ಮಸ್ಕತ್‌ನಲ್ಲಿ ವೈಭವಯುತ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

Upayuktha
0

  • ಬೆಂಗಳೂರಿನ ಶ್ರೀವಾರಿ ಫೌಂಡೇಷನ್‌ನ ಅಭಿನವ ಅನ್ನಮಾಚಾರ್ಯ ಎಸ್. ವೆಂಕಟೇಶಮೂರ್ತಿ ಅವರ ನೇತೃತ್ವ
  • ಶ್ರೀ ಶ್ರೀನಿವಾಸ ಭಕ್ತ ವೃಂದ, ಮಸ್ಕತ್ (ಓಮಾನ್) ಇವರಿಂದ ಆಯೋಜನೆ




ಮಸ್ಕತ್: ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಅಪಾರ ಭಕ್ತಿಭಾವ ಹಾಗೂ ದಿವ್ಯವೈಭವದಿಂದ ಆಯೋಜಿಸಲಾದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಭಕ್ತರ ಮನಸೂರೆಗೊಂಡ ಅದ್ಭುತ ಆಧ್ಯಾತ್ಮಿಕ ಅನುಭವವಾಗಿ ಮೂಡಿಬಂತು. ಪ್ರತಿಕ್ಷಣವೂ ದಿವ್ಯತೆಯಿಂದ ತುಂಬಿದ್ದು, ಭಗವಂತನ ಸೌಂದರ್ಯವನ್ನು ಆಸ್ವಾದಿಸಲು ಎರಡು ಕಣ್ಣುಗಳು ಸಾಲದು ಎನ್ನುವ ಭಾವನೆ ಸಹಜವಾಗಿ ಮೂಡಿತು.


ಬೆಂಗಳೂರಿನ ಶ್ರೀವಾರಿ ಫೌಂಡೇಷನ್‌ನ ಅಭಿನವ ಅನ್ನಮಾಚಾರ್ಯರೆಂದೇ ಖ್ಯಾತರಾದ ಎಸ್. ವೆಂಕಟೇಶಮೂರ್ತಿ ಅವರ ನೇತೃತ್ವದಲ್ಲಿ ನೆರವೇರಿದ ಈ ಕಲ್ಯಾಣೋತ್ಸವವು 714ನೇ ಮಹೋತ್ಸವವಾಗಿದ್ದು, ಶೋಭಾಯಾತ್ರೆಯಿಂದ ಆರಂಭಗೊಂಡು ಷೋಡಶೋಪಚಾರ, ಪಾದಪೂಜೆ, ಕನ್ಯಾದಾನ ಸಂಕಲ್ಪ, ಮಾಂಗಲ್ಯಧಾರಣೆ, ಪುಷ್ಪಾರ್ಚನೆ, ಚಾಮರ ಸೇವೆ ಸೇರಿದಂತೆ ಎಲ್ಲಾ ಶಾಸ್ತ್ರೀಯ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಹಾಗೂ ಶಿಸ್ತಿನಿಂದ ನೆರವೇರಿದವು. ವಿಶೇಷವಾಗಿ ಏಕಾಂತ ಸೇವೆ ಭಕ್ತರ ಹೃದಯವನ್ನು ಆಳವಾಗಿ ಸ್ಪರ್ಶಿಸಿ, ಆಧ್ಯಾತ್ಮಿಕ ಪರಿಪೂರ್ಣತೆಯ ಅನುಭವ ನೀಡಿತು. ಆ ಸೇವೆಯಲ್ಲಿದ್ದ ಭಕ್ತಿ, ಶಿಸ್ತು ಮತ್ತು ಶ್ರದ್ಧೆ ಎಲ್ಲರಿಗೂ ಅನುಕರಣೀಯವಾಗಿತ್ತು. ಮೂರು ಸಾವಿರಕ್ಕೂ ಅಧಿಕ ಭಕ್ತರು ದರ್ಶನ ಪಡೆದು ಪುನೀತರಾದರು.


