ಕರ್ತವ್ಯ ನಿರತರಾದಾಗ ಸಮಾಜದ ಸುಸ್ಥಿರತೆ ಮತ್ತು ಬದಲಾವಣೆ ಸಾಧ್ಯ: ಪ್ರಕಾಶ್ ಶೆಟ್ಟಿ

Upayuktha
0

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ: ಎರಡು ದಿನಗಳ 'ಸಂಭ್ರಮ- 2026' ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ 


  •  ಡಿಜಿಟಲೀಕರಣ ಹಾಗೂ ಸುಸ್ಥಿರತೆಯ ಕುರಿತು ಚರ್ಚೆ 
  •  ವಿಚಾರಗೋಷ್ಠಿಯ ಜೊತೆಗೆ ಹಲವು ಸ್ಪರ್ಧೆ
  •  ಎಂ.ಎಸ್.ಡಬ್ಲ್ಯು ರಜತ ಮಹೋತ್ಸವದ ಲಾಂಛನ ಬಿಡುಗಡೆ 
  • ರಾಜ್ಯದ 300 ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿ 




ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಾಮಾಜಿಕ ಕಾರ್ಯ ಸಂಶೋಧನಾ ವಿಭಾಗದ ವತಿಯಿಂದ ಆಯೋಜಿಸಿರುವ ಡಿಜಿಟಲೀಕರಣ ಹಾಗೂ ಸುಸ್ಥಿರತೆ ವಿಚಾರ ಕುರಿತ ಎರಡು ದಿನಗಳ 'ಸಂಭ್ರಮ - 2026' ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು. 


ಉಜಿರೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಪ್ರತಿಯೊಬ್ಬರು ಸಂವಿಧಾನ ನೀಡಿರುವ ಹಕ್ಕು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುವುದರ ಜೊತೆಗೆ ಸಂವಿಧಾನ ತಿಳಿಪಡಿಸುವ ಕರ್ತವ್ಯಗಳನ್ನು ಪಾಲಿಸಬೇಕು. ಸದೃಢ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಸರ್ವರ ಕೊಡುಗೆ ಅಗತ್ಯ. ಕಾಲೇಜು ಜೀವನ ಅನೇಕ ಅವಕಾಶ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ ವಿದ್ಯಾರ್ಥಿಗಳು ಅದನ್ನು ಸಕ್ರೀಯವಾಗಿ ಬಳಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಆಧಾರ ಸ್ತಂಭಗಳಾಗಿ ಬೆಳೆಯಬೇಕು. ಸಮಾಜ ಸೇವೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರ ಕಟ್ಟುವ , ರಾಷ್ಟ್ರೀಯ ಚಿಂತನೆ ಬೆಳೆಸುವ ಕಾರ್ಯ ವಿದ್ಯಾರ್ಥಿಗಳಿಂದ ಸಾಧ್ಯವಾಗಬೇಕು.


