ಗ್ಯಾರಂಟಿ ರಾಮಣ್ಣನವರ ಆಯ್ಕೆ ವೇದಿಕೆಯ ಘನತೆ ಹೆಚ್ಚಿಸಿದೆ: ಕೊಟ್ರೇಶ್ ಎಸ್. ಉಪ್ಪಾರ್

Upayuktha
0
ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ




ಹಾಸನ: ನಾಲ್ಕೈದು ದಶಕಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಗೂ ಪ್ರಗತಿಪರ ಸಾಹಿತಿ ಗ್ಯಾರಂಟಿ ರಾಮಣ್ಣನವರ ಆಯ್ಕೆ ನಮ್ಮ ವೇದಿಕೆಯ ಘನತೆಯನ್ನು ಹೆಚ್ಚಿಸಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.


ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಕಂಚಮಾರನಹಳ್ಳಿ ಗ್ಯಾರಂಟಿ ರಾಮಣ್ಣನವರ ಸ್ವಗೃಹದಲ್ಲಿ ಅಧಿಕೃತ ಆಹ್ವಾನ ನೀಡಿ ಮಾತನಾಡಿ ಗ್ಯಾರಂಟಿ ರಾಮಣ್ಣನವರು ಜಿಲ್ಲೆ ಕಂಡಂತಹ ಸಾತ್ವಿಕ ಸ್ವಭಾವದ ಪ್ರಬುದ್ಧ ಬರಹಗಾರ, ಗಾಯಕ, ರಂಗಕರ್ಮಿ. ನೂರಾರು ಹೋರಾಟಗೀತೆಗಳನ್ನು ಬರೆದು ಸ್ವತಃ ಹಾಡಿ ರೈತ ಹಾಗೂ ಬಂಡಾಯ ಚಳವಳಿಗಳಲ್ಲಿ ರಾಜ್ಯಾದ್ಯಂತ ಭಾಗವಹಿಸಿ ನೂರಾರು ಶಿಷ್ಯರನ್ನು ಹೊಂದಿದ್ದಾರೆ. ಹಾಸನದಲ್ಲಿ ಯಾವುದೇ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿ ಅಲ್ಲಿ ಗ್ಯಾರಂಟಿ ರಾಮಣ್ಣನವರು ಹಾಜರಿರುತ್ತಾರೆ. ನಮ್ಮಂತಹ ಅನೇಕ ವ್ಯಕ್ತಿ ಹಾಗೂ ಸಂಘಟನೆಗಳಿಗೆ ಮಾರ್ಗದರ್ಶಿಯಾಗಿ ರಾಮಣ್ಣವರು ನಿರಂತರವಾಗಿ ಶಕ್ತಿಯಾಗಿ ನಿಲ್ಲುತ್ತಾರೆ ಎಂದರು.


ನಿಯೋಜಿತ ಸಮ್ಮೇಳನಾಧ್ಯಕ್ಷ ಗ್ಯಾರಂಟಿ ರಾಮಣ್ಣ ಆಹ್ವಾನ ಸ್ವೀಕರಿಸಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪ್ರಾರಂಭದಿಂದಲೂ ಎಲೆಮರೆ ಸಾಧಕರನ್ನು ಗುರುತಿಸಿ ಮುಖ್ಯ ವೇದಿಕೆಗೆ ತರುವ ಕೆಲಸವನ್ನು ಮಾಡುತ್ತಾಬಂದಿದೆ. ಕಳೆದ ಏಳೆಂಟು ವರ್ಷಗಳಿಂದಲೂ ನಾನು ವೇದಿಕೆಯೊಂದಿಗೆ ಇದ್ದೇನೆ. ಐದಾರು ದಶಕಗಳಿಂದ ಬೀದಿ ನಾಟಕ, ಜನಪರ ಚಳವಳಿಗಳು, ಹೋರಾಟಗಳು, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನಾಡುನುಡಿಗಾಗಿ ನಮ್ಮ ಕೈಲಾದಷ್ಟು ನಿರಂತರ ಸೇವೆ ಮಾಡುತ್ತಾ ಬಂದರೆ ಅವಕಾಶಗಳು ಅರಸಿಬರುತ್ತವೆ ಎನ್ನುವುದಕ್ಕೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾ ಪ್ರಥಮ ಸಮ್ಮೇಳನಕ್ಕೆ ಸರ್ವಾಧ್ಯಕ್ಷನನ್ನಾಗಿ ನನ್ನನ್ನು ನೇಮಿಸಿರುವುದು ಸಾಕ್ಷಿಯಾಗಿದೆ. ನನ್ನ ಜವಬ್ದಾರಿ ಮುಮ್ಮಡಿಗೊಂಡಿದೆ. ನನ್ನ ಹವ್ಯಾಸ ಕ್ಷೇತ್ರಗಳಲ್ಲಿ ಮತ್ತಷ್ಟು ಮಗದಷ್ಟು ಸೇವೆ ಸಲ್ಲಿಸಲು ಶಕ್ತಿ ಹೆಚ್ಚಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದರು.


ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು ಮಾತನಾಡಿ ಸಾಹಿತ್ಯ ವೇದಿಕೆ ಮೊದಲಿನಿಂದಲೂ ಸಮಾಜದ ಕಟ್ಟಕಡೆಯ ಸಾಧಕರಿಂದ ಅವಗಣನೆಗೆ ಒಳಗಾದ ಸಾಧಕರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುವ ಹಿನ್ನಲೆಯಲ್ಲಿ ಸಾಧಕರ ಪಟ್ಟಿ ಮಾಡಿಕೊಂಡು ಪರಾಮರ್ಶಿಸಿದಾಗ ಯಾವುದೇ ಪ್ರತಿಫಲಾಪೇಕ್ಷೆ ಪಡದೇ ಕಳೆದ ಐದು ದಶಕಗಳಿಗೂ ಅಧಿಕ ಸುದೀರ್ಘಾವಧಿಯಲ್ಲಿ ಅದ್ವಿತೀಯ ಸಾಧನೆಗೈದ ಗ್ಯಾರಂಟಿ ರಾಮಣ್ಣನವರನ್ನು ಆಯ್ಕೆಮಾಡಿರುವುದು ಅರ್ಹ ಹಾಗೂ ಸ್ವಾಗತಾರ್ಹವಾಗಿದೆ ಎಂದರು.


ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ಟ್ರಸ್ಟಿ ಎಚ್.ಎಸ್.ಬಸವರಾಜ್, ಹಾಸನ ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಭೀಮ ವಿಜಯ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಭವ್ಯನಾಗರಾಜ್, ವೇದಿಕೆಯ ಹಾಸನ ತಾಲ್ಲೂಕು ಕಾರ್ಯದರ್ಶಿ ಸಿ.ಎನ್.ನೀಲಾವತಿ, ಕವಯಿತ್ರಿ ಎಚ್.ಯಮುನಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top