ಮುಸ್ಲಿಂ ರಾಷ್ಟ್ರವಾದ ಓಮಾನ್‌ನಲ್ಲಿ ಹಿಂದೂ ಧರ್ಮದ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಅನಾವರಣಗೊಳಿಸುವ ಉದ್ದೇಶದಿಂದ ಸತತ ಮೂರನೇ ಬಾರಿಗೆ ಆಯೋಜಿಸಲಾದ ಈ ಕಲ್ಯಾಣೋತ್ಸವದಲ್ಲಿ ಖ್ಯಾತ ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ, ಭಾರತದ ರಾಯಭಾರಿ, ನೇಪಾಳದ ರಾಯಭಾರಿ ಸೇರಿದಂತೆ ಅನೇಕ ದೇಶಗಳ ರಾಯಭಾರಿಗಳು, ಆ ರಾಷ್ಟ್ರದ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರು, ಗಣ್ಯ ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಶ್ರೀನಿವಾಸ ಭಕ್ತ ವೃಂದದ ಶಶಿಧರ ಶೆಟ್ಟಿ, ಹರ್ಷಿತ್ ರೈ, ಸುಬ್ರಮಣಿ ದೇಶ್ ಕುಲಕರ್ಣಿ ಹಾಗೂ ಗೌಡಗೆರೆ ರಾಮಕೃಷ್ಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಸ್ಕತ್‌ನ ಏಕಾಂತ ಸೇವೆ– ತಿರುಮಲೆಯ ದಿವ್ಯ ಶಾಂತಿಯ ಅನುಭವ

ಶ್ರೀ ಶ್ರೀನಿವಾಸನ ಆರಾಧನೆಯಲ್ಲಿ ಅತ್ಯಂತ ಮೌನ, ಶಾಂತ ಮತ್ತು ಭಕ್ತಿಭರಿತ ಕ್ಷಣವೆಂದರೆ ಏಕಾಂತ ಸೇವೆ– ಭಗವಂತನ ವಿಶ್ರಾಂತಿಯ ಸೇವೆ.


ತಿರುಮಲೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಏಕಾಂತ ಸೇವೆಯೇ ದಿನದ ಅಂತಿಮ ಪೂಜೆಯಾಗಿದ್ದು, ಗಂಟೆಗಳ ನಾದ ಮೌನಗೊಂಡು, ಬಂಗಾರದ ಬಾಗಿಲು ಮುಚ್ಚುವ ಕ್ಷಣದಲ್ಲಿ ಸ್ವಾಮಿಯನ್ನು ಹೂವಿನ ಹಾಸಿಗೆಯಲ್ಲಿ ವಿಶ್ರಾಂತಿಗೆ ಒಪ್ಪಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಭಕ್ತರ ಅಪಾರ ಸಂಖ್ಯೆಯಿಂದಾಗಿ ಈ ಅಪೂರ್ವ ಸೇವೆಯನ್ನು ನೇರವಾಗಿ ನೋಡುವ ಅವಕಾಶ ಬಹಳ ವಿರಳವಾಗಿದೆ.


ಮಸ್ಕಟ್‌ನ ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭದಲ್ಲಿ ಈ ದಿವ್ಯ ಏಕಾಂತ ಸೇವೆಯನ್ನು ಅನುಭವಿಸುವ ಅಪರೂಪದ ಭಾಗ್ಯ ಭಕ್ತರಿಗೆ ಲಭಿಸಿತು.


ಏಕಾಂತ ಸೇವೆಯ ವೇಳೆ ಅನ್ನಮಾಚಾರ್ಯರ ಕೀರ್ತನೆಗಳು ತಾಯಿಯ ಲಾಲಿಯಂತೆ ಮೃದುವಾಗಿ ಗಾಯನಗೊಂಡವು. ಬೆಳ್ಳಿಯ ಮೂರ್ತಿಯಾದ ಭೋಗ ಶ್ರೀನಿವಾಸನನ್ನು ತೊಟ್ಟಿಲಲ್ಲಿ ಪ್ರತಿಷ್ಠಾಪಿಸಿ, ಶ್ರೀಗಂಧ, ಹಾಲು ಸೇರಿದಂತೆ ವಿವಿಧ ಸಮರ್ಪಣೆಗಳೊಂದಿಗೆ ತರಿಗೊಂಡ ವೆಂಗಮಾಂಬಾ ಆರತಿ ನೆರವೇರಿತು. ತಿರುಮಲೆಯ ಶಯನ ಮಂಟಪದ ದಿವ್ಯ ಶಾಂತಿಯನ್ನು ನೇರವಾಗಿ ಅನುಭವಿಸಲು ಸಾಧ್ಯವಾಗದ ಭಕ್ತರಿಗೆ, ಮಸ್ಕತ್‌ನಲ್ಲಿ ಕಂಡ ಈ ದೃಶ್ಯಗಳು ಆ ಅನುಭವದ ಜೀವಂತ ಪ್ರತಿಬಿಂಬವಾಗಿ, ಆಧ್ಯಾತ್ಮಿಕ ಸೇತುವೆಯಾಗಿ ಪ್ರಕಾಶಿಸಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top