ಮೂಡುಬಿದಿರೆ: ಮಹಾತ್ಮಾ ಗಾಂಧೀಜಿಯ ಚಿಂತನೆಗಳು ಇಂದಿನ ಕಾಲಘಟ್ಟದಲ್ಲಿ ಪ್ರಸ್ತುತವಾಗಿದ್ದು ಯುವ ಸಮುದಾಯ ಅವುಗಳನ್ನು ಅಧ್ಯಯನ ಮಾಡಬೇಕಾಗಿದೆ. ಮಹಾರಾಷ್ಟ್ರದ ಕವಯಿತ್ರಿ ಪಂಡಿತಾ ಕ್ಷಮಾ ರಾವ್ 1948ರಲ್ಲಿ ಸಂಸ್ಕೃತದಲ್ಲಿ ಬರೆದ 'ಉತ್ತರ ಸತ್ಯಾಗ್ರಹ ಗೀತಾ' ಕಾವ್ಯವು 1931 ರಿಂದ 1944 ರವರೆಗಿನ ಸತ್ಯಾಗ್ರಹದ ಹೋರಾಟದ ಕಥನ ಒಳಗೊಂಡಿದ್ದು ಹಿರಿಯ ಸಾಹಿತಿ ಉದಯ ಕುಮಾರ್ ಹಬ್ಬು ಕನ್ನಡಕ್ಕೆ ಗದ್ಯಾನುವಾದ ಮಾಡಿದ್ದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾಗಿದೆ ಎಂದು ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ನುಡಿದರು.
ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿ (ಸ್ವಾಯತ್ತ)ನ ಕನ್ನಡ ವಿಭಾಗ ಹಾಗೂ ಗಾಂಧಿ ವಿಚಾರ ವೇದಿಕೆಗಳ ಜಂಟಿ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಉದಯ ಕುಮಾರ್ ಹಬ್ಬು ಅವರ ಅನುವಾದಿತ ಕೃತಿ 'ಉತ್ತರ ಸತ್ಯಾಗ್ರಹ ಗೀತಾ' ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಗಾಂಧೀಜಿಯ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಈ ಕೃತಿಯಲ್ಲಿ ಒಡಮೂಡಿದ್ದು ಆಧುನಿಕ ಭಾರತದ ಇತಿಹಾಸದ ಘಟನೆಗಳು ಕಾವ್ಯ ರೂಪದಲ್ಲಿ ಪ್ರಕಟವಾಗಿದೆ. ಸತ್ಯಾಗ್ರಹದ ಮಹತ್ವವನ್ನು, ಗಾಂಧೀಜಿಯ ದೃಢ ನಿಲುವುಗಳನ್ನು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ನಾಯಕರ ತ್ಯಾಗವನ್ನು ಅರಿತುಕೊಳ್ಳಲು ಈ ಕೃತಿ ಸಹಕಾರಿಯಾಗಿದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಬ್ರಿಟಿಷ್ ಆಡಳಿತ ನಿರ್ಮಿಸಿದ ಸ್ವಾರ್ಥ ಪರವಾದ ರಾಜಕೀಯ ವ್ಯವಸ್ಥೆಯನ್ನು ಮೀರಿ ಜನಪರವಾದ ಆಡಳಿತ ವ್ಯವಸ್ಥೆಯನ್ನು ಗಾಂಧೀಜೀ ರೂಪಿಸಲು ಶ್ರಮಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರ ವೇದಿಕೆಯ ಶ್ರೀಧರ್ ಜಿ. ಭಿಡೆ ಮಾತನಾಡಿ, ವರ್ತಮಾನ ಭಾರತ ಗಾಂಧೀಜಿಯವರ ಚಿಂತನೆಗಳನ್ನು ಅರಿತು ಅನುಷ್ಠಾನಗೊಳಿಸಬೇಕಾಗಿದೆ. ಗಾಂಧೀಜಿಯವರ ಚಿಂತನೆಗಳು ವಿಶ್ವಶಾಂತಿಗೆ ಪ್ರೇರಣೆ ಕೊಡಬಲ್ಲದು ಎಂದರು.
ಲೇಖಕ ಉದಯ ಕುಮಾರ್ ಹಬ್ಬು ಮಾತನಾಡಿ, ಉತ್ತರ ಸತ್ಯಾಗ್ರಹ ಗೀತಾ ಕೃತಿಯು ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಸಂಕೇತವಾಗಿದ್ದು ಓದುಗರನ್ನು ತಲುಪಬೇಕಾಗಿದೆ ಎಂದರು.
ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯ ಸ್ಥ ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಮ್ಯ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

