ಅದು ಸಂಜೆಯ ಪೀಕ್ ಅವರ್. ರಸ್ತೆಯ ತುಂಬಾ ವಾಹನಗಳದ್ದೇ ಕಾರುಬಾರು. ಆ ಗದ್ದಲದ ನಡುವೆಯೂ ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳ ಸದ್ದನ್ನು ಮೀರಿ ಕೇಳಿಸುತ್ತಿದ್ದ ಆಂಬುಲೆನ್ಸ್ ಸೈರನ್, ಒಂದು ಕ್ಷಣ ಕಣ್ಣುಮುಚ್ಚಿ ಪ್ರಾರ್ಥಿಸುವಂತೆ ಮಾಡಿತು. "ಅದರಲ್ಲಿರುವ ರೋಗಿ ಬೇಗ ಚೇತರಿಸಿಕೊಳ್ಳಲಿ" ಎಂಬ ಸಣ್ಣ ಹಾರೈಕೆಯೊಂದು ಮನದ ಮೂಲೆಯಲ್ಲಿ ಮೂಡಿತು.
ಆದರೆ, ಅದೇ ಕ್ಷಣದಲ್ಲಿ ನನ್ನ ಗಮನ ಆ ಆಂಬುಲೆನ್ಸ್ನಲ್ಲಿದ್ದ ಆ 'ಯೋಧ'ನ ಕಡೆಗೆ ಹರಿಯಿತು. ಆತ ನಿಜಕ್ಕೂ ಒಬ್ಬ ಹೋರಾಟಗಾರ, ಛಲವಾದಿ. ತನ್ನ ಪ್ರಾಣವನ್ನೇ ಪಣಕ್ಕಿಟ್ಟು, ಯಾರೋ ಅಪರಿಚಿತನ ಜೀವ ಉಳಿಸಲು ಸಮಯದೊಂದಿಗೆ ಕಾದಾಡುತ್ತಿದ್ದ. ಆತನ ಮುಖದಲ್ಲಿ ಆತಂಕ ಮತ್ತು ಕಳವಳ ಎದ್ದು ಕಾಣುತ್ತಿತ್ತು. ಆತ ಬೇರೆ ಯಾರೂ ಅಲ್ಲ, ಆ ಆಂಬುಲೆನ್ಸ್ ಚಾಲಕ.
ಆ ಕ್ಷಣಕ್ಕೆ ಆತ ಒಬ್ಬ ದೇವದೂತನಂತೆ ಭಾಸವಾದ. ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಜೀವವನ್ನು ಉಳಿಸಲು ಕಾಲನ ಜೊತೆ ಪೈಪೋಟಿ ನಡೆಸುತ್ತಾ ಮುನ್ನುಗ್ಗುತ್ತಿದ್ದ. ರೋಗಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಬೇಕೆಂಬ ತುಡಿತ ಒಂದೆಡೆಯಾದರೆ, ಸುರಕ್ಷಿತವಾಗಿ ತಲುಪಿಸಬೇಕೆಂಬ ಜವಾಬ್ದಾರಿ ಇನ್ನೊಂದೆಡೆ. ವೇಗ ಮತ್ತು ಸುರಕ್ಷತೆ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ವಾಹನ ಚಲಾಯಿಸುವುದು ಒಂದು ದೊಡ್ಡ ಸಾಹಸವೇ ಸರಿ.
ಒಂದು ವೇಳೆ ಆಸ್ಪತ್ರೆ ತಲುಪಿದಾಗ, ವೈದ್ಯರು "ಸರಿಯಾದ ಸಮಯಕ್ಕೆ ಕರೆತಂದಿದ್ದೀರಿ" ಎಂದು ಹೇಳಿ ರೋಗಿ ಗುಣಮುಖನಾದರೆ ಅದು ಸಾರ್ಥಕ ಭಾವ. ಆದರೆ, ವೈದ್ಯರು ಒಂದು ವೇಳೆ "ಇನ್ನಷ್ಟು ಮುಂಚಿತವಾಗಿ ಬಂದಿದ್ದರೆ ರೋಗಿಯನ್ನು ಉಳಿಸಬಹುದಿತ್ತು" ಎಂದುಬಿಟ್ಟರೆ? ಆ ಮಾತು ಚಾಲಕನ ಮನದಲ್ಲಿ ಸೃಷ್ಟಿಸುವ ನೋವು ಮತ್ತು ದುಗುಡ ವರ್ಣನಾತೀತ. ಅದು ಮನಸ್ಸಿನೊಳಗೆ ಒಂದು ಅಗ್ನಿಕುಂಡವನ್ನೇ ನಿರ್ಮಿಸಿಬಿಡಬಹುದು.
ನಮ್ಮಿಂದ ಯಾರಿಗಾದರೂ ನೋವಾಯಿತು ಎಂದರೆ ನಾವು ಪಶ್ಚಾತ್ತಾಪದ ಬೆಂಕಿಯಲ್ಲಿ ಸುಡುತ್ತೇವೆ. ಆಂಬುಲೆನ್ಸ್ ಚಾಲಕರೂ ಮನುಷ್ಯರೇ ಅಲ್ಲವೇ? "ನಾನು ಸ್ವಲ್ಪ ವೇಗವಾಗಿ ಬಂದಿದ್ದರೆ ಒಂದು ಜೀವ ಉಳಿಯುತ್ತಿತ್ತೇನೋ" ಎಂಬ ನೋವು ಅವರ ಹೃದಯಕ್ಕೆ ಸೂಜಿಯಂತೆ ಚುಚ್ಚಿದಾಗ, ಆ ಕರಾಳ ಅನುಭವ ಯಾರೂ ಅರಿಯದಂತದ್ದು.
ಆಂಬುಲೆನ್ಸ್ ಚಾಲನೆ ಎಂದರೆ ಕೇವಲ ಸ್ಟೇರಿಂಗ್ ಹಿಡಿದು ವೇಗವಾಗಿ ಗಾಡಿ ಓಡಿಸುವುದಲ್ಲ; ಅದೊಂದು ದೊಡ್ಡ ಜವಾಬ್ದಾರಿ. ಕರ್ತವ್ಯದ ಸಮಯದಲ್ಲಿ ರೋಗಿಯ ಸ್ಥಿತಿ ಮತ್ತು ಕುಟುಂಬದವರ ಆಕ್ರಂದನವನ್ನು ಕಂಡು ಎದೆಗುಂದದೆ ಮುನ್ನುಗ್ಗಲು ಅಪಾರ ಮಾನಸಿಕ ಸ್ಥೈರ್ಯ ಬೇಕು. ಇದೆಲ್ಲದರ ನಡುವೆ ವಿಧಿ ಏನಾದರೂ ಗೆದ್ದರೆ, ಆ ಸೋಲನ್ನು ಧೈರ್ಯವಾಗಿ ಸ್ವೀಕರಿಸುವ ಮನೋಬಲವೂ ಅವರಿಗೆ ಅನಿವಾರ್ಯ.
ಪರರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಪ್ರತಿಯೊಬ್ಬ ಆಂಬುಲೆನ್ಸ್ ಚಾಲಕನೂ ಒಬ್ಬ ರಿಯಲ್ ಹೀರೋ. ಅಂದು ನನ್ನ ಪ್ರಾರ್ಥನೆಯೂ ಅದೇ ಆಗಿತ್ತು— "ಆ ಹೀರೋ ಗೆಲ್ಲಲಿ..."
- ಪ್ರಿಯಾ ಶ್ರೀವಿಧಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


