೈದ್ಯರಿಗೆ ಬೇಕಾದ ಪ್ರಮುಖ ಸುಳಿವುಗಳು ಇವೇ ಆಗಿರುತ್ತವೆ.


ಭಯ, ಆತಂಕ ಮತ್ತು ಮೌನ

ಚಿಕಿತ್ಸೆ ವಿಳಂಬವಾಗಲು 'ಭಯ' ಕೂಡ ಒಂದು ಪ್ರಮುಖ ಕಾರಣ. ವೈದ್ಯರಿಂದ ಎಂತಹ ಸುದ್ದಿ ಕೇಳಬೇಕಾಗುತ್ತದೆಯೋ ಎಂಬ ಆತಂಕ ಅನೇಕರಲ್ಲಿರುತ್ತದೆ. "ತಿಳಿಯದೇ ಇರುವುದೇ ಲೇಸು" ಎಂದು ಅವರು ಭಾವಿಸುತ್ತಾರೆ. ಆದರೆ, ವ್ಯಕ್ತಿಯು ಭಯಪಡುತ್ತಿದ್ದಾನೆಂದು ಕಾಯಿಲೆಯು ಕಾಯುವುದಿಲ್ಲ. ರೋಗನಿರ್ಣಯವನ್ನು ವಿಳಂಬ ಮಾಡುವುದರಿಂದ ಕಾಯಿಲೆಯನ್ನು ದೂರವಿಡಲು ಸಾಧ್ಯವಿಲ್ಲ. ಬದಲಿಗೆ ಅದು ಬೆಳೆಯಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ.


ಅಲ್ಲದೆ, ಕೆಲವು ಲಕ್ಷಣಗಳು ಮತ್ತು ಕಾಯಿಲೆಗಳಿಗೆ ಸಾಮಾಜಿಕ ಕಳಂಕ ಅಂಟಿಕೊಂಡಿರುತ್ತದೆ. ದೇಹದ ಗಂಟುಗಳು, ರಕ್ತಸ್ರಾವ ಅಥವಾ ಮಲವಿಸರ್ಜನೆಯ ತೊಂದರೆಗಳ ಬಗ್ಗೆ ಮಾತನಾಡಲು ಕೆಲವರು ಮುಜುಗುರಪಡುತ್ತಾರೆ. ಇನ್ನು ಕೆಲವರು ತಮ್ಮ ಜೀವನಶೈಲಿಯ ಬಗ್ಗೆ ಇತರರು ತಪ್ಪು ತಿಳಿಯಬಹುದು ಅಥವಾ ತಾವು ಪ್ರೀತಿಪಾತ್ರರಿಗೆ ಹೊರೆಯಾಗಬಹುದು ಎಂಬ ಭಯದಿಂದ ಮೌನವಾಗಿರುತ್ತಾರೆ.


ರೋಗನಿರ್ಣಯ ತಡ ಮಾಡುವುದರಿಂದಾಗುವ ಭಾವನಾತ್ಮಕ ಮತ್ತು ಆರ್ಥಿಕ ನಷ್ಟ

ರೋಗನಿರ್ಣಯ ತಡ ಮಾಡುವುದು ಕೇವಲ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಇನ್ನೂ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಮುಂಚಿತವಾಗಿ ವೈದ್ಯಕೀಯ ಸಹಾಯ ಪಡೆಯದಿದ್ದಕ್ಕಾಗಿ ಅನೇಕ ರೋಗಿಗಳು ಅಪರಾಧ ಪ್ರಜ್ಞೆಯಿಂದ ಬಳಲುತ್ತಾರೆ, ಮತ್ತೊಂದೆಡೆ ಅವರ ಕುಟುಂಬಗಳು ಆಘಾತ, ಆತಂಕ ಮತ್ತು ಅಸಹಾಯಕತೆಯೊಂದಿಗೆ ಹೋರಾಡಬೇಕಾಗುತ್ತದೆ. ಕಾಯಿಲೆಯು ಉಲ್ಬಣಗೊಂಡಂತೆ, ಚಿಕಿತ್ಸೆಯು ಹೆಚ್ಚು ಸಂಕೀರ್ಣವಾಗುತ್ತದೆ, ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಭಾವನಾತ್ಮಕವಾಗಿ ಕುಗ್ಗಿಸುತ್ತದೆ. ಇದರೊಂದಿಗೆ ಆರ್ಥಿಕ ಹೊರೆಯೂ ಹೆಚ್ಚಾಗುತ್ತದೆ. ಹೆಚ್ಚಿನ ವೈದ್ಯಕೀಯ ಬಿಲ್‌ ಗಳು, ಸುದೀರ್ಘ ಆಸ್ಪತ್ರೆ ವಾಸ ಮತ್ತು ಚಿಕಿತ್ಸೆಯ ಅವಧಿಯಲ್ಲಿ ಆದಾಯದ ನಷ್ಟ ಇವೆಲ್ಲವೂ ಎದುರಾಗುತ್ತವೆ.


