ಸಾಧಕರು ಬೆಳಕು ನೀಡುವ ದೀಪಸ್ತಂಭಗಳು: ಡಾ. ವಸಂತಕುಮಾರ ಪೆರ್ಲ

Upayuktha
0

'ಪುರೋಹಿತರತ್ನ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು'- ನೆನಪಿನ ಸಂಪುಟ ಬಿಡುಗಡೆ 




ಪಳ್ಳತ್ತಡ್ಕ: ಸಾಧಕರು ನಾಡಿಗೆ ಬೆಳಕು ನೀಡುವ ದೀಪಸ್ತಂಭಗಳಿದ್ದಂತೆ. ಅವರ ಬದುಕು ಮುಂದಿನ ತಲೆಮಾರಿಗೆ ಮಾರ್ಗದರ್ಶನದ ಬೆಳಕು ನೀಡುತ್ತಿರುತ್ತದೆ. ಕಿರಿಯರು ಆ ಬೆಳಕಿನಲ್ಲಿ ಮುನ್ನಡೆಯುತ್ತಿರುತ್ತಾರೆ. ಇಂತಹ ಸಾರ್ಥಕ ಕೆಲಸಗಳಿಂದ ಸನಾತನತೆ ಮತ್ತು ಪರಂಪರೆ ಮುಂದುವರಿಯುತ್ತದೆ ಎಂದು ಪ್ರಸಿದ್ಧ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.


ಪಳ್ಳತ್ತಡ್ಕದ ಮುದ್ದು ಮಂದಿರದಲ್ಲಿ ಪರಮೇಶ್ವರ ಭಟ್ಟರ ವರ್ಷಾಬ್ದಿಕ ಸಮಾರಂಭದಲ್ಲಿ ಪಂಜರಿಕೆ ಗಣಪತಿ ಭಟ್ಟರು ಸಂಪಾದಿಸಿದ ಪುರೋಹಿತರತ್ನ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಎಂಬ ನೆನಪಿನ ಸಂಪುಟವನ್ನು ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು. 


ವೈದಿಕ ಕ್ಷೇತ್ರದಲ್ಲಿ  ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ದೊಡ್ಡ ಕ್ರಾಂತಿಯನ್ನು ಮಾಡಿದರು. ವೈದಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಸಾಧನೆಯ ವ್ಯಾಪ್ತಿ ದೊಡ್ಡದಾಗಿದೆ. ಅವರು ಒಳ್ಳೆಯ ವಾಗ್ಮಿ ಮತ್ತು ತಾಳಮದ್ದಳೆಯ ಅರ್ಥದಾರಿಗಳೂ ಹೌದು. ಅವರ ಸಾಧನೆಯ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಯಪಡಿಸುವುದು ಅಗತ್ಯವಾಗಿ ಆಗಬೇಕಾದ ಕೆಲಸ ಎಂದು ಡಾ. ಪೆರ್ಲ ಹೇಳಿದರು.


ಕೃತಿಯಲ್ಲಿ ಪರಮೇಶ್ವರ ಭಟ್ಟರ ವ್ಯಕ್ತಿತ್ವ ಮತ್ತು ಸಾಧನೆಯ ಬಗ್ಗೆ ಬೇರೆ ಬೇರೆ ಲೇಖಕರು ಬರೆದ ಲೇಖನಗಳಿವೆ. ಇಂತಹ ಸಾಧಕ ಮಹನೀಯರ ಬಗ್ಗೆ ಕೃತಿ ಪ್ರಕಟಿಸುವುದು ಸೂಕ್ತ ಎಂದು ಮನಗಂಡು ಈ ಸಾಹಸಕ್ಕೆ ಕೈಹಾಕಿದೆವು ಎಂದು ಸಂಪಾದಕರಾದ ಪಂಜರಿಕೆ ಗಣಪತಿ ಭಟ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.  


ಹಿರಿಯ ಪುತ್ರ ಸುಬ್ರಹ್ಮಣ್ಯ ಭಟ್ ಅವರು ತಂದೆಯ ಬಗೆಗಿನ ತನ್ನ ನೆನಪುಗಳನ್ನು ಹಂಚಿಕೊಂಡರು. 


ವೇದಿಕೆಯಲ್ಲಿ ಇನ್ನಿಬ್ಬರು ಪುತ್ರರಾದ ಶಿವಶಂಕರ ಭಟ್ ಮತ್ತು ಶಶಿಧರ ಭಟ್ ಉಪಸ್ಥಿತರಿದ್ದರು. ಗಣ್ಯರಾದ ಕುರಿಯತ್ತಡ್ಕ ವಿಶ್ವೇಶ್ವರ ಶಾಸ್ತ್ರಿ, ಮಿತ್ತೂರು ಸದಾಶಿವ ಭಟ್, ಮಡಪ್ಪಾಡಿ ಕೃಷ್ಣ ಭಟ್, ಮಿಂಚಿನಡ್ಕ ಪುರುಷೋತ್ತಮ ಭಟ್, ಕರುವಜೆ ಕೇಶವ ಜೋಯಿಸ ಮತ್ತು ಪಕಳಕುಂಜ ಶಂಭು ಭಟ್ಟ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಳೂರು ಕೃಷ್ಣ ಭಟ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top