ವಿದ್ಯಾರ್ಥಿಗಳೆಂದರೆ ತಾಯಿ ಭಾರತಿಯ ಹಣತೆಯನ್ನು ಬೆಳಗುವ ದೀಪಗಳು: ಎನ್. ಆರ್. ದಾಮೋದರ ಶರ್ಮಾ

Chandrashekhara Kulamarva
0


  • ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎರಡನೇ ದಿನದ ವಾರ್ಷಿಕೋತ್ಸವ  "ಪರಂಪರಾ ದರ್ಶನಂ"
  • ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ 
  • ಸಂಸ್ಥೆಯ 60ನೇವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಲಾಂಛನದ ಬಿಡುಗಡೆ


ಪುತ್ತೂರು: ಭಾರತೀಯ ಪರಂಪರೆ ಕಲ್ಲು-ಮಣ್ಣು, ಗಿಡ-ಮರಗಳನ್ನು ಗೌರವಿಸುವ, ಪ್ರೀತಿಸುವ ಸಂಸ್ಕಾರ-ಸಂಸ್ಕೃತಿಯನ್ನು ಧಾರೆ ಎರೆದಿದೆ. ಜಗತ್ತಿನ ಯಾವ ಮೂಲೆಯಿಂದ ಯಾರೇ ಈ ನೆಲವನ್ನು ಆಶ್ರಯಿಸಿ ಬಂದರೂ ಅವರವರ ಸಂಸ್ಕೃತಿಯನ್ನು ಗೌರವಿಸಿ ಬದುಕು ಕಟ್ಟಿಕೊಳ್ಳಲು ಅವಕಾಶ ಒದಗಿಸಿಕೊಟ್ಟ ಉದಾರ ಮನಸ್ಸಿನ ಭವ್ಯ ಬೀಡು ಭಾರತ ಎಂದು ಖ್ಯಾತ ವಾಗ್ಮಿಗಳಾದ ಎನ್.ಆರ್. ದಾಮೋದರ ಶರ್ಮಾ, ಮೂಡಬಿದಿರೆ ಇವರು ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೀರರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ “ಪರಂಪರಾ ದರ್ಶನಂ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಎಂದರೆ ತಾಯಿ ಭಾರತಿಯ ಹಣತೆಯನ್ನು ಬೆಳಗುವ ದೀಪಗಳು. ವಿದ್ಯಾರ್ಥಿಗಳು ಬದುಕಿನಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಸಂಪೂರ್ಣ ಆತ್ಮಸ್ಥೈರ್ಯದೊಂದಿಗೆ ಮುನ್ನಡೆದಾಗ ಸುಂದರ ಬದುಕು ಕೈ ಸೇರುತ್ತದೆ. ಪ್ರಾಪಂಚಿಕ ಕಾಮನೆಗಳನ್ನು ಜಯಿಸುವ ಯಾರೇ ಆದರೂ ಮುಂದೊಂದು ದಿನ ಜಗತ್ತಿನ ಗೌರವವನ್ನು ಗಳಿಸುತ್ತಾರೆ. ಜಗತ್ತಿನಲ್ಲಿ ಸಾತ್ವಿಕತೆಗೆ, ಸನ್ಮಾರ್ಗದೆಡೆಗೆ ನಡೆಸಬಲ್ಲ ಆಲೋಚನೆಗಳಿಗೆ ಮಾನ್ಯತೆ ಇದೆ. ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ, ದೇಶಪ್ರೇಮವನ್ನು ಉದ್ದೀಪನಗೊಳಿಸುವ  ನಿಲುವಿನೊಂದಿಗೆ ಟೊಂಕ ಕಟ್ಟಿ ನಿಂತ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾರ್ಥಿಗಳು ಭಾಗ್ಯಶಾಲಿಗಳು ಎನ್ನುತ್ತಾ, ವಿದ್ಯಾರ್ಥಿಗಳ ಏರು ಯೌವನದ ಉತ್ಸಾಹ, ಬದುಕಿಗೆ ಕಂಟಕವಾಗದಿರಲಿ ಎಂದು ಹಿತ ನುಡಿದರು.


ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್. ಪಿ ಮಾತನಾಡುತ್ತಾ, ಶೈಕ್ಷಣಿಕ ಕ್ಷೇತ್ರವನ್ನು ವ್ಯಾಪಾರ ಮನೋಭಾವದಿಂದ ನೋಡುತ್ತಿರುವ ಇಂದಿನ ಕಾಲದಲ್ಲಿ ನಮ್ಮ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಕಡೆಗೆ ಗಮನಹರಿಸುವ ವೈಶಿಷ್ಟ್ಯಪೂರ್ಣವಾದ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ. ಆದರ್ಶಪೂರ್ಣ ವಿದ್ಯಾಸಂಸ್ಥೆಗಳನ್ನು ಕಲೆಹಾಕಿ ಕಟ್ಟಿ ಬೆಳೆಸಿದ ಹಿರಿಯರು, ನಿಸ್ವಾರ್ಥ ಸೇವೆ ಸಲ್ಲಿಸಿದ ಹಿರಿಯ ಉಪನ್ಯಾಸಕ ವೃಂದ ವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಗೌರವದಿಂದ ನೆನಪಿಸಿಕೊಳ್ಳಬೇಕು. ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ವಿದ್ಯಾಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ   ವಿದ್ಯಾರ್ಜನೆ ಪಡೆದುಕೊಳ್ಳಬೇಕು ಎಂದು ಆಶಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ .ಪಿ  ಮಾತನಾಡುತ್ತಾ, ಇಂದಿನ ವಿದ್ಯಾರ್ಥಿ ಸಮೂಹದಲ್ಲಿ ಕೇಳುವ ಮನಸ್ಥಿತಿ ದುರ್ಬಲವಾಗಿದೆ. ಆಸಕ್ತಿ, ಶ್ರದ್ಧೆಗಳು ಕ್ಷೀಣವಾಗಿದೆ. ಹದಿವಯಸ್ಸುಅತ್ಯಂತದುರ್ಬಲವಾದ ಹಂತ; ಅಂತೆಯೇ ಶಕ್ತಿಶಾಲಿಯಾದ ವಯಸ್ಸು ಕೂಡಾ ಹೌದು. ಇವೆರಡನ್ನು ಸರಿದೂಗಿಸುವ ಮನಸ್ಥಿತಿಯನ್ನು ವಿದ್ಯಾರ್ಥಿ ಸಮೂಹ ಬೆಳೆಸಿಕೊಂಡಲ್ಲಿ ಅಪೂರ್ವ ಚೇತನಗಳು ಸಮಾಜದಲ್ಲಿ ಪ್ರಕಟಗೊಳ್ಳುವುದಕ್ಕೆ ಸಾಧ್ಯ ಎಂದು ನುಡಿದರು.  ಈ ಸಂದರ್ಭದಲ್ಲಿ ಕಾಲೇಜು ಆಡಳಿತಮಂಡಳಿಯ  ಕೋಶಾಧಿಕಾರಿಗಳಾದ ಸಚಿನ್ ಶೆಣೈ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹರಿಣಾಕ್ಷಿ ಜೆ ಶೆಟ್ಟಿ ಉಪಸ್ಥಿತರಿದ್ದು ಶುಭಹಾರೈಸಿದರು. 


ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ. ಎಂ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಉಪನ್ಯಾಸಕಿಯರಾದ  ಕವಿತಾ ವಂದಿಸಿ,  ಭಾಗ್ಯಶ್ರೀ ಬಿ. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. 


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top