ಅಂತರ ಫೋರಂಗಳ ಸ್ಪರ್ಧೆ ‘ಇನಾಮು–೨೦೨೬’ ಉದ್ಘಾಟನೆ
ಮೂಡುಬಿದಿರೆ: ಆಳ್ವಾಸ್ ಪದವಿ ಸ್ವಾಯತ್ತ ಕಾಲೇಜಿನ ೨೨ ಅಂತರ ಫೋರಂಗಳ ಸ್ಪರ್ಧೆಗಳಾದ ‘ಇನಾಮು–೨೦೨೬’ರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಕಾಲೇಜು ಫೋರಂಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸುವುದೇ ಫೋರಂಗಳ ಮುಖ್ಯ ಉದ್ದೇಶವಾಗಿದ್ದು, ಇವು ನಾಯಕತ್ವ, ಸಂವಹನ ಕೌಶಲ್ಯ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವೇದಿಕೆಗಳಾಗಿವೆ ಎಂದು ಅವರು ವಿವರಿಸಿದರು. ಈ ಹಿನ್ನೆಲೆಯಲ್ಲಿ ಆಳ್ವಾಸ್ ಸ್ವಾಯತ್ತ ಕಾಲೇಜು ೨೨ ವಿಭಿನ್ನ ಫೋರಂಗಳನ್ನು ಹೊಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ವಿದ್ಯಾರ್ಥಿಗಳು ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಬೇಕು. ಸೋಲು, ಟೀಕೆ, ವಿಫಲತೆಗಳು ಜೀವನದ ಭಾಗವೇ; ಅವುಗಳಿಂದ ಕುಗ್ಗದೆ ಎದ್ದು ನಿಲ್ಲುವ ಶಕ್ತಿಯೇ ನಿಜವಾದ ಜಯದ ಗುಟ್ಟು. ಜಾತಿ, ಧರ್ಮ, ಭಾಷೆ ಹಾಗೂ ಪ್ರದೇಶದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವವರ ಬಲೆಗೆ ಬೀಳಬಾರದು. ಏಕತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವವೇ ನಮ್ಮ ನಿಜವಾದ ಶಕ್ತಿ. ಹಳೆಯ ಮಾರ್ಗಗಳಲ್ಲಿ ನಡೆದು ಯಶಸ್ಸು ಸೀಮಿತವಾಗುತ್ತದೆ; ಹೊಸತನ ಮತ್ತು ಸೃಜನಶೀಲತೆ ನಮ್ಮ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತವೆ ಎಂದು ವಿವೇಕ್ ಆಳ್ವ ತಿಳಿಸಿದರು.
ಫೆಬ್ರವರಿ ೨ರಿಂದ ಮಾರ್ಚ್ ೨೦ರವರೆಗೆ ಮಾಡೆಲ್ ಮೇಕಿಂಗ್, ಪೋಸ್ಟರ್ ಮೇಕಿಂಗ್, ಕಟ್ಔಟ್ ಅನಿಮೇಶನ್, ಸ್ಪೆಲ್ಮೇನಿಯಾ, ಬಾಟಲ್ ಪೈಂಟಿಂಗ್, ಮೈಂಡ್ ಮಾರ್ಕೆಟಿಂಗ್, ನವರಸ, ಸ್ಕಿಟ್, ಕೇಸ್ ಕ್ವೆಸ್ಟ್, ಮೇಲೋಡಿ ವಿತ್ ಎ ಮೆಸೇಜ್, ಕೇರ್ ಫಾರ್ ವಿಂಗ್ಸ್, ಡ್ಯಾನ್ಸ್ ವೆರೈಟಿ, ಫೋಕ್ ಗ್ರೂಪ್ ಸಾಂಗ್, ಕ್ಲೇ ಮಾಡೆಲಿಂಗ್, ಸಿಕ್ರೆಟ್ ಫ್ಲಿಟಿಕ್ಸ್, ಸ್ಕಲ್ಪ್ಚರ್ ಆರ್ಟ್, ಮೈಮ್ ಶೋ, ನಾಟ್ಯ ಸಂಗಮ, ಭಾಷಣ ಸ್ಪರ್ಧೆ, ಟಗ್ ಆಫ್ ವಾರ್, ಸೆಟ್ಅಪ್ ಪ್ಲಾನ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಫೋರಂಗಳ ಮುಖ್ಯ ಸಂಯೋಜಕ ಡಾ. ಯೋಗೀಶ್ ಕೈರೋಡಿ, ಇನಾಮು ಕಾರ್ಯಕ್ರಮದ ಸಂಯೋಜಕ ಮನು ಡಿ.ಎಲ್., ಕೋರ್ ಕಮಿಟಿಯ ವಿದ್ಯಾರ್ಥಿ ಸಂಯೋಜಕ ನಿರ್ಮಲ್ ಪೈ ಉಪಸ್ಥಿತರಿದ್ದರು. ಪ್ರಥ್ವಿತಾ ಕಾರ್ಯಕ್ರಮ ನಿರೂಪಿಸಿ, ಆಶ್ವಿಜಾ ಪ್ರಾರ್ಥಿಸಿ, ರಶ್ಮಿ ಸ್ವಾಗತಿಸಿ, ಶ್ರಾವ್ಯ ಶೆಟ್ಟಿ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