ಹಾಗಾಗಿ ಮುಂಚಿತವಾಗಿಯೇ ವೈದ್ಯರನ್ನು ಸಂಪರ್ಕಿಸುವುದು ನೆಮ್ಮದಿಯನ್ನು ನೀಡಬಲ್ಲದು. ಏಕೆಂದರೆ ಅನೇಕ ಲಕ್ಷಣಗಳು ವೈದ್ಯರನ್ನು ಭೇಟಿಮಾಡಿದರೆ ಹಾನಿಕಾರಕವಲ್ಲ ಎಂದು ತಿಳಿಯಬಹುದು. ಒಂದು ವೇಳೆ ಗಂಭೀರವಾದ ಕಾಯಿಲೆ ಪತ್ತೆಯಾದರೂ ಸಹ, ಆರಂಭಿಕ ಹಂತದ ಚಿಕಿತ್ಸೆಯು ಅಷ್ಟೊಂದು ಕಠಿಣವಾಗಿರುವುದಿಲ್ಲ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಲ್ಲಿ ಆರೋಗ್ಯ ವಿಮೆಯು ಸಹ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಕಾಲಿಕ ರೋಗನಿರ್ಣಯ ಮತ್ತು ಆರಂಭಿಕ ಹಂತದ ಚಿಕಿತ್ಸೆಗಳಿಗೆ ಉತ್ತಮ ವಿಮಾ ರಕ್ಷಣೆ ದೊರೆಯುತ್ತದೆ, ಇದು ಕಷ್ಟದ ಸಮಯದಲ್ಲಿ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿಮೆಯ ಬೆಂಬಲವಿದ್ದಾಗ ರೋಗಿಗಳು ಮತ್ತು ಅವರ ಕುಟುಂಬಗಳು ಹಣದ ಚಿಂತೆಯ ಬದಲು ರೋಗ ಗುಣವಾಗುವುದರತ್ತ ಗಮನ ಹರಿಸಬಹುದು. ಅಂತಿಮವಾಗಿ, ಮನಸ್ಸಿನ ಶಾಂತಿ ಮುಖ್ಯ. ಧೈರ್ಯದ ರೂಪದಲ್ಲಾಗಲಿ, ಆರಂಭಿಕ ಚಿಕಿತ್ಸೆಯ ರೂಪದಲ್ಲಾಗಲಿ ಅಥವಾ ಆರ್ಥಿಕ ಭದ್ರತೆಯ ರೂಪದಲ್ಲಾಗಲಿ ಮಾನಸಿಕ ಶಾಂತಿಯು ನೆಮ್ಮದಿಯನ್ನು ಒದಗಿಸುತ್ತದೆ.


