ಕಾಸರಗೋಡು: ಯಕ್ಷಗಾನ ಬೊಂಬೆಯಾಟವೂ ಸೇರಿದಂತೆ ಅಳಿವಿನ ಅಂಚಿನಲ್ಲಿರುವ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ. ಈ ನಿಟ್ಟಿನಲ್ಲಿ ಮಾದರಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿರುವ ಕಾಸರಗೋಡಿನ ಕೆ.ವಿ. ರಮೇಶ ಅಭಿನಂದನಾರ್ಹರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನೂತನ ಅಭಿಯಾನವಾದ 'ಗಣ್ಯರೆಡೆಗೆ ಬೊಂಬೆ ನಡಿಗೆ'ಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಧರ್ಮಸ್ಥಳ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ. ಹೆಗ್ಗಡೆಯವರಯ ವಿನೂತನ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ನೀಡಿ 'ನರಕಾಸುರ ವಧೆ' ಪ್ರಸಂಗದ ಬೊಂಬೆಯಾಟವನ್ನು ಧರ್ಮಪತ್ನಿ ಹೇಮಾವತಿ ವಿ. ಹೆಗ್ಗಡೆಯವರೊಂದಿಗೆ ಕುಳಿತು ಪೂರ್ತಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಅವರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ. ವಿ. ರಮೇಶರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಮಾಧ್ಯಮ ಪ್ರತಿನಿಧಿ ಅಚಲ್ ರಾವ್ ಮರ್ದಂಬೈಲ್, ಕನ್ನಡ ಜಾಗೃತಿ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾಸರಗೋಡು ಉಪಸ್ಥಿತರಿದ್ದರು. ಬೊಂಬೆಯಾಟ ತಂಡದ ಸೂತ್ರಧಾರಿಗಳನ್ನು ಮತ್ತು ಕಾಸರಗೋಡಿನಿಂದ ಆಗಮಿಸಿದ ಕಲಾಭಿಮಾನಿಗಳನ್ನು ಡಾ. ವೀರೇಂದ್ರ ಹೆಗ್ಗಡೆಯವರು ಸ್ಮರಣಿಕೆ ನೀಡಿ ಅಭಿನಂದಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಪ್ರದಾನ ಸಂಚಾಲಕ ಕೆ.ಜಗದೀಶ ಕೂಡ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳಿಕ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಪ್ರಧಾನ ಸೂತ್ರಧಾರಿ ಕೆ. ವಿ. ರಮೇಶ, ಸಹಸೂತ್ರಧಾರಿಗಳಾಗಿ ತಿರುಮಲೇಶ ಕೆ. ವಿ., ಸುದರ್ಶನ ಕೆ. ವಿ., ಅನೀಶ್ ಪಿಲಿಕುಂಜೆ, ಮನೋರಮಾ ಎಡನೀರು, ಭವ್ಯಶ್ರೀ ಬಲ್ಲಾಳ್ ಅವರ ಸಮರ್ಥ ನಿರ್ವಹಣೆಯಲ್ಲಿ 'ನರಕಾಸುರ ವಧೆ' ಪ್ರೇಕ್ಷಕರ ಕರತಾಡನ ಗಿಟ್ಟಿಸಿತು.
ಪಾರ್ತಿಸುಬ್ಬನ ವಂಶಜರಿಂದ ಸ್ಥಾಪನೆಗೊಂಡು ನಾಲ್ಕೂವರೆ ದಶಕಗಳ ಇತಿಹಾಸವಿರುವ, ತೆಂಕುತಿಟ್ಟು ಯಕ್ಷಗಾನವನ್ನು ಬೊಂಬೆಯಾಟದ ಮೂಲಕ ಪ್ರದರ್ಶಿಸುವ ವಿಶ್ವದ ಏಕೈಕ ಬೊಂಬೆಯಾಟ ಸಂಘವಾದ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು 'ಚಿಣ್ಣರ ಅಂಗಳಕ್ಕೆ ಮತ್ಥಳಿ ಯಾತ್ರೆ', 'ಶಾಲೆಯತ್ತ ಬೊಂಬೆ ಚಿತ್ರ' ಮೊದಲಾದ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಕೆಲವು ವರ್ಷಗಳಿಂದ ಆಸಕ್ತ ವಿದ್ಯಾರ್ಥಿ-ಯುವಜನರಿಗೆ ತರಬೇತಿ ನೀಡುತ್ತಾ ಈ ಪ್ರಾಚೀನ ಕಲೆಯ ಉಳಿವಿಗೆ ಶ್ರಮಿಸುತ್ತಿದೆ. ಸುವರ್ಣ ಸಂಭ್ರಮದ ಮುಂಚಿತವಾಗಿ ಚಂದ್ರಗಿರಿ ತೀರದ ಯಕ್ಷಪುತ್ಥಳಿ ಬೊಂಬೆಮನೆಯಲ್ಲಿ ಸಾವಿರ ಯಕ್ಷಗಾನ ಸೂತ್ರದ ಬೊಂಬೆಗಳ ಮ್ಯೂಸಿಯಂ ಸ್ಥಾಪನೆಯ ಬೃಹತ್ ಯೋಜನೆ ಸಾಕಾರಗೊಳ್ಳಲಿದ್ದು ಅಭಿವೃದ್ಧಿಯ ಪಥದಲ್ಲಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

