ಸುರತ್ಕಲ್: ತುಳುನಾಡಿನ ಬಹು ಸಂಸ್ಕೃತಿಯ ಆಚರಣೆಗಳು ವಿಚಾರಗಳು ಊರಿಂದ ಊರಿಗೆ ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿರುತ್ತವೆ. ಎಲ್ಲಾ ಕ್ರಮಗಳೂ ಮಹತ್ವದ್ದಾಗಿದ್ದು ಅವುಗಳ ದಾಖಲೀಕರಣಕ್ಕೆ ಮತ್ತು ಬರವಣಿಗೆಗೆ ಯುವ ಜನತೆ ಮನಸ್ಸು ಮಾಡಬೇಕಾಗಿದೆ ಎಂದು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ನುಡಿದರು.
ಅವರು ಸರಕಾರಿ ಪದವಿ ಪೂರ್ವ ಕಾಲೇಜು, ಚೇಲೈರು ಮತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಸಂಯುಕ್ತವಾಗಿ ಆಯೋಜಿಸಿದ್ದ ಡಾ. ಇಂದಿರಾ ಹೆಗ್ಗಡೆಯವರ 'ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು' ಕೃತಿಯ ಓದು ಮತ್ತು ವಿದ್ಯಾರ್ಥಿಗಳಿಗೆ ಕೃತಿ ನೀಡಿಕೆ ಹಾಗೂ ರಾಷ್ಟ್ರ ಕವಿ ಕುವೆಂಪು ಜನ್ಮ ದಿನದ ನೆನಪು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕುವೆಂಪು ನುಡಿನಮನ ಸಲ್ಲಿಸಿದ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ತನ್ನ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳಿಂದ ಯುವ ತಲೆಮಾರಿನವರ ಮೇಲೆ ಹೆಚ್ಚು ಪ್ರಭಾವ ವನ್ನು ಕುವೆಂಪು ಬೀರಿದ್ದಾರೆ. ವಿಶ್ವ ಮಾನವ ಸಂದೇಶ, ಪ್ರಜಾಪ್ರಭುತ್ವದ, ಸರ್ವೋದಯದ, ಪ್ರಕೃತಿ ಪ್ರೇಮದ ವಿಶಿಷ್ಟ ಪರಿಕಲ್ಪನೆಗಳ ಮೂಲಕ ಕುವೆಂಪು ಚಿಂತನೆಗಳು ನಿತ್ಯ ನೂತನವಾಗಿವೆ ಎಂದರು.
ಬಾರಗೆರೆ ಬರಂಬು ಕೃತಿಯ ಕುರಿತು ಮಾತನಾಡಿದ ಸಾಹಿತಿ ಬೆನ್ನೆಟ್ ಅಮ್ಮನ್ನ ಕ್ಷೇತ್ರ ಕಾರ್ಯದ ಅನುಭವ ಕಥನವನ್ನು ಈ ಕೃತಿಯಲ್ಲಿ ವಿಶಿಷ್ಟವಾಗಿ ಕಟ್ಟಿ ಕೊಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಹಾಗೂ ಸಾಹಿತಿ ಡಾ. ಜ್ಯೋತಿ ಚೇಲೈರು ಮಾತನಾಡಿ ಕುವೆಂಪು ಅವರ ಸಾಹಿತ್ಯ ಹಾಗೂ ವಿಚಾರ ಚಿಂತನೆಗಳನ್ನು ವಿದ್ಯಾರ್ಥಿಗಳು ಅರಿತು ಕೊಳ್ಳ ಬೇಕು. ಇಂದಿರಾ ಹೆಗ್ಗಡೆ ವರ ತುಳುನಾಡಿನ ಸಂಸ್ಕೃತಿಯ ಕುರಿತಾದ ಸಂಶೋಧನೆಗಳು ಬಹು ಮುಖ್ಯವಾಗಿದ್ದು ಅದನ್ನು ಓದುವ ಅವಕಾಶ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ ಎಂದರು.
ಉಪನ್ಯಾಸಕಿ ಜಯಶ್ರೀ ಜಿ. ಸ್ವಾಗತಿಸಿದರು. ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಸದಸ್ಯೆ ಸುಜಾತ ವಂದಿಸಿದರು. ಉಪನ್ಯಾಸಕ ಚಂದ್ರನಾಥ್ ಎಂ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಶೋಭಾ ಶರ್ಮಾ, ಅಪರ್ಣ, ತ್ರಿವೇಣಿ, ಜಯಶ್ರೀ ಮತ್ತು ಸಾಹಿತಿ ಡಾ. ದಿನಕರ ಪಚ್ಚನಾಡಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