ಪ್ರಸ್ತುತ ವಿದ್ಯಮಾನಗಳ ಅರಿವಿನ ಜೊತೆಗೆ ಯುವ ಸಮುದಾಯ ಕೌಶಲ್ಯವಂತರೂ ಮತ್ತು ತಂತ್ರಜ್ಞಾನದ ಸಕ್ರೀಯ ಬಳಕೆಯ ಶೀಲರಾಗಬೇಕು. ಪಠ್ಯದ ಹೊರತಾದ ಸಮಾಜದ ಸುಸ್ಥಿರತೆಯನ್ನು ಕಾಪಾಡುವ ಮತ್ತು ಸಮಾಜದ ಕುಂದುಕೊರತೆಗಳನ್ನು ಸರಿದೂಗಿಸುವ ಮಹತ್ತರ ಜವಾಬ್ದಾರಿ ಸಮಾಜಕಾರ್ಯ ವಿದ್ಯಾರ್ಥಿಗಳ ಮೇಲಿದೆ. ಕರ್ತವ್ಯ ನಿರತ ಮತ್ತು ತೃಪ್ತಿದಾಯಕ ಬದುಕನ್ನು ಹರಸುವ ಜೊತೆಗೆ ಸಮಾಜ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಸಮಾಜಮುಖಿ ಕಾರ್ಯಗಳಿಗೆ ಸಂಭ್ರಮದಂತ ವೇದಿಕೆಗಳು ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳಿಂದಲೇ ಸಮಾಜ ಕಟ್ಟುವ ಚರ್ಚೆಗಳು ಆರಂಭವಾಗಬೇಕು ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನಿಟ್ಟೆ ಮಹಾ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ನಿರ್ದೇಶಕ ಪ್ರೊ. ಸುಧೀರ್ ರಾಜ್ ಕೆ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಸಮಾಜಕ್ಕೆ ಐಚ್ಛಿಕವಲ್ಲದ ಕಡ್ಡಾಯವಾಗಿ ಪಾಲನೆ ಮಾಡಲೇ ಬೇಕಾದ ಸಂಗತಿ. ಇದು ಈ ನೆಲದ ಪರಿಸರ ,ಆಚರಣೆ ಸಂಸ್ಕೃತಿ, ಆರ್ಥಿಕ ಸಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಭೂಮಿ ಒಂದು ಭವಿಷ್ಯ ಎಂಬ ಧ್ಯೇಯದೊಂದಿಗೆ ನಾವು ಹೆಜ್ಜೆ ಹಾಕಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಎಲ್ಲಾ ಕ್ಷೇತ್ರಗಳ ಜ್ಞಾನ ಬಹುಮುಖ್ಯ. ವಿದ್ಯಾರ್ಥಿಗಳು ಸಕ್ರೀಯವಾಗಿ ಬೆಳೆದಾಗ ಸಮಾಜ ಬೆಳೆಯುತ್ತದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ದೇಶದ ಪ್ರಗತಿ ಮತ್ತು ಸುಸ್ಥಿರತೆಯ ವೈಚಾರಿಕ ಪ್ರಬುದ್ಧತೆಯನ್ನು ಹೆಚ್ಚಿಸಲು ವಿಚಾರ ಮಂಥನ ಮತ್ತು ಚರ್ಚಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಇಂದು ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಿಗೆ ಸಮಾಜಿಕ ಚಿಂತನೆಗಳನ್ನು ಬೆಳೆಸುವುದರ ಜೊತೆಗೆ  ದೇಶದ ಸುಸ್ಥಿರತೆಯ ಜಾಗೃತಿಯನ್ನು ಮೂಡಿಸುತ್ತದೆ ಎಂದರು.


'MSW - 25' ಲಾಂಛನ ಬಿಡುಗಡೆ:

ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಾಮಾಜಿಕ ಕಾರ್ಯ ಸಂಶೋಧನಾ ವಿಭಾಗವು 25ನೇ ವರ್ಷದ  ರಜತ ಮಹೋತ್ಸವ ಸಂಭ್ರಮಾಚರಣೆಯ ಹೊಸ್ತಿಲಲ್ಲಿರುವುದರಿಂದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ 'MSW - 25' ಲಾಂಚನವನ್ನು ಬಿಡುಗಡೆಗೊಳಿಸಿದರು. ಬಳಿಕ ಸಂಭ್ರಮ -2026 ಅಂಗವಾಗಿ ಆಯೋಜಿಸಿರುವ 10 ಕ್ಕೂ ಅಧಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. 


ಸಭಾ ಕಾರ್ಯಕ್ರಮದ ಬಳಿಕ ನಿಟ್ಟೆ ಮಹಾ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ನಿರ್ದೇಶಕ ಪ್ರೊ. ಸುಧೀರ್ ರಾಜ್ ಕೆ ಡಿಜಿಟಲೀಕರಣ ಹಾಗೂ ಸುಸ್ಥಿರತೆಯ ಯೋಜನೆಯಿಂದ ಕಾರ್ಯಪ್ರವೃತ್ತವಾಗುವ ಕಡೆಗೆ ವಿಷಯದ ಕುರಿತು ಪ್ರಧಾನ ಉಪನ್ಯಾಸ ನೀಡಿದರು.


ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಸೌಮ್ಯ ಬಿ ಪಿ, ಸಾಮಾಜಿಕ ಕಾರ್ಯ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್, ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಡಾ. ಧಾನೇಶ್ವರಿ, ಉಪನ್ಯಾಸಕ ಡಾ. ಅಥುಲ್ ಎಸ್, ಡಾ. ಸುವೀರ್ ಜೈನ್ ಸೇರಿದಂತೆ ವಿದ್ಯಾರ್ಥಿ ಸಂಯೋಜಕರಾದ ದೀಕ್ಷಿತ್ ಜೈನ್, ನಿಶ್ಮಿತಾ ಮತ್ತು ಅನುಷಾ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ 300 ಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು  ವಿದ್ಯಾರ್ಥಿನಿ ಕುಮಾರಿ ಅನಿಶಾ ಮತ್ತು ವಂದಿತಾ ನಿರೂಪಿಸಿ, ಸಂಯೋಜಕ ಅಥುಲ್ ಎಸ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top