ದೇಹವು ಚೀರುವ ಮೊದಲೇ ಅದರ ಮಾತನ್ನು ಆಲಿಸಿ

ದೇಹವು ತೀವ್ರ ಸಂಕಷ್ಟಕ್ಕೆ ಸಿಲುಕುವ ಬಹಳ ಸಮಯದ ಮೊದಲೇ ಎಚ್ಚರಿಕೆಯ ಸಂಕೇತಗಳನ್ನು ಕಳುಹಿಸುತ್ತದೆ. ರೋಗಲಕ್ಷಣವೊಂದಕ್ಕೆ ಯಾವಾಗ ಗಮನ ನೀಡಬೇಕು ಎಂಬುದನ್ನು ಗುರುತಿಸುವುದರಲ್ಲೇ ಜಾಣ್ಮೆ ಅಡಗಿದೆ. ಎರಡರಿಂದ ಮೂರು ವಾರಗಳಿಗಿಂತ ಹೆಚ್ಚು ಕಾಲ ಉಳಿಯುವ, ಪದೇ ಪದೇ ಮರುಕಳಿಸುವ ಅಥವಾ ಅಸಹಜವೆನಿಸುವ ಯಾವುದೇ ಬದಲಾವಣೆಯನ್ನು ನಿರ್ಲಕ್ಷಿಸಬಾರದು. ವೈದ್ಯರನ್ನು ಸಂಪರ್ಕಿಸುವುದು ಎಂದರೆ ಕೆಟ್ಟದ್ದನ್ನೇ ನಿರೀಕ್ಷಿಸುವುದು ಎಂದಲ್ಲ, ಅದು ಅನಿಶ್ಚಿತತೆಯ ಬದಲು ಸ್ಪಷ್ಟತೆಯನ್ನು ಆರಿಸಿಕೊಳ್ಳುವುದು ಎಂದರ್ಥ.


ಆಧುನಿಕ ವೈದ್ಯಕೀಯ ವಿಜ್ಞಾನವು ಸಾಕಷ್ಟು ಬೆಳೆದಿದೆ. ಆದರೆ ಅದರ ಯಶಸ್ಸು 'ಸಮಯ'ದ ಮೇಲೆ ನಿಂತಿದೆ. ಇಸಿಜಿ, ಎಕೋಕಾರ್ಡಿಯೋಗ್ರಾಮ್, ಟ್ರೆಡ್‌ಮಿಲ್ ಟೆಸ್ಟ್ ಅಥವಾ ಸಾಮಾನ್ಯ ರಕ್ತದ ಪರೀಕ್ಷೆಗಳಂತಹ ಸರಳ ಪರೀಕ್ಷೆಗಳು ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸಮಸ್ಯೆಗಳನ್ನು ಪತ್ತೆಹಚ್ಚಬಲ್ಲವು. ಸಕಾಲಿಕ ತಪಾಸಣೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಚಿಕಿತ್ಸೆಯನ್ನು ಸುಲಭವಾಗುವ, ಪರಿಣಾಮಕಾರಿಯಾಗಿರುವ ಮತ್ತು ಜೀವನಕ್ಕೆ ಅಷ್ಟಾಗಿ ತೊಂದರೆಯಾಗದ ಹಂತದಲ್ಲೇ ಅಪಾಯಗಳನ್ನು ಗುರುತಿಸಲು ಸಹಾಯ ಮಾಡುತ್ತವೆ.


ಹಾಗಾಗಿ ಸಣ್ಣಪುಟ್ಟ ಲಕ್ಷಣಗಳನ್ನು ನಿರ್ಲಕ್ಷಿಸುವುದು ಭಾರಿ ಬೆಲೆ ತೆರುವಂತೆ ಮಾಡಬಹುದು. ಕೇವಲ ಸಂಕೀರ್ಣ ಚಿಕಿತ್ಸೆ ಮಾತ್ರವೇ ಅಲ್ಲ, ಕಳೆದುಹೋದ ಸಮಯ, ಭಾವನಾತ್ಮಕ ಒತ್ತಡ ಮತ್ತು ಜೀವನದ ಗುಣಮಟ್ಟ ಎಲ್ಲಾ ವಿಚಾರಕ್ಕೆ ಚಿಂತೆ ಮಾಡಬೇಕಾಗಿ ಬರಬಹುದು. ಮುನ್ನೆಚ್ಚರಿಕೆ ವಹಿಸುವುದು ಎಂದರೆ ಭಯಪಡುವುದಲ್ಲ, ಜಾಗರೂಕರಾಗಿರುವುದು. ಕೆಲವು ಸಮಯದಲ್ಲಿ ನಾವು ಮಾಡಬಹುದಾದ ಅತ್ಯಂತ ಪ್ರಮುಖ ಕೆಲಸವೆಂದರೆ, ದೇಹವು ಅನಿವಾರ್ಯವಾಗಿ ಚೀರುವ ಮೊದಲು, ಅದು ಪಿಸುಗುಟ್ಟುತ್ತಿರುವಾಗಲೇ ಅದರ ಮಾತನ್ನು ಆಲಿಸುವುದು.


Post a Comment

0 Comments
Post a Comment (0)
To